Tuesday, November 17, 2015

ಫ್ರಾನ್ಸ್‌ನಲ್ಲಿ ಹೀಗೊಂದು ಊಟ

ನನಗೆ ಫ್ರಾನ್ಸ್‌ಗೆ ಹೋದಾಗಲೆಲ್ಲಾ ಒಂದಿಲ್ಲ ಒಂದು ಫಜೀತಿ ಆಗಿಯೇ ಆಗುತ್ತದೆ ಎಂದು ಕಾಣುತ್ತದೆ. ಹೋದ ಮೂರು-ನಾಲ್ಕು ಬಾರಿಯೂ ಏನಾದರೊಂದು ಕೆಟ್ಟ ಅನುಭವ!
ಅದರಲ್ಲೂ ಈ ಪ್ರಯಾಣದ ಅನುಭವ ಆದ ಮೇಲೆ ನಾನು ಪ್ಯಾರಿಸ್‌ಗೆ ಹೋಗುವ ಸಂದರ್ಭಗಳನ್ನು ತಪ್ಪಿಸಿಕೊಳ್ಳಲು ಪ್ರಾರಂಭಿಸಿದ್ದೇನೆ!

ಒಂದು ವಾರದ ಕಾರ್ಯಾಗಾರಕ್ಕಾಗಿ ಪ್ಯಾರಿಸ್‌ಗೆ ಹೊರಟಿದ್ದೆ. ಹಿಂದಿನ ಪ್ರವಾಸದ ಅನುಭವಗಳಿಂದ ಫ್ರೆಂಚರು ಒರಟರು, ಇಂಗ್ಲಿಷ್‌ನಲ್ಲಿ ಪ್ರಶ್ನೆಕೇಳಿದರೆ ಮುಖತಿರುಗಿಸುತ್ತಾರೆ, ಒಟ್ಟಾರೆಯಾಗಿ ಅಲ್ಲಿನ ಬೀದಿಗಳಲ್ಲಿ ನಡೆದಾಡುವಾಗ ಸೇಫ್ ಅನ್ನಿಸುವುದಿಲ್ಲ ಎಂಬುದು ಮನಸ್ಸಿನಲ್ಲಿ ಕುಳಿತಿತ್ತು. ಹೋಗುವುದು ಅನಿವಾರ್ಯವಾದ ಕಾರಣ ಹೊರಟಿದ್ದೆ.

ಅದು ಫೆಬ್ರವರಿ ತಿಂಗಳು, ವಿಪರೀತ ಚಳಿ, ಹಿಮ ಬೀಳುತ್ತಿರುವ ಕಾಲ. ಕೈಯಲ್ಲಿದ್ದ ಕ್ಯಾಬಿನ್ ಲಗೇಜಿನಲ್ಲಿ ಚಳಿಗೆ ಬೇಕಾದ ಬಟ್ಟೆಗಳೇ ತುಂಬಿದ್ದವು. ಇನ್ನೊಂದು ಸೂಟ್‌ಕೇಸಿನಲ್ಲಿ ಬೇಕಾದ ಬಟ್ಟೆಬರೆ ಮತ್ತು ದಕ್ಷಿಣ ಭಾರತೀಯ ಸಸ್ಯಾಹಾರಿ ಪ್ರಯಾಣಿಕರ ಆಪತ್ಭಾಂದವ MTR redy to eat ನ ನಾಲ್ಕೈದು ಪ್ಯಾಕೆತುಗಳು ತುಂಬಿ ವಿಮಾನ ಸಿಬ್ಬಂದಿಯ ಕೈಗೊಪ್ಪಿಸಿ ಹೊರಟದ್ದಾಯಿತು. ಜನಾಂಗೀಯ ತಾರತಮ್ಯ ಏರ್ ಫ್ರಾನ್ಸ್ ವಿಮಾನ ಹೊರಡುತ್ತಲೇ ಕಾಣಲು ಪ್ರಾರಂಭವಾಯಿತು. (ಏರ್ ಫ್ರಾನ್ಸ್ ವಿಮಾನದಲ್ಲಿ ಹಲವು ಸಲ ಜನಾಂಗೀಯ ತಾರತಮ್ಯ ಗಮನಿದ್ದೇನೆ). ಯಾರೋ ಪ್ರಾಯವಾದವರು ಸಸ್ಯಾಹಾರ ಕೇಳಿದರೆ ತುಂಬಾ ಗರಂ ಆಗಿ ’ಟಿಕೆಟ್ ತೆಗೆದುಕೊಳ್ಳುವಾಗಲೇ ಕಾಯ್ದಿರಿಸಬೇಕಿತ್ತು’ ಎಂದು ಬಡಬಡಿಸಿ ನಡೆದ ಪರಿಚಾರಿಕೆ ಅವನ್ಯಾರೋ ಬಿಳಿಯ ಕೇಳಿದ್ದು ಇಲ್ಲ ಎಂದಾದಾಗ ನಡು ಬಗ್ಗಿಸಿ sorry ಹೇಳುವುದಕ್ಕೆ ಸಾಧ್ಯವಾಯಿತು.

