Tuesday, August 18, 2015

ಲೇಖನಿಗೆ ಮಸಿ ತುಂಬುವ ಪಾಠ ಮಾಡುತ್ತಾ...



ಮಾಧ್ಯಮದ ಲೇಖನಿಗೆ ಮಸಿ ಕೊರತೆ ಬಿದ್ದಿದೆಯೇ?’ ಎಂಬ ಲೇಖನದಲ್ಲಿ (ಪ್ರಜಾವಾಣಿ ೧೬ ಆಗೋಸ್ಟ್) ಪದ್ಮರಾಜ ದಂಡಾವತಿಯವರು ಮಾಧ್ಯಮ ಶಿಕ್ಷಣದಲ್ಲಿರುವ ಕೊರತೆಗಳನ್ನು ಎತ್ತಿ ತೋರಿಸಿದ್ದಾರೆ. ಈ ಸಮಸ್ಯೆ ಕೇವಲ ಮಾಧ್ಯಮ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದು ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಸಮಸ್ಯೆಯಾಗಿದೆ. ಉನ್ನತ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ವೃತ್ತಿ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣಕ್ಕೂ ಇದೇ ಕ್ಯಾನ್ಸರ್ ಹರಡಿದೆ.

ನಮ್ಮಲ್ಲಿರುವ ಮೊದಲ ಸಮಸ್ಯೆ - ನಮ್ಮ ಶಿಕ್ಷಣ ವ್ಯವಸ್ಥೆ ಇನ್ನೂ ಲೇಖನಿಗೆ ಮಸಿ ತುಂಬುವುದನ್ನೇ ಹೇಳಿ ಕೊಡುತ್ತಿದೆ! ಲೇಖನಿಗೆ ಮಸಿ ತುಂಬುವ ಕಾಲ ಹೋಗಿ ಅದೆಷ್ಟೋ ವರ್ಷಗಳಾಯಿತು. ಹೆಚ್ಚೇಕೆ ಮಾರುಕಟ್ಟೆಯಲ್ಲಿ ಮಸಿ ತುಂಬಬಹುದಾದ ಲೇಖನಿ ಹಾಗೂ ತುಂಬಲು ಮಸಿ ಎರಡೂ ಸಿಗುವುದೇ ಇಲ್ಲ. ಅವುಗಳ ತಯಾರಿ ನಿಂತು ದಶಕವೇ ಕಳೆಯಿತು. ಮಾರುಕಟ್ಟೆ ತುಂಬಾ ಹೊಸ ನಮೂನೆಯ, ಹೊಸ ಮಾದರಿಯ ಹೊಸ ತಂತ್ರಜ್ಞಾನದ ಲೇಖನಿಗಳು ತುಂಬಿವೆ. ಆದರೆ ನಮ್ಮ ಪಠ್ಯಕ್ರಮ ಇನ್ನೂ ಮಸಿ ತುಂಬುವುದನ್ನು ಹೇಳಿಕೊಡುತ್ತಿದೆ! ಇಂದಿನ ಮಾಹಿತಿ ಕ್ರಾಂತಿಯ ಯುಗದಲ್ಲಿ ಈ ಮಸಿಯ ಬಗ್ಗೆ ತಲೆಯೆಲ್ಲಾ ಮಸಿಮಾಡಿಕೊಳ್ಳುವುದು ಅನಗತ್ಯ ಎಂದು ಪ್ರಾಥಮಿಕ ಶಾಲೆಯ ಮಕ್ಕಳಿಗೂ ಗೊತ್ತು. ಆದರೂ ನಮ್ಮ ಪಠ್ಯಕ್ರಮ ಅದನ್ನೇ ಹೇಳಿಕೊಡುತ್ತಿದೆ. ಶಿಕ್ಷಕರಿಗೆ ಸುಲಭವಾಯಿತು - ಹೊಸ ನೋಟ್ಸ್ ಮಾಡಬೇಕೆಂದಿಲ್ಲ! ನಮ್ಮ ಪಠ್ಯಕ್ರಮದಲ್ಲಿ ಹೊಸ ಲೇಖನಿಗಳ ಬಗೆಗೆ ಪಾಠ ತಯಾರಾಗುವಾಗ ಪುಸ್ತಕ ಹಾಗೂ ಲೇಖನಿಯನ್ನು ಉಪಯೋಗಿಸಿ ಬರೆಯುವ ಪರಿಪಾಠವೇ ಮುಗಿದು ಸ್ಮಾರ್ಟ್ ಸಾಧನಗಳಲ್ಲಿ ಬರೆಯುವ ಕಾಲ ಬಂದಿರುತ್ತದೆ. ಇಂತಹ ಕಾರಣದಿಂದಲೇ ನಮ್ಮ ವಿದ್ಯಾರ್ಥಿಗಳು ವಿದೇಶದ ವಿದ್ಯಾಲಯಗಳತ್ತ ಮುಖ ಮಾಡುತ್ತಿರುವುದು.


