Wednesday, June 18, 2014

ಥೈಲ್ಯಾಂಡ್ ಬಿಕ್ಕಟ್ಟು - ಒಂದು ಒಳನೋಟ

http://www.prajavani.net/article/%E0%B2%A5%E0%B2%BE%E0%B2%AF%E0%B3%8D%E0%B2%B2%E0%B3%86%E0%B2%82%E0%B2%A1%E0%B3%8D%E2%80%8C-%E0%B2%AC%E0%B2%BF%E0%B2%95%E0%B3%8D%E0%B2%95%E0%B2%9F%E0%B3%8D%E0%B2%9F%E0%B3%81-%E0%B2%92%E0%B2%B3%E0%B2%97%E0%B2%BF%E0%B2%A8%E0%B2%B5%E0%B2%B0%E0%B3%8A%E0%B2%AC%E0%B3%8D%E0%B2%AC%E0%B2%B0-%E0%B2%A8%E0%B3%8B%E0%B2%9F

ಥೈಲ್ಯಾಂಡ್ ಬಿಕ್ಕಟ್ಟಿನ ಕುರಿತಾಗಿ ಬರೆದ ಲೇಖನವನ್ನು ಪ್ರಕಟಿಸಿದ ಪ್ರಜಾವಾಣಿಗೆ ಕೃತಜ್ನತೆಗಳು. 
ನನ್ನ ಬರಹದ ಮೂಲ ಪ್ರತಿಯನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. 


ಕಳೆದ ತಿಂಗಳು, ಮೇ ೨೨. ನಾನು ಪ್ಯಾರಿಸ್ ನಲ್ಲಿ ಕಾರ್ಯಾಗಾರವೊಂದರಲ್ಲಿ ಭಾಗವಹಿಸುತ್ತಾ ಇದ್ದೆ. ಬ್ಯಾಂಕಾಕಿನ ಸಹೋದ್ಯೋಗಿಯಿಂದ ಮೊಬೈಲ್ ಕರೆ ಬಂತು; ಉತ್ತರಿಸಲಾಗಲಿಲ್ಲ. ಇನ್ನೆರಡು ನಿಮಿಷಕ್ಕೆ ಸಂದೇಶ ಬಂತು - ’ಥೈಲ್ಯಾಂಡಿನಲ್ಲಿ ತುರ್ತುಪರಿಸ್ಥಿತಿ ಹೇರಿದ್ದಾರೆ; ನಿನ್ನ ಹೆಂಡತಿ ಹಾಗೂ ಮಗಳಿಗೆ ತೀರಾ ಅಗತ್ಯದ ಹೊರತಾಗಿ ವಸತಿ ಸಮುಚ್ಚಯದಿಂದ ಹೊರಹೋಗದಂತೆ ತಿಳಿಸು. ಅಗತ್ಯವಿದ್ದರೆ ನಮ್ಮನ್ನು ಸಂಪರ್ಕಿಸಲು