ಅದೆಲ್ಲಾ ಇರಲಿ, ಈಗ ಪ್ಯಾರಿಸ್‌ನಲ್ಲಿ ಇಳಿಯೋಣ. ಅಲ್ಲಿಂದ ಪ್ರಾರಂಭವಾಗುತ್ತದೆ ನನ್ನ ನಿಜ ಫಜೀತಿ.
ನಾನು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿದ್ದರೆ ಟ್ಯಾಕ್ಸಿ ಹಿಡಿಯುವ ಕ್ರಮ ಇಲ್ಲ. ಮೊದಲೇ ಮೊಟ್ರೋ ವ್ಯವಸ್ಥೆಯ ಬಗ್ಗೆ ಮಾಹಿತಿ ನೋಡಿ ಇಟ್ಟಿದ್ದೆ ಎರಡು ಬಾರಿ ಮೆಟ್ರೋ ಬದಲಿಸಬೇಕಿತ್ತು. ಆದರೂ ಒಮ್ಮೊ ವಿಚಾರಿಸೋಣ ಅಂತ ಎರಡೂ ಸೂಟ್‌ಕೇಸ್ ಹಿಡಿದುಕೊಂಡು information counter ಗೆ ಹೋಗಿ ನನ್ನ ಹೋಟೆಲ್ ವಿಳಾಸ ತೋರಿಸಿ ರೈಲಿನ ಕುರಿತು ವಿಚಾರಿಸಿದೆ. ಅಲ್ಲಿ ’ಇದು ಪ್ಯಾರಿಸ್‌ನ ಇನ್ನೊಂದು ಮೂಲೆಯಲ್ಲಿದೆ. ಎರಡು ಬಾರಿ ಮೆಟ್ರೋ ಬದಲಿಸಬೇಕು. ಆದರೆ ಇವತ್ತು ಮೊಟ್ರೋ ಮುಷ್ಕರ ಇದೆ. ಕೆಲ ಲೈನುಗಳು ಮಾತ್ರ ಕೆಲಸ ಮಾಡುತ್ತಿವೆ. ನೀವು ಹೋಗಬೇಕಿರುವ ಲೈನುಗಳು ಸದ್ಯ ಚಾಲನೆಯಲ್ಲಿವೆ. ಬೇಗ ಹೋಗಿ ಎಂದ’.
ಬೇಗ ಬೇಗ ಹೋಗಿ ರೈಲು ಹತ್ತಿದೆ. ಸಿಗಬೇಕಿದ್ದ ಮೊದಲ ಮೆಟ್ರೋ ಲೈನು ಸಿಕ್ಕಿತು. ಅಲ್ಲಿ ಇಳಿದರೆ ಮುಂದಿನ ಲೈನು ಮುಷ್ಕರ ಘೋಷಣೆಯಿಂದ ನಿಂತಿದೆ ಎಂಬ ಮಾಹಿತಿ ಬಂತು. ಆ ಸ್ಟೇಷನ್ ನಲ್ಲಿದ್ದ ಅಧಿಕಾರಿಣಿ ಬಸ್ಸಿನಲ್ಲಿ ಹೋಗುವಂತೆ ತಿಳಿಸಿದಳು.
ಸ್ಟೇಷನ್‌ನಿಂದ ಹೊರಬಂದರೆ ಹಿಮ ಬೀಳುತ್ತಿದೆ. -5 ಉಷ್ಣಾಂಶ ಇರಬಹುದು. ಬಸ್ ನಿಲ್ದಾಣ ಸುಮಾರು ಅರ್ಧ ಮುಕ್ಕಾಲು ಕಿಲೋಮೀಟರ್ ದೂರದಲ್ಲಿದೆ ಅಂತ ತಿಳಿಯಿತು. ನಿರಂತರವಾಗಿ ಬೀಳುತ್ತಿರುವ ಹಿಮ, ನಡೆದುಕೊಂಡು ಬಸ್ ನಿಲ್ದಾಣ ತಲುಪಿದರೆ ಈಗಷ್ಟೇ ಬಸ್ ಕೂಡಾ ಮುಷ್ಕರಕ್ಕೆ ಕರೆ ನೀಡಿದ್ದಾರೆ ಅಂತ ತಿಳಿಸಿದರು. ಒಬ್ಬ ಪುಣ್ಯಾತ್ಮ ಅವನ ಕರುಣೆ ತೋರಿ ಅಷ್ಟು ಹೇಳದಿದ್ದರೆ ನಾನು ಇನ್ನೂ ಮುಕ್ಕಾಲು ಗಂಟೆ ಅಲ್ಲೇ ಕಾಯುತ್ತಿದ್ದೆ. ಯಾಕೆಂದರೆ ವೇಳಾಪಟ್ಟಿಯ ಪ್ರಕಾರ ಮುಂದಿನ ಬಸ್ಸು ಬರುವುದಕ್ಕೆ ಇನ್ನೂ ಮುಕ್ಕಾಲು ಗಂಟೆ ಇತ್ತು, ಭಾನುವಾರ ಬಸ್ಸುಗಳು ಕಡಿಮೆ! ಆತ ಟ್ಯಾಕ್ಸಿ ಹಿಡಿ ಅಂದ. ಟ್ಯಾಕ್ಸಿ ಸ್ಟಾಂಡಿಗೆ ಮತ್ತೆ ಸುಮಾರು ಮುಕ್ಕಾಲು-ಒಂದು ಕಿಲೋಮೀಟರ್ ನಡುಗೆ. ಎರಡು ಸೂಟ್‌ಕೇಸ್ ಹಿಡಿದುಕೊಂಡು ನಡೆಯುವಾಗ ಆ ಚಳಿಯಲ್ಲೂ ಬೆವರು ಬಿಚ್ಚಿತ್ತು.