ನಮ್ಮಲ್ಲಿ ಅತಿ ಬೇಡಿಕೆಯಲ್ಲಿರುವ ತಾಂತ್ರಿಕ ಶಿಕ್ಷಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ತಾಂತ್ರಿಕ ಶಿಕ್ಷಣ ಮುಗಿಸಿದ ನಮ್ಮ ಇಂಜಿನಿಯರ್‌ಗಳಲ್ಲಿ ಕೇವಲ ೧೮% ಪದವೀಧರರು ಉದ್ಯೋಗಾರ್ಹರು ಎಂದು ಈ ವಿಷಯದಲ್ಲಿ ಕಳೆದ ಕೆಲ ವರ್ಷಗಳಿಂದ ಸಮೀಕ್ಷೆ ನಡೆಸುತ್ತಿರುವ Aspiring Minds (http://www.aspiringminds.com) ಸಂಸ್ಥೆಯ ವರದಿಗಳು ಹೇಳುತ್ತವೆ.  ಇನ್ನು ನಾಲ್ಕು ವರ್ಷಗಳ ತಾಂತ್ರಿಕ ಪದವಿ ಮುಗಿಸಿಕೊಂಡು ಬಂದವರು ಕೆಲಸ ಸಿಗುವುದಕ್ಕೋಸ್ಕರ ಆರು ತಿಂಗಳು - ಒಂದು ವರ್ಷದ ಕೋರ್ಸ್‍ಗಳನ್ನು ಮಾಡುವುದು ಸರ್ವೇಸಾಮಾನ್ಯವಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಬಹು ಬೇಗ ಬದಲಾವಣೆಗಳು ಆಗುತ್ತವೆ ಮತ್ತು ಅವೆಲ್ಲವನ್ನೂ ಶಿಕ್ಷಣದಲ್ಲಿ ಅಳವಡಿಸುವುದು ಸಾಧ್ಯವಾಗದು; ಈಗಿರುವ ನಮ್ಮ ಶಿಕ್ಷಣಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಇನ್ನೂ ಕಷ್ಟ ಎಂಬುದು ಸ್ಪಷ್ಟ. ಹಾಗೆಂದು ಲೇಖನಿಗೆ ಮಸಿ ತುಂಬುವುದನ್ನೇ ಹೇಳಿಕೊಡುವುದಕ್ಕಾಗುತ್ತದೆಯೇ? ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಉದ್ಯಮ ಮತ್ತು ಶಿಕ್ಷಣ ಕ್ಷೇತ್ರಗಳ ನಡುವೆ ಒಂದು ಸದೃಢ ಸೇತುವೆಯ ನಿರ್ಮಾಣವಾಗಬೇಕು. ಕೆಲವೊಂದು ಖಾಸಗೀ ಶಿಕ್ಷಣ ಸಂಸ್ಥೆಗಳು ಈ ದಿಸೆಯಲ್ಲಿ ಕೆಲಸ ಮಾಡುತ್ತಿವೆ ಮತ್ತು ಅದರ ನೇರ ಪರಿಣಾಮ ವಿದ್ಯಾರ್ಥಿಗಳ ಗುಣಮಟ್ಟದಲ್ಲಿ ಕಂಡುಬರುತ್ತದೆ.