ಹೇಳು. ನಿನಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಳುಹಿಸುತ್ತಿರುತ್ತೇವೆ’ ಅಂತ. ಭಾರತದ ತುರ್ತುಪರಿಸ್ಥಿತಿಯ ಕಥೆಗಳನ್ನು ಕೇಳಿತಿಳಿದಿದ್ದ ನನಗೆ ಆತಂಕವಾಯಿತು. ಅಷ್ಟರಲ್ಲಿ ಮನೆಯಿಂದ ಬಂದ ’ನಾವು ಸುರಕ್ಷಿತವಾಗಿದ್ದೇವೆ, ಚಿಂತಿಸಬೇಕಾಗಿಲ್ಲ’ ಎಂಬ ಸಂದೇಶ ಮನಸ್ಸಿಗೆ ಸಮಾಧಾನ ತಂದಿತು. ಕಾರ್ಯಾಗಾರ ಮುಗಿಸಿ ಮೇ ೨೪ ರ ಬೆಳಗ್ಗೆ ಪ್ಯಾರಿಸ್ ನಿಂದ ಬ್ಯಾಂಕಾಕಿಗೆ ಬಂದಿಳಿದ ನನಗೆ ಎಲ್ಲೂ ವಿಶೇಷ ಬದಲಾವಣೆಗಳು ಕಾಣಲಿಲ್ಲ. ತಿಂಗಳಿಗೆ ಎರಡು ಮೂರು ಬಾರಿ ಬ್ಯಾಂಕಾಕಿನ ಸುವರ್ಣಭೂಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಓಡಾಡುವ ನನಗೆ ಎಲ್ಲೂ ಮಾಮೂಲಿಗಿಂತ ಹೆಚ್ಚಿನ ಪೋಲಿಸರಾಗಲೀ, ಸೈನಿಕರಾಗಲೀ ಕಾಣಲಿಲ್ಲ! ರಸ್ತೆಯಲ್ಲಿ, ಮುಖ್ಯವಾಗಿ ಕೆಲ ಜಂಕ್ಷನ್ ಗಳಲ್ಲಿ ಸ್ವಲ್ಪ ಹೆಚ್ಚು ಸುರಕ್ಷತೆ ಕಂಡುಬಂತೇ ವಿನಃ ಬೇರೇನೂ ಬದಲಾವಣೆ ಕಾಣಲಿಲ್ಲ. ವಾಹನ ದಟ್ಟಣೆ ಮಾಮೂಲಿನಂತೆಯೇ ಇತ್ತು. ನನ್ನ ಕಛೇರಿ ಬ್ಯಾಂಕಾಕಿನ ಮುಖ್ಯ ರಸ್ತೆ ’ಬಿಸಿನೆಸ್ ಸ್ಟ್ರೀಟ್’ ಎಂದೇ ಕರೆಯ್ಪಡುವ ಸಿಲೊಮ್ ರಸ್ತೆಯಲ್ಲಿದೆ. ಸೇನಾಡಳಿತ ಆರಂಭವಾದ ದಿನದಿಂದ ಇಂದಿನವರೆಗೂ ನಮ್ಮ ಕಛೇರಿ ಕೆಲಸಗಳು ನಿರಾತಂಕವಾಗಿ ಸಾಗಿವೆ. ಸಾಮಾನ್ಯ ಜನರ ಬದುಕು ಆತಂಕದಿಂದ ಕೂಡಿಲ್ಲ! ಮುಖ್ಯವಾಗಿ ಮಧ್ಯಮವರ್ಗದವರಲ್ಲಿ ಒಂದು ಹೊಸ ಬೆಳಕು ಕಾಣುವ ಆಕಾಂಕ್ಷೆ ಮೂಡಿದೆ!