ಅಲ್ಲಿ ತಲುಪಿದರೆ ಟ್ಯಾಕ್ಸಿ ಇಲ್ಲ! ಅಲ್ಲಿ ಒಬ್ಬ ಪೋಲಿಸ್ ಹೇಳಿದ ’ಇಲ್ಲಿ ನಿನಗೆ ಇವತ್ತು ಟ್ಯಾಕ್ಸಿ ಸಿಗುವುದಿಲ್ಲ. ಮೆಟ್ರೋ ಮತ್ತು ಬಸ್ಸು ಮುಷ್ಕರ ಅಂತ ಎಲ್ಲಾ ಟ್ಯಾಕ್ಸಿಗಳು ಬುಕ್ ಆಗಿದ್ದಾವೆ. ಬೇಗ ಮೆಟ್ರೋ ಸ್ಟೇಷನ್‌ಗ್ ಹೋಗು, ಮುಖ್ಯ ಮೆಟ್ರೋ ನಿಲ್ದಾಣಕ್ಕೆ ಒಂದೆರಡು ರೈಲುಗಳು ಹೋಗುತ್ತಿವೆ. ಮುಖ್ಯ ಮೆಟ್ರೋ ನಿಲ್ದಾಣದಲ್ಲಿ ಟ್ಯಾಕ್ಸಿ ಸಿಗಬಹುದು’ ಅಂತ! ಮತ್ತೆ ಅರ್ಧ ಕಿಲೋಮೀಟರ್ ಹಿಮತುಂಬಿದ ಫುಟ್‍ಪಾತಿನಲ್ಲಿ ಸೂಟ್‌ಕೇಸ್ ಎಳಕೊಂಡು ಓಡಿದರೆ ಕೊನೆಯ ರೈಲು ಮುಖ್ಯನಿಲ್ದಾಣಕ್ಕೆ ಹೊರಟು ನಿಂತಿತ್ತು. ಬದುಕಿದೆಯಾ ಬಡಜೀವಿ ಅಂತ ಅದರೊಳಗೆ ಹಾರಿದೆ.

ಮುಖ್ಯ ನಿಲ್ದಾಣಕ್ಕೆ ಬಂದು ಇನ್ನೂ ಮೂರ್ನಾಲ್ಕು ಟ್ಯಾಕ್ಸಿಯವರಲ್ಲಿ ’ಈ ವಿಳಾಸಕ್ಕೆ ಬರುವುದಿಲ್ಲ’ ಅಂತ ಹೇಳಿಸಿಕೊಂಡು, ಕೊನೆಗೂ ಒಂದು ಟ್ಯಾಕ್ಸಿ ಹಿಡಿದು ಹೋಟೆಲ್ ತಲುಪುವಾಗ ನಾನು ಅರ್ಧ ಜೀವವಾಗಿದ್ದೆ. ಬೆಳಗ್ಗೆ ಸುಮಾರು ಏಳು ಗಂಟೆಗೆ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಇಳಿದವ ಸಾರ್ವಜನಿಕ ಸಾರಿಗೆ ಹಿಡಿಯುವ ಸಾಹಸದಲ್ಲಿ ಹೋಟೆಲ್ ತಲುಪುವಾಗ ಗಂಟೆ ಮಧ್ಯಾಹ್ನ ಹನ್ನೆರಡು ಕಳೆದಿತ್ತು. ಒಂದು MTR ಪ್ಯಾಕೆಟುಗಳನ್ನು ಹೊಟ್ಟೆಗಿಳಿಸಿ ಮಲಗಿದೆ.

ಸಂಜೆ ಏಳುವಾಗ ಹೊಟ್ಟೆ ತಾಳ ಹಾಕುತ್ತಿತ್ತು, ರಾತ್ರಿ ಭೋಜನ ಕೂಟಕ್ಕೆ ಆಮಂತ್ರಣ ಇತ್ತು. ಹೇಗೂ ಊಟ ಇದೆಯಲ್ಲ MTR ಪ್ಯಾಕೆಟ್ ಇನ್ನೊಂದು ದಿನಕ್ಕೆ ಆಗುತ್ತದೆ ಅಂತ ಸುಮ್ಮನಾದೆ.
ಆವತ್ತಿನ ರಾತ್ರಿಯ ಭೋಜನ ಒಂದು ಸಾಂಪ್ರದಾಯಿಕ ಫ್ರಾನ್ಸ್ ರೆಸ್ಟೋರೆಂಟಿನಲ್ಲಿ ಆಯೋಜಿಸಲ್ಪಟ್ಟಿತ್ತು. ಅಲ್ಲೆಲ್ಲಾ ಭೋಜನಕೂಟ ಅಂದರೆ ನಮ್ಮ ದೇಶದ ಹಾಗೆ ಖಾರ ಸಿಹಿ ಇನ್ನೊಂದು ಮತ್ತೊಂದು ಅಂತ ಹತ್ತು ಐಟಂಗಳಿರುವುದಿಲ್ಲ. ಎಲ್ಲರೂ ಅವರವರಿಗೆ ಬೇಕಾದ ಒಂದು - ಎರಡು ವಿಷಯಗಳನ್ನು ಆರ್ಡರ್ ಮಾಡಿ ತಿನ್ನುವುದು. ಮತ್ತೆ ಅವ ತರಿಸಿದನ್ನು ಇವ ಸ್ವಲ್ಪ ರುಚಿ ನೋಡುವುದು, ಹಂಚಿಕೊಳ್ಳುವುದು ಇದೆಲ್ಲಾ ಇಲ್ಲ.