ಎರಡನೆಯ ಸಮಸ್ಯೆ - ಶಿಕ್ಷಣದಲ್ಲಿ ಪ್ರಯೋಗಾತ್ಮಕ ಅಂಶಗಳು ಕಡಿಮೆಯಿರುವುದು. ನಮ್ಮ ಪಠ್ಯಗಳಲ್ಲಿ ಸಿದ್ಧಾಂತಗಳೇ ತುಂಬಿವೆ. ಶಿಕ್ಷಣ ಹೆಚ್ಚು ಪ್ರಾಯೋಗಿಕವಾಗಬೇಕು. ಪ್ರತಿ ಸಿದ್ಧಾಂತದ ಜೊತೆಗೂ ಅದರ ಪ್ರಯೋಗಾತ್ಮಕ ಅನ್ವಯಿಸುವಿಕೆಯನ್ನು ತಿಳಿಸಬೇಕು. ಆಗಲೇ ಅದು ಅರ್ಥ ಆಗುವುದು ಹಾಗೂ ಅದರ ಬೆಲೆ ತಿಳಿಯುವುದು. ಇದರಿಂದ ಶಿಕ್ಷಣ ಆಕರ್ಷಣೀಯವೂ ಆಗುತ್ತದೆ. ಅಂತರಾಷ್ಟ್ರೀಯ ಶಿಕ್ಷಣಸಂಸ್ಥೆಯೊಂದರಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿರುವ ಮಿತ್ರರೊಬ್ಬರು ಭಾರತೀಯ ಶಿಕ್ಷಣಕ್ಕೂ ಹೊರದೇಶದ ಶಿಕ್ಷಣಕ್ಕೂ ಇರುವ ವ್ಯತ್ಯಾಸವನ್ನು ವಿವರಿಸುತ್ತಾ "ನಮ್ಮ ದೇಶದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣದಲ್ಲೂ ಸಿದ್ಧಾಂತಗಳ ಪ್ರಾಯೋಗಿಕ ಉಪಯೋಗ ಕಲಿಸುವುದಿಲ್ಲ. ಹಾಗಾಗಿ ಅದೆಷ್ಟೋ ಪದವೀಧರರಿಗೆ ಅವುಗಳ ಉಪಯೋಗವೇ ತಿಳಿದಿರುವುದಿಲ್ಲ. ಹಾಗಾಗಿಯೇ ಅವರು ಅರ್ಥಶಾಸ್ತ್ರದ ಶಿಕ್ಷಕರಾಗುತ್ತಾರೆಯೇ ಹೊರತು ಅರ್ಥಶಾಸ್ತ್ರಜ್ಞರಾಗುವುದಿಲ್ಲ. ವಿದೇಶದಲ್ಲಿ ಪಾಠಮಾಡಲು ಬಂದಾಗ ನಾನು ಅನುಭವಿಸಿದ ಮೊದಲ ಸಮಸ್ಯೆಯೇ ಪ್ರಾಯೋಗಿಕತೆಯನ್ನು ಅರ್ಥಮಾಡಿಕೊಂಡು ಪಾಠಮಾಡುವುದು ಮತ್ತು ಪ್ರಾಯೋಗಿಕ ಉಪಯೋಗಗಳನ್ನು ತಿಳಿಹೇಳುವುದು" ಎನ್ನುತ್ತಾರೆ.