ಜೂನ್ ೧೫ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಥಾಮಸ್ ಫ಼ುಲ್ಲರ್ ಅವರ ಲೇಖನವನ್ನೋದಿದರೆ ಥೈಲ್ಯಾಂಡಿನ ಜನ ನಿತ್ಯ ಭಯದಿಂದ ಏಳುತ್ತಾರೇನೋ ಎಂದೆನಿಸಬೇಕು! ಕುತೂಹಲದಿಂದ ಅವನ ಇನ್ನೂ ಕೆಲವು ಲೇಖನಗಳನ್ನು ಓದಿದೆ. ಥೈಲ್ಯಾಂಡಿನ ರಾಜಕೀಯ ಬಿಕ್ಕಟ್ಟಿಗೆ ಅಗತ್ಯಕ್ಕಿಂತ ಹೆಚ್ಚೇ ಬಣ್ಣ ಲೇಪಿಸಿದ್ದು ಕಂಡುಬಂತು. ’ಜನರೆಲ್ಲಾ ಭಯಭೀತರಾಗಿ ಓಡಾಡುತ್ತಿದ್ದಾರೆ, ನಾಗರಿಕರಲ್ಲಿ ಮನೆಮಾಡಿರುವ ಭಯವನ್ನು ಹೋಗಲಾಡಿಸಲು ಅರೆಬರೆ ಬಟ್ಟೆತೊಟ್ಟ ಹುಡುಗಿಯರಿಂದ ರಸ್ತೆಗಳಲ್ಲಿ ಮನರಂಜನಾ ಕಾರ್ಯಕ್ರಮವನ್ನು ಸೇನೆಯವರು ಆಯೋಜಿಸಿದ್ದಾರೆ’ ಎಂದು ಥಾಮಸ್ ಬರೆದಿರುವುದು ಸತ್ಯಕ್ಕೆ ದೂರವಾದ ಮಾತು! ನಾನು ಮೊದಲೇ ಹೇಳಿದಂತೆ ಜನ ಈಗ ಹೆಚ್ಚು ಸಮಾಧಾನದಿಂದಿದ್ದಾರೆ. ಒಳ್ಳೆಯ ಸ್ಥಿರ ಪ್ರಜಾತಂತ್ರ ಆಡಳಿತ ಬೇಗನೇ ಬರಲಿದೆ ಎಂಬ ಆಶಯದಿಂದಿದ್ದಾರೆ. ಇನ್ನು ರಸ್ತೆಯಬದಿಯ ಅರೆಬಟ್ಟೆಯ ನೃತ್ಯ ಶುದ್ಧ ಸುಳ್ಳು! ಥೈಲ್ಯಾಂಡಿನಲ್ಲಿ ಸೆಕ್ಸ್ ಟೂರಿಸಮ್ ಇದೆ, ಸ್ಟ್ರಿಪ್ ಬಾರ್ ಗಳು, ಡ್ಯಾನ್ಸ್ ಬಾರ್ ಗಳು ಇತ್ಯಾದಿ ಇವೆ ನಿಜ; ಆದರೆ ಇವು ನಡೆಯುವ ನಿರ್ದಿಷ್ಟ ಜಾಗಗಳಿವೆ, ನಿರ್ದಿಷ್ಟ ರಸ್ತೆಗಳಿವೆ! ಅಂತಹ ಜಾಗಗಳಲ್ಲಿ ಅಲ್ಲಿನ ಕಾರ್ಯಕ್ರಮಗಳು ದಿನನಿತ್ಯವೂ ಸಾಗುತ್ತಿರುತ್ತವೆ! ಅಷ್ಟೇ ಅಲ್ಲ ಅಂತಹ ಸ್ಥಳಗಳು ವಿದೇಶೀ ಪ್ರವಾಸಿಗರಿಂದಲೇ ತುಂಬಿರುತ್ತವೆ ಎಂಬುದೂ ಅಷ್ಟೇ ಸತ್ಯ! ಸೇನಾಡಳಿತ ಬಂದು ಕರ್ಫ್ಯೂ ಹೇರಲ್ಪಟ್ಟಾಗ ಈ ವ್ಯವಹಾರಗಳು ಕೆಲ ದಿನಗಳ ಕಾಲ ನಿಂತವು. ಕರ್ಫ್ಯೂ ಸಡಿಲವಾಗುತ್ತಿದ್ದಂತೆ ವಿದೇಶೀ ಪ್ರವಾಸಿಗರ ಮನರಂಜನೆ ಮತ್ತೆ ಪ್ರಾರಂಭವಾಗಿದೆ! ಥಾಯ್ ಜನರ ಭಯ ಹೋಗಿಸುವುದಕ್ಕೆ ಅಗತ್ಯವಿರುವುದು ಇಂತಹ ನೃತ್ಯಗಳಲ್ಲ, ಅವರಿಗೆ ಬೇಕಿರುವುದು ಭ್ರಷ್ಟಾಚಾರ ರಹಿತ ಆಡಳಿತ!