ನಾನು ಸಸ್ಯಾಹಾರಿ ಅಂದಾಗ ಆರ್ಡರ್ ತೆಗೆದುಕೊಳ್ಳುತ್ತಿದ್ದ ವೈಟರ್ ತಲೆಬಿಸಿ ಮಾಡಿಕೊಂಡ. ನಮ್ಮಲ್ಲಿ ಸಸ್ಯಾಹಾರ ಏನೂ ಇಲ್ಲವಲ್ಲಾ.. ’ಮೀನು ನಡೆಯುತ್ತದಾ?’ ಅಂದ. ’ಇಲ್ಲ ಗುರುವೇ’ ಅಂದೆ...
ಆಗಲೇ ಅಂದುಕೊಂಡೆ ಇವತ್ತು ನನ್ನ ಸಮಾರಾಧನೆ ನಡೆದದ್ದೇ ಅಂತ. ಮೊದಲೇ ಹೊಟ್ಟೆ ತಾಳ ಹಾಕುತ್ತಿತ್ತು. ಹೋಗಲಿ ಫ್ರ್ಂಚ್ ಫ್ರೈ (French Fry) ಆದರೂ ಕೊಡು ಅಂದರೆ ಅಲ್ಲಿ ಫ್ರೆಂಚ್ ಫ್ರೈ ಕೂಡಾ ಇಲ್ಲವಂತೆ. ಅದು ಸಾಂಪ್ರದಾಯಿಕ ಫ್ರೆಂಚ್ ಖಾದ್ಯವಲ್ಲವಂತೆ! ಕೊನೆಗೆ ಷೆಪ್ (ಬಾಣಸಿಗ) ನನ್ನೇ ಕೇಳುತ್ತೇನೆ ಅಂತ ಹೋದವ ವಾಪಾಸ್ ಬಂದಾಗ ಅವನ ಮುಖ ಅರಳಿತ್ತು. ಅದನ್ನು ನೋಡಿ ನನ್ನ ಹೊಟ್ಟೆ ಇನ್ನೂ ಜೋರಾಗಿ ತಾಳ ಹಾಕಲಾರಂಭಿಸಿತು.
ಆತ ’ಒಂದು ಐಟಂ ಇದೆ’ ಅಂದ. ’ಅದೇನಾದರೂ ಸರಿ ತೆಗೆದುಕೊಂಡು ಬಾ’ ಅಂದೆ. ಒಬ್ಬೊಬ್ಬರದ್ದೂ ಆಹಾರ ಬಂತು. ಕಾದು ಕಾದು ಕೊನೆಗೆ ನನ್ನ ಸಸ್ಯಾಹಾರ ಬಂತು!
ನೋಡಿದರೆ ಒಂದು ದೊಡ್ಡ ಹಸಿರು ಎಲೆಯ ಮೇಲೆ ಬೇಯಿಸಿದ ಒಂದು ದೊಡ್ಡ ಬೀಟ್‌ರೂಟ್. ಅದರ ಮೇಲೆ (ಬಹುಷಃ ಚಂದಕ್ಕೆ) ಒಂದು ತುಂಡು ಚೀಸ್! ಉಪ್ಪು ಖಾರ ಏನೂ ಇಲ್ಲದ ಬೀಟ್‌ರೂಟಿನ ನಿಜರುಚಿಯನ್ನು ನಾನು ಸವಿದದ್ದು ಅಲ್ಲೇ! ಪ್ರಯಾಣದ ಸುಸ್ತು, ಇಡೀ ದಿನದ ನಡಿಗೆ ಮತ್ತು ಮಧ್ಯಾಹ್ನ ತಿಂದ ಸ್ವಲ್ಪವೇ ಆಹಾರ ಇದರಿಂದ ಎಷ್ಟು ಹಸಿವಾಗಿತ್ತೆಂದರೆ ಇನ್ನೊಂದು ಪ್ಲೇಟ್ ಆರ್ಡರ್ ಮಾಡಿ ಬೀಟ್‌ರೂಟ್ ತಿಂದೆ!


http://kannadaforum.net/thread/4596-%E0%B2%AB%E0%B3%8D%E0%B2%B0%E0%B2%BE%E0%B2%A8%E0%B3%8D%E0%B2%B8%E0%B3%8D%E2%80%8C%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%80%E0%B2%97%E0%B3%8A%E0%B2%82%E0%B2%A6%E0%B3%81-%E0%B2%8A%E0%B2%9F/

ಜರ್ಮನಿಯೇ ಯಾಕೆ ಬೇಕು? ಜರ್ಮನಿಯನ್ನು ಬೀಳಿಸುವ ಹುನ್ನಾರವೇ?

ಜರ್ಮನಿಯತ್ತ ಹೊರಟಿರುವ ಜನರನ್ನು ಗಮನಿಸಿ - ಇದರಲ್ಲಿ ಮಕ್ಕಳನ್ನು ಹೊತ್ತುಕೊಂಡ ಮಹಿಳೆಯರು, ವೃದ್ಧರೂ ಇದ್ದಾರೆ. ಆದರೆ ಬಹು ಸಂಖ್ಯೆಯಲ್ಲಿ ಯುವಕರೇ ಇದ್ದಾರೆ.