ಒಂದು ದೇಶದ ಉತ್ಪಾದನಾ ಸಾಮರ್ಥ್ಯ ದೇಶದ ಆರ್ಥಿಕತೆಯನ್ನು ನಿರ್ಧರಿಸುತ್ತದೆ. ಇಲ್ಲಿ ಉತ್ಪಾದನೆ ಅಂದರೆ ಕೇವಲ ಸರಕುಗಳ ಉತ್ಪಾದನೆಯಲ್ಲ; ಅದು ಭೌತಿಕ ಉತ್ಪನ್ನಗಳಿರಬಹುದು, ತಂತ್ರಾಂಶಗಳ ಉತ್ಪಾದನೆ ಇರಬಹುದು, ಜ್ಞಾನದ ಉತ್ಪಾದನೆ ಇರಬಹುದು, ವಿಜ್ಞಾನದ ಆವಿಷ್ಕಾರಗಳಿರಬಹುದು ಅಥವಾ ವೈದ್ಯಕೀಯ ಸಂಶೋಧನೆ ಇರಬಹುದು, ಸಮಾಜವಿಜ್ಞಾನ ಕ್ಷೇತ್ರದಲ್ಲಿ ಕೊಡುಗೆಯಿರಬಹುದು. ಉತ್ಪಾದನೆಯ ಮೌಲ್ಯ ವೃಧಿಯಾದಂತೆ ಆರ್ಥಿಕತೆ ಬಲವಾಗುತ್ತದೆ. ಆರ್ಥಿಕತೆ ಬಲವಾದಂತೆ ಜೀವನಮಟ್ಟ ಸುಧಾರಣೆಯಾಗುತ್ತದೆ, ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ, ಹೆಚ್ಚು ಹಣವನ್ನು ಒಳ್ಳೆಯ ಶಿಕ್ಷಣಕ್ಕೋಸ್ಕರ ಮೀಸಲಿಡಬಹುದು. ಒಳ್ಳೆಯ ಶಿಕ್ಷಣದಿಂದ ಉತ್ಪಾದನಾ ಮೌಲ್ಯ ಹೆಚ್ಚಿಸಬಹುದು. ಇದು ಒಂದು ವರ್ತುಲ. ನಮ್ಮಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆಯೆಂಬ ಕೂಗು ಎಲ್ಲಾ ಕ್ಷೇತ್ರಗಳಲ್ಲೂ ಕೇಳಿಬರುತ್ತಿದೆ. ಇದು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಕಡಿಮೆಮಾಡುತ್ತದೆ, ಆರ್ಥಿಕತೆ ದುರ್ಬಲವಾಗುತ್ತದೆ. ಶಿಕ್ಷಣವನ್ನು ದುರ್ಬಲಗೊಳಿಸುವುದು ಆರ್ಥಿಕತೆಯನ್ನು ದುರ್ಬಲಗೊಳಿಸುವ ಮೊದಲ ಹೆಜ್ಜೆ ಎಂಬುದನ್ನು ನಮ್ಮ ಸರಕಾರ, ಶಿಕ್ಷಣ ಇಲಾಖೆ ಅರ್ಥಮಾಡಿಕೊಂಡಂತಿಲ್ಲ.

ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ಖಾಸಗೀ ಕ್ಷೇತ್ರವನ್ನಾಗಿಸಿ ಮಾನ್ಯತೆ ಕೊಡುವ ಅಧಿಕಾರವನ್ನು ಮಾತ್ರ ತನ್ನ ಕೈಯಲ್ಲಿ ಉಳಿಸಿಕೊಂಡು ಗುಣಮಟ್ಟದ ಬಗ್ಗೆ ಚಿಂತಿಸದೆ ಮಾನ್ಯತೆಯ ಹೆಸರಿನಲ್ಲಿ ಹಣ ಮಾಡುವ ಹುನ್ನಾರದಲ್ಲಿರುವಂತೆ ತೋರುತ್ತದೆ. ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯಗಳವರೆಗೆ ಸರಿಯಾದ ನೇಮಕಾತಿ ಮಾಡದೆ ಸರಕಾರಿ ಶಿಕ್ಷಣ ಸಂಸ್ಥೆಗಳು ತನ್ನಿಂತಾನೆ ಸಾಯುವಂತೆ ಮಾಡುವ ಯೋಜನೆಯೂ ಇದ್ದಂತಿದೆ. ಒಳ್ಳೆಯ ಸಂಭಾವನೆಯಿಲ್ಲದೆ ಶಿಕ್ಷಕ ವೃತ್ತಿಯೇ ಆಕರ್ಷಕವಾಗಿಲ್ಲದ ಮೇಲೆ ಪ್ರತಿಭಾವಂತರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದಾದರೂ ಹೇಗೆ. ಬೇರೆಲ್ಲೂ ಸಲ್ಲದವರು ಶಿಕ್ಷಕರಾದರೆ ಉದ್ಯೋಗಕ್ಕೆ ಯೋಗ್ಯ ಪದವೀಧರರು ಬರುವುದೆಂತು? ಉತ್ಪಾದನೆ ಬೆಳೆಯುವುದೆಂತು? ಆರ್ಥಿಕತೆ ಸದೃಢವಾಗುವುದೆಂತು?

ಸಮೀರ ದಾಮ್ಲೆ

Thanks to Prajavani for publishing this article on 18.8.2015
 

No comments:

Post a Comment