ಈ ವರ್ಷದ ಪ್ರಾರಂಭದಲ್ಲಿ ಥೈಲ್ಯಾಂಡಿನಲ್ಲಿ ಆಡಳಿತವಿರೋಧಿ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಥೈಲ್ಯಾಂಡಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ರಂಗು ಹಚ್ಚಿ ವರದಿ ಮಾಡುವುದನ್ನು ಗಮನಿಸಿದ್ದೇನೆ. ಮಾಧ್ಯಮ ದಿಗ್ಗಜರೆನಿಕೊಂಡಿರುವ ಬಿ.ಬಿ.ಸಿ ಹಾಗೂ ಸಿ.ಎನ್.ಎನ್. ಇದನ್ನೇ ಮಾಡುತ್ತಾ ಬಂದಿವೆ. ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳು ಎಲ್ಲೋ ಒಂದು ಸರಕಾರಿ ಕಛೇರಿಯ ಮುಂದೆ ನಡೆದ ಕಲ್ಲು ತೂರಾಟವನ್ನು ದಿನವಿಡೀ ತೋರಿಸುತ್ತಾ ಇಡೀ ಬ್ಯಾಂಕಾಕೇ ಪ್ರತಿಭಟನೆಯಿಂದ ಮುಚ್ಚಿಹೋಯಿತೆಂದು ಭಾಸವಾಗುವಂತೆ ತೋರುತ್ತಿದ್ದರೆ ಅದೇ ಬ್ಯಾಂಕಾಕಿನ ಮುಖ್ಯರಸ್ತೆಗಳಲ್ಲಿ (ಪ್ರತಿಭಟನೆಯ ಆರು ಸ್ಥಳಗಳನ್ನು ಹೊರತುಪಡಿಸಿ) ವಾಹನಗಳ ಓಡಾಟ ವ್ಯವಹಾರಗಳು ಎಂದಿನಂತೆ ಸಾಗಿತ್ತು. ಪ್ರತಿಭಟನಾ ಸ್ಥಳಗಳಲ್ಲಿ ವಾಹನ ಸಂಚಾರ ನಿಂತಿತೇ ಹೊರತು ಮೆಟ್ರೋ, ಮೋನೋ ರೈಲು ಓಡಾಟ ನಿಲ್ಲಲಿಲ್ಲ. ಅಂತರರಾಷ್ಟ್ರೀಯ ಮಾಧ್ಯಮಗಳು, ಅಂತರರಾಷ್ಟ್ರೀಯ ಬುದ್ಧಿಜೀವಿಗಳು ಅಮೆರಿಕನ್ ಯಾ ಯುರೋಪಿಯನ್ ದೃಷ್ಟಿಕೋನದಿಂದಲೇ ಇಡೀ ವಿಶ್ವನ್ನು ನೋಡುವುದು, ಅಮೆರಿಕನ್/ಯುರೋಪಿಯನ್ ಸಹಭಾಗಿತ್ವದಿಂದಲೇ ಎಲ್ಲಾ ದೇಶಗಳ ಬಿಕ್ಕಟ್ಟನ್ನು ಸರಿಪಡಿಸುತ್ತೇವೆಂಬ ಭಾವನೆ ಹೊಂದಿರುವುದು ವಿಪರ್ಯಾಸ. ಇವರು ನೆಲದ ಜನರ ಮನಸ್ಸು, ಹಿನ್ನೆಲೆ, ಸಂಸ್ಕೃತಿಯನ್ನೂ ಕೊಂಚ ಅರ್ಥೈಸಿಕೊಳ್ಳಬೇಕು.