ಒಂದೆರಡಲ್ಲ... ನೂರಾರಲ್ಲ... ಸಾವಿರವೂ ಅಲ್ಲ... ಲಕ್ಷ ಲಕ್ಷ ಜನ ಹೋಗುತ್ತಿದ್ದಾರೆ!
’ಎಲ್ಲಿಗೆ ಹೋಗುತ್ತಿದ್ದೀರಿ?’ ಎಂದು ಕೇಳಿದರೆ ಎಲ್ಲರಲ್ಲೂ ಒಂದೇ ಉತ್ತರೆ - ’ಜರ್ಮನಿ’!
’ಯಾಕೆ?’ ಈ ಪ್ರಶ್ನೆಗೆ ಖಚಿತವಾದ ಉತ್ತರವಿಲ್ಲ! ’ಜರ್ಮನಿ ತುಂಬಾ ಸುರಕ್ಷಿತ(safe)’, ’ಜರ್ಮನಿಯಲ್ಲಿ ಅವಕಾಶಗಳಿವೆ’, ’ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು’, ’ಕೆಲಸ ಬೇಕು’... ಹೀಗೆ ಬೇರೆ ಬೇರೆ ಉತ್ತರಗಳು. ಆದರೆ ಇದ್ಯಾವುದೂ ಜರ್ಮನಿಯೇ ಯಾಕೆ ಎಂಬ ಪ್ರಶ್ನೆಗೆ ಖಚಿತವಾದ ಉತ್ತರವಾಗುವುದಿಲ್ಲ. ಫ್ರಾನ್ಸ್ ಯಾಕಾಗಬಾರದು? ಇಟಲಿ ಯಾಕೆ ಬೇಡ? ಸ್ವೀಡನ್‍ಗೆ ಏನಾಗಿದೆ? ಆಸ್ಟ್ರಿಯಾ? ಪೋಲಂಡ್? ಇಂಗ್ಲಂಡ್? ಅಮೇರಿಕಾ? ಯಾಕಾಗಬಾರದು?

ಜರ್ಮನಿಯೇ ಯಾಕಾಗಬೇಕು?
ಒಪ್ಪೊತ್ತಿನ ಊಟ (Bread & butter): ಎರಡನೆಯ ಮಾಹಾಯುದ್ಧದಲ್ಲಿ ಪೂರ್ತಿ ನೆಲಕ್ಕಚ್ಚಿದ ಜರ್ಮನಿ ಒಂದು ದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತದ್ದು ಪ್ರಜೆಗಳ ಶ್ರಮ, ಬದ್ಧತೆ, ಕಾರ್ಯಕ್ಷಮತೆಗೆ ಜಗತ್ತಿಗೇ ಮಾದರಿಯಾದಂತಹದ್ದು. ಆದರೆ ಆ ಕಾಲದಲ್ಲಿ ಜರ್ಮನಿಯ ಕಾರ್ಖಾನೆಗಳಲ್ಲಿ ಬೆವರು ಸವೆಸಿ ದುಡಿದವರೆಲ್ಲಾ ಇಂದು ವಿಶ್ರಾಂತ ಜೇವನ ನಡೆಸುತ್ತಿದ್ದಾರೆ. ಅವರೆಲ್ಲರ ಶ್ರಮದ ಬದುಕು ಮತ್ತು ಕಾರ್ಯಕ್ಷಮತೆಯ ಫಲವಾಗಿ ಆರ್ಥಿಕತೆ ಬೆಳೆಯಿತು, ಶಿಕ್ಷಣ ವ್ಯವಸ್ಥೆ ಸದೃಢವಾಯಿತು. ಆದರೆ ಅದರ ಇನ್ನೊಂದು ಮಗ್ಗುಲು ಕೌಟುಂಬಿಕ ವ್ಯವಸ್ಥೆಯ ಮೇಲೆ ಆದ ಪರಿಣಾಮ. ನಿಧಾನವಾಗಿ ನಂತರದ ತಲೆಮಾರಿನ ಜನ ಮಕ್ಕಳು ಬೇಡ ಎಂಬ ಮನಸ್ಥಿತಿಗೆ ಬಂದರು. ಎಷ್ಟೋ ಜನರಿಗೆ ಮಕ್ಕಳು ಅವರ ಔದ್ಯೋಗಿಕ ಉನ್ನತಿಗೆ ಅಡ್ಡಿಯಾಗಿ ಕಂಡರು. ಅದರ ಪರಿಣಾಮ ಜರ್ಮನಿ ಎದುರಿಸುತ್ತಿರುವ ಮುಖ್ಯ ಸಮಸ್ಯೆ ಹೆಚ್ಚುತ್ತಿರುವ ಹೆಚ್ಚುತ್ತಿರುವ ಸರಾಸರಿ ವಯಸ್ಸು (aging population). ಜರ್ಮನಿಯಲ್ಲಿ ಸರಾಸರಿ ವಯಸ್ಸು ಸುಮಾರು 46.
ಹೀಗಾಗಿ ಜರ್ಮನಿಗೆ ದುಡಿಯುವ ಕೈಗಳು ಬೇಕು ಎಂಬುದು ಪ್ರಶ್ನಾತೀತ. ಉತ್ತಮ ವೃತ್ತಿ ಕೌಶಲ ಹೊಂದಿದ್ದರೆ ಮತ್ತು ಜರ್ಮನ್ ಭಾಷೆ ಗೊತ್ತಿದ್ದರೆ ಅಲ್ಲಿ ಕೆಲಸ ಸಿಗುವುದೇನೂ ಕಷ್ಟವಲ್ಲ. ಆದರೆ, ಸಿರಿಯಾ ಲಿಬಿಯಾದಿಂದ ಹೋಗುತ್ತಿರುವ ನಿರಾಶ್ರಿತರಿಗೆ ಜರ್ಮನಿಗೆ ಬೇಕಿರುವ ವೃತ್ತಿ ಕೌಶಲವಿದೆಯೇ?
ಜರ್ಮನಿಯಲ್ಲಿನ ಅವಕಾಶಗಳನ್ನು ಬಾಚಿಕೊಳ್ಳಲು ಬೇರೆ ಬೇರೆ ದೇಶಗಳಿಂದ ನುರಿತ ತಂತ್ರಜ್ಞರು ಪೈಪೋಟಿ ನಡೆಸುತ್ತಿದ್ದಾರೆ. ಅವರ ಜೊತೆ ಪೈಪೋಟಿ ಮಾಡುವ ಸಾಮರ್ಥ್ಯ ನಿರಾಶ್ರಿತರಿಗಿದೆಯೇ? ನಿರಾಶ್ರಿತರು ಕೇವಲ ಸಣ್ಣಮಟ್ಟಿನ ಕೆಲಗಳಿಗೆ ಹೋಗಬೇಕಾಗಬಹುದು. ಆದರೆ ಯಂತ್ರೋಪಕರಣಗಳಿಂದ ತುಂಬಿರುವ ಜರ್ಮನಿಯಲ್ಲಿ ಚಿಲ್ಲರೆ ಕೆಲಸಗಳು ಕಡಿಮೆ. ಯಂತ್ರಗಳೇ ಹೆಚ್ಚಿನ ಕೆಲಸ ಮಾಡುತ್ತವೆ. ಇದರಿಂದ ಜರ್ಮನಿಯಲ್ಲೂ ನಿರಾಶ್ರಿತರು ನಿರುದ್ಯೋಗಿಗಳಾಗಿ ಉಳಿದರೆ?
ಶಿಕ್ಷಣ: ಜರ್ಮನಿ ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿದೆ. ಹೆಚ್ಚು ಕಡಿಮೆ ಖರ್ಚಿಲ್ಲದೆಯೇ ಪ್ರಾಥಮಿಕ ಹಂತದ ಶಿಕ್ಷಣ ಲಭ್ಯವಿದೆ. ಇದು ಪ್ರಶ್ನಾತೀತ. ಉನ್ನತ ಶಿಕ್ಷಣವೂ ಕಡಿಮೆ ಖರ್ಚಿನಲ್ಲಿ ಪಡೆಯಬಹುದು. ಆದರೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಪೈಪೋಟಿ ಇದೆ ಎಂಬುದನ್ನು ಮರೆಯಬಾರದು.