ಜನವರಿ ೧೩, ೨೦೧೪ ರಂದು ಸುತೇಪ್ ತೌಗ್ಸುಬಾನ್ ನೇತ್ರತ್ವದಲ್ಲಿ ಬ್ಯಾಂಕಾಕಿನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಆರಂಭವಾದಾಗಲೂ ಜನರ ದೈನಂದಿನ ಬದುಕಿನಲ್ಲಿ ಬದಲಾವಣೆಯ ಅವಶ್ಯಕತೆ ಬರಲಿಲ್ಲ. ಅದು ಶಾಂತಿಯುತ ಪ್ರತಿಭಟನೆಯಾಗಿತ್ತು. ಜನವರಿ ೧೩ರಿಂದ ಎಪ್ರಿಲ್ ೧೦ವರೆ ಬ್ಯಾಂಕಾಕಿನ ಆರು ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಹಗಲು ರಾತ್ರಿ ನಡೆದ ಪ್ರತಿಭಟನೆಯಲ್ಲಿ ಕೇವಲ ಒಂದೆರಡು ಹೇಳಬಹುದಾದ ಹಿಂಸೆಯ ಘಟನೆಗಳು ಕಂಡುಬಂದವು. ಆ ಹಿಂಸೆಯೂ ಪ್ರತಿಭಟನಾಕಾರರಿಂದ ನಡೆದಿದ್ದಲ್ಲ, ಸರಕಾರದ ಬೆಂಬೆಲಿಗರಿಂದ ನಡೆದದ್ದು. ಪ್ರತಿಭಟನೆಯ ಸ್ವರೂಪ ಆಕರ್ಷಕವಾಗಿತ್ತು; ಅಲ್ಲೊಂದು ಜಾತ್ರೆಯ ವಾತಾವರಣವಿತ್ತು! ಪ್ರತಿಭಟನಾಕಾರರು ಹಾಕಿದ ವೇದಿಕೆಯ ಮೇಲೆ ಭಾಷಣಗಳಷ್ಟೇ ಅಲ್ಲ ಸಂಗೀತ ನೃತ್ಯಗಳು ನಡೆಯುತ್ತಿದ್ದವು. ಅದರ ಸುತ್ತಲೂ ಹಲವಾರು ಅಂಗಡಿಗಳು. ಅಲ್ಲಿ ಪ್ರತಿಭಟನಾಕಾರರಿಗೆ ಅಗತ್ಯದ ಆಹಾರದ ಮಾರಾಟ, ಹಣ್ಣುಗಳ ಮಾರಾಟ, ಥಾಯ್ ಧ್ವಜದ ಚಿತ್ರವಿರುವ ಹಲವಾರು ನಿತ್ಯ ಉಪಯೋಗದ ವಸ್ತುಗಳು ಮತ್ತು ಆಟಿಕೆಗಳ ಮಾರಾಟ ನಡೆಯುತ್ತಿದ್ದವು. ಪ್ರಮುಖ ಭಾಷಣಗಳ ಸಮಯದಲ್ಲಿ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ಸೂಚಿಸಲು ಸುತ್ತಮುತ್ತಲ ಕಛೇರಿಗಳಿಂದ ಉದ್ಯೋಗಿಗಳು, ಶಾಲಾಕಾಲೇಜುಗಳಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ವರ್ತಕರು ಒಂದೆರಡು ಗಂಟೆಗಳ ಕಾಲ ಪ್ರತಿಭಟನೆಯ ಸ್ಥಳಕ್ಕೆ ಹೋಗಿ ಭಾಗವಹಿಸುತ್ತಿದ್ದರು. ಸೊಂಕ್ರಾನ್ ಹಬ್ಬ (ಥಾಯ್ ಹೊಸವರ್ಷ) ಪ್ರಾರಂಭವಾದಂದಿನಿಂದ ಕಳೆದ ತಿಂಗಳು ಸೇನಾಡಳಿತ ಬರುವವರೆಗೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಪ್ರತಿಭಟನೆಯನ್ನು ಲುಂಪಿನಿ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು!