ಆದರೆ ಹೆಚ್ಚುತ್ತಿರುವ ಸರಾಸರಿ ವಯಸ್ಸು (aging population) ಕೇವಲ ಜರ್ಮನಿಯ ತೊಂದರೆಯಲ್ಲ. ಇದು ಯುರೋಪಿನ ಹೆಚ್ಚಿನ ದೇಶಗಳು ಎದುರಿಸುತ್ತಿರುವ ಸಮಸ್ಯೆ! ಹೆಚ್ಚಿನ ಮಾಹಿತಿಗೆ ಈ link ನೋಡಿ: world.bymap.org/MedianAge.htm. ಶಿಕ್ಷಣವೂ ಅಷ್ಟೇ ಬಹುತೇಕ ಯುರೋಪಿಯನ್ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ ಸುಲಭವಾಗಿ ಖರ್ಚಿಲ್ಲದೇ ದೊರೆಯುತ್ತದೆ. ಹಾಗಿರುವಾಗ ಬೇರೆ ಯುರೋಪಿಯನ್ ದೇಶ ಯಾಕಾಗಬಾರದು?

ಇತರೇ ಯುರೋಪಿಯನ್ ದೇಶಗಳಿಗಿಂತ ಜರ್ಮನಿ ಭಿನ್ನವಾಗುವುದು ತನ್ನ ಆರ್ಥಿಕ ಸದೃಢತೆಯಲ್ಲಿ. ಯುರೋಪಿಯನ್ ಒಕ್ಕೂಟದ ಬಹುತೇಕ ದೇಶಗಳು ಆರ್ಥಿಕವಾಗಿ ದುರ್ಬಲವಾಗಿದೆ. ಯುರೋಪಿಯನ್ ಒಕ್ಕೂಟದ ಆರ್ಥಿಕತೆಯ ಆಧಾರ ಸ್ಥಂಬವೇ ಜರ್ಮನಿ, ಬಿಟ್ಟರೆ ಫ್ರಾನ್ಸ್.
ಇದನ್ನು ಎರಡು ರೀತಿಯಲ್ಲಿ ನೋಡಬಹುದು. ಆರ್ಥಿಕವಾಗಿ ಸದೃಢ ದೇಶದ ಆಶ್ರಯ ಪಡೆಯುವುದು ಯಾವುದೇ ನಿರಾಶ್ರಿತನ ಬಯಕೆಯಾಗಿರುತ್ತದೆ. ಯಾಕೆಂದರೆ ಆತ ಗಂಟುಮೂಟೆ ಕಟ್ಟಿಕೊಂಡು ಮತ್ತೆ ನಿರಾಶ್ರಿತನಾಗಿ ಹೋಗಬಯಸುವುದಿಲ್ಲ. ಒಮ್ಮೆ ಆಶ್ರಯ ಪಡೆದರೆ ಅದು ಶಾಶ್ವಾತವಾಗಿರಬೇಕು ಎಂಬುದು ಸಹಜವಾದ ಬಯಕೆ. ಆದರೆ ಆರ್ಥಿಕವಾಗಿ ಸದೃಢ ದೇಶಗಳು ಸಿರಿಯಾಕ್ಕೆ ಇನ್ನೂ ಹತ್ತಿರದಲ್ಲೇ ಇವೆಯಲ್ಲ. ಸೌದಿ ಅರೇಬಿಯಾ, ದುಬಾಯ್ ಮುಂತಾದ ಶ್ರೀಮಂತ ದೇಶಗಳಲ್ಲಿ ಹಲವಾರು ಹೊಸ ಹೊಸ ಅಭಿವೃದ್ಧಿ ಕಾರ್ಯಗಳು, ಹೊಸ ಯೋಜನೆಗಳು ನಡೆಯುತ್ತಲೇ ಇರುತ್ತವೆ. ಅಲ್ಲೇಕೆ ಆಶ್ರಯ ಪಡೆಯಬಾರದು.
ಅದರಲ್ಲೂ ನಿರಾಶ್ರಿತರನ್ನು ಸ್ವೀಕರಿಸದೆ ’ಜರ್ಮನಿಗೆ ಮಸೀದಿ ನಿರ್ಮಿಸಲು ಸಹಾಯ ಮಾಡುತ್ತೇವೆ’ ಎಂಬ ಹೇಳಿಕೆ ನೀಡುವುದು ನೋಡಿದರೆ ಇದರ ಹಿಂದೆ ಇನ್ನೇನೋ ಹುನ್ನಾರ ಇರುವ ಶಂಕೆ ಮೂಡುತದೆ. ಬೇಕೆಂದೇ ನಿರಾಶ್ರಿತರನ್ನು ಐಸಿಸ್ ಜರ್ಮನಿಯತ್ತ ಅಟ್ಟುತ್ತಿದೆಯೇ? ನಿರಾಶ್ರಿತರ ಹೆಸರಿನಲ್ಲಿ ಜಿಹಾದಿ ಉಗ್ರರು ಜರ್ಮನಿ ತಲುಪುತ್ತಿರಬಹುದೇ? ಇದು ಜರ್ಮನಿಯನ್ನು (ತನ್ಮೂಲಕ ಯುರೋಪಿಯನ್ ಒಕ್ಕೂಟವನ್ನು) ಆರ್ಥಿಕವಾಗಿ ಅಲುಗಾಡಿಸುವ ಮತ್ತು ಯುರೋಪಿನಾದ್ಯಂತ ಇಸ್ಲಾಂ‍ಅನ್ನು ಹರಡುವ ಮತ್ತು ಬಲಗೊಳಿಸುವ ತಂತ್ರವೇ ಎಂಬ ಪ್ರಶ್ನೆಗಳೂ ಮೂಡುತ್ತವೆ!