ಪ್ರತಿಭಟನೆಗಳು ಶಾಂತಿಯುತವಾಗಿ ನಡೆದರೂ ಅವರ ಬೇಡಿಕೆ ರಾಜತಾಂತ್ರಿಕವಾಗಿ ಒಂದು ದೊಡ್ಡ ಬಿಕ್ಕಟ್ಟಾಯಿತು. ಅವರ ಬೇಡಿಕೆ ಪ್ರಜಾತಾಂತ್ರಿಕ ಪರಿಹಾರವಾಗಿರಲಿಲ್ಲ. ಪ್ರಧಾನಿ ಇಂಗ್ಲಕ್ ಹಾಗೂ ಪ್ರತಿಭಟನೆಯ ನಾಯಕನಾಗಿದ್ದ ಸುತೇಪ್ ನಡುವೆ ಮುಕ್ತ ಚರ್ಚೆ ನಡೆಯಲಿಲ್ಲ. ಹಾಗೆ ನೋಡಿದರೆ ಸೇನಾಡಳಿತವನ್ನು ಜನವರಿಯಲ್ಲೇ ಹೇರಬಹುದಿತ್ತು. ಆದರೆ ಸೇನಾನಾಯಕ ಪ್ರಯುತ್ ರಾಜಕೀಯ ಬಿಕ್ಕಟ್ಟು ಪ್ರಬಲವಾದಾಗಿನಿಂದಲೂ ’ಮಾತುಕತೆಯ ಮೂಲಕ ದೇಶದ ಹಿತಕ್ಕೆ ಧಕ್ಕೆಯಾಗದಂತಹ ಒಂದು ಪರಿಹಾರ ಹುಡುಕಿ’ ಎಂದು ಹೇಳುತ್ತಲೇ ಬಂದಿದ್ದಾನೆ. ’ಯಾವುದೇ ಸಂದರ್ಭದಲ್ಲಿಯೂ ಸೇನೆಯು ಜನರ ಹಿತ ಕಾಪಾಡಲು ಆದ್ಯತೆ ಕೊಡುತ್ತದೆ’ ಇದು ಪ್ರಯುತ್ ನಿರಂತರವಾಗಿ ಹೇಳಿಕೊಂಡು ಬಂದಿರುವ ಮಾತು. ಥೈಲ್ಯಾಂಡಿನ ಸರ್ವೋಚ್ಛ ನ್ಯಾಯಾಲಯ ಅಧಿಕಾರದಿಂದ ಕೆಳಗಿಳಿಯುವಂತೆ ಆದೇಶ ನೀಡಿದ ನಂತರವೂ ಇಂಗ್ಲಕ್ ಅಧಟುತನ ತೋರಿದಾಗ ಸೇನಾಡಳಿತ ಹೇರಲ್ಪಟ್ಟಿತು ಎಂಬುದನ್ನು ಮರೆಯಬಾರದು. ಇಂಗ್ಲಕ್ ಅಥವಾ ಅವಳ ಅಣ್ಣ ಉಚ್ಛಾಟಿತ ಮಾಜಿ ಪ್ರಧಾನಿ ತಕ್ಸಿನ್ ಸರಕಾರಕ್ಕೆ ರೈತರ ದೊಡ್ಡ ಬೆಂಬಲ ಇದ್ದುದು ನಿಜ. ಆದರೆ ಇಂದು ಅದು ಕಡಿಮೆಯಾಗುತ್ತಾ ಇದೆ. ರೈತರು ಸರಕಾರದಿಂದ ಬಾಕಿ ಹಣ ಬರದೆ ಬಸವಳಿದಿದ್ದಾರೆ, ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗ ಅಣ್ಣ-ತಂಗಿಯರ ಭ್ರಷ್ಟ ಆಡಳಿತ ನೋಡಿ ಸುಸ್ತಾಗಿದ್ದಾರೆ. ಹಾಗೆಂದು ಇಂಗ್ಲಕ್ ಚಿನವತ್ರಾಗೆ ಬೆಂಬಲಿಗರೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಸರಕಾರದ ಪ್ರಮುಖರ ಬಂಧನವಾಗಿದೆ, ಪಲಾಯನಗೈದವರ ಮೇಲೆ ನಿರ್ಬಂಧ ಹೇರಲ್ಪಟ್ಟಿದೆ. ಆದರೆ ಜನರ ಸಂಪೂರ್ಣ ಸ್ವಾತಂತ್ರ್ಯ ಕಳೆದುಹೋಗಿದೆ ಎಂದು ಹೇಳಲಾಗದು. ಇವತ್ತಿಗೂ ಬ್ಯಾಂಕಾಕ್ ಪೋಸ್ಟ್ (ಥೈಲ್ಯಾಂಡಿನ ಪ್ರಮುಖ ಪತ್ರಿಕೆ) ಪತ್ರಿಕೆಯಲ್ಲಿ ಪರ / ವಿರೋಧ ಅಭಿಪ್ರಾಯಗಳೆರಡೂ ಓದಸಿಗುತ್ತದೆ! ಆದಷ್ಟು ಬೇಗ ಪ್ರಜಾತಂತ್ರ ಪುನರ್ ಸ್ಥಾಪಿಸವುದಾಗಿ ಸೇನಾಧ್ಯಕ್ಷ ಹೇಳುತ್ತಿದ್ದಾನೆ. ನಿವೃತ್ತಿಯ ಅಂಚಿನಲ್ಲಿರುವ ಸೇನಾಧ್ಯಕ್ಷನೇ ಥೈಲ್ಯಾಂಡಿನ ಮುಂದಿನ ಪ್ರಧಾನಿಯಾಗಿ ಸ್ವಚ್ಛ ಆಡಳಿತದೊಂದಿಗೆ ದೇಶಕ್ಕೆ ಹೊಸ ಬೆಳಕು ನೀಡಬಹುದೆಂಬ ಆಶಯವೂ ನನ್ನ ಕೆಲ ಥಾಯ್ ಮಿತ್ರರಲ್ಲಿದೆ!

ಸಮೀರ ಸಿ. ದಾಮ್ಲೆ

ಬ್ಯಾಂಕಾಕ್

No comments:

Post a Comment