ಸಮೀರ ದಾಮ್ಲೆ

References:
Median Age / Countries of the World
Amid Muslim Refugee Crisis, Saudi Arabia Vows To Build 200 Mosques In Germany


http://kannadaforum.net/thread/4265-%E0%B2%9C%E0%B2%B0%E0%B3%8D%E0%B2%AE%E0%B2%A8%E0%B2%BF%E0%B2%AF%E0%B3%87-%E0%B2%AF%E0%B2%BE%E0%B2%95%E0%B3%86-%E0%B2%AC%E0%B3%87%E0%B2%95%E0%B3%81-%E0%B2%9C%E0%B2%B0%E0%B3%8D%E0%B2%AE%E0%B2%A8%E0%B2%BF%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AC%E0%B3%80%E0%B2%B3%E0%B2%BF%E0%B2%B8%E0%B3%81%E0%B2%B5-%E0%B2%B9%E0%B3%81%E0%B2%A8%E0%B3%8D%E0%B2%A8%E0%B2%BE%E0%B2%B0%E0%B2%B5%E0%B3%87/

ತನ್ನೊಡಲ ಅವಕಾಶಗಳೇ ಬೆಂಗಳೂರಿಗೆ ಶಾಪವೇ?

ಇವತ್ತು (ಆಗೊಸ್ಟ್ 22) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ. ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರೂ ಪಕ್ಷಗಳು ಪೈಪೋಟಿಯಲ್ಲಿವೆ. ರಾಜಕೀಯ ಪಕ್ಷಗಳು ಮತದಾರರಿಗೆ ಭರವಸೆಗಳ ಮಹಾಪೂರವನ್ನೇ ನೀಡಿವೆ. ಸಿಂಗಾಪುರ ಹಾಂಗ್‍ಕಾಂಗ್ ಮಾದರಿಯಲ್ಲಿ ಬೆಂಗಳೂರು ಅಭಿವೃದ್ಧಿ ಇತ್ಯಾದಿ ಹೇಳಿಕೆಗಳು ಕೇಳಿಬರುತ್ತಿವೆ. ಇದೇ ನಮ್ಮ ದುರಾದೃಷ್ಟ! ನಮ್ಮ ರಾಜಕಾರಣಿಗಳು ಸ್ಮಾರ್ಟ್ ಸಿಟಿ, ಸಿಂಗಾಪುರ, ವೈಫೈ, ಹೈಫೈ ಅಂತ ಮಾತನಾಡುತ್ತಾರೆಯೇ ಹೊರತು ಬೆಂಗಳೂರಿನಲ್ಲಿರುವ ಬಹಳ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ತೊಡಗುವುದಿಲ್ಲ.

ಇವತ್ತು ಬೆಂಗಳೂರನ್ನು ಕಾಡುತ್ತಿರುವ ಮೂಲ ಸಮಸ್ಯೆಗಳಲ್ಲಿ ಪ್ರಮುಖವಾದವು - ಕಸದ ಸಮಸ್ಯೆ, ಎಲ್ಲರಿಗೂ ಶುದ್ಧ ನೀರು, ವಿದ್ಯುತ್ ಸರಬರಾಜು, ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ, ಟ್ರಾಫಿಕ್ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸರಕಾರಿ ಇಲಾಖೆಗಳಿಗೆ ಹಿಡಿದಿರುವ ಕ್ಯಾನ್ಸರ್ - ಭ್ರಷ್ಟಾಚಾರ. ಇವೆಲ್ಲ ಇಂದು ನಿನ್ನೆ ಹುಟ್ಟಿಕೊಂಡ ಸಮಸ್ಯೆಗಳಲ್ಲ. ಹಲವು ವರ್ಷಗಳಿಂದ ಇರುವ ಸಮಸ್ಯೆಗಳು. ಹಲವಾರು ಪಕ್ಷಗಳ ರಾಜ್ಯ ಸರಕಾರಗಳು, ಹಲವು ಬಿಬಿಎಂಪಿಗಳು ಹಲವಾರು ಮೇಯರ್‌ಗಳು ಆಗಿಹೋದರು. ಆದರೆ ಈ ಸಮಸ್ಯೆಗಳು ಇನ್ನೂ ಜ್ವಲಂತವಾಗಿವೆ ಮತ್ತು ದಿನೇದಿನೇ ಜಟಿಲವಾಗುತ್ತಿವೆ. ಆದರೆ ಯಾವ ಸರಕಾರಗಳೂ ಈ ಸಮಸ್ಯೆಗಳನ್ನು ಸರಿಪಡಿಸಲು ಪೂರ್ಣ ಬದ್ಧತೆಯಿಂದ ಕೆಲಸ ಮಾಡಲಿಲ್ಲ. ಮುರಿದು ಬಿದ್ದ ಗುಡಿಸಲನ್ನು ಸರಿಪಡಿಸುವುದು ಬಿಟ್ಟು ಅರಮನೆ ಕಟ್ಟುವ ಭರವಸೆ ಕೊಟ್ಟು ಏನು ಉಪಯೋಗ?

ಇನ್ನು ಬೆಂಗಳೂರಿನ ಇಂದಿನ ಪರಿಸ್ಥಿಗೆ ನಾಗರಿಕರ ಕೊಡುಗೆ ಬಹಳಷ್ಟಿದೆ. ತನ್ನ ಒಡಲಲ್ಲಿ ತುಂಬಿಕೊಂಡಿರುವ ಅವಕಾಶಗಳೇ ಬೆಂಗಳೂರಿನ ಪಾಲಿಗೆ ಶಾಪವೇನೋ? ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು, ಶಿಕ್ಷಣಕ್ಕಾಗಿ, ದಿನಗೂಲಿಗಾಗಿ ಹೀಗೆ ಹಲವಾರು ಕಾರಣಗಳಿಗೆ ಪ್ರತಿದಿನ ಸಹಸ್ರಾರು ಜನ ದೇಶದ ವಿವಿದೆಡೆಗಳಿಂದ ವಲಸೆ ಬರುತ್ತಾರೆ. ಇವರಲ್ಲಿ ಒಂದಷ್ಟು ಜನರ ಮನಸ್ಸಿನಲ್ಲಿ ಬೆಂಗಳೂರು ತನ್ನದು ಎಂಬ ಭಾವನೆಯೇ ಇಲ್ಲ. ತನಗೆ ಅವಕಾಶ ಕೊಟ್ಟ ನಗರಿ ಎಂಬ ಕನಿಷ್ಠ ಗೌರವವೂ ಇಲ್ಲ. ಬೆಂಗಳೂರಿನ ಕರ್ನಾಟಕದ ಕನ್ನಡ ಭಾಷೆಯ ಬಗೆಗೂ ಗೌರವವಿಲ್ಲ. ಅವರಿಗೆ ಇಲ್ಲಿಯ ಅವಕಾಶಗಳಷ್ಟೇ ಬೇಕು. ತನ್ನದೇನೂ ಜವಾಬ್ದಾರಿಯಿಲ್ಲ ಎಂಬ ಭಾವನೆ ಹೊತ್ತಿರುವ ಬೆಂಗಳೂರಿಗರೂ ಇದ್ದಾರೆ, ಇಲ್ಲವೆಂದಲ್ಲ; ಆದರೆ ಅಂತಹ ಬೆಂಗಳೂರಿಗರ ಸಂಖ್ಯೆ ಕೊಂಚ ಕಡಿಮೆ. ಸುಶಿಕ್ಷಿತರೂ ಎಲ್ಲೆಂದರೆಲ್ಲಿ ಕಸ ಬಿಸಾಡುವುದು, ಸಂಚಾರಿ ನಿಯಮ ಉಲ್ಲಂಘಿಸುವುದು, ಬೇಜವ್ದಾರಿಯಿಂದ ನಡೆದುಕೊಳ್ಳುವುದು ಇವೇ ಇದಕ್ಕೆ ಸಾಕ್ಷಿ.
ಮೂಲ ಬೆಂಗಳೂರಿಗರಲ್ಲಿ ಮತ್ತು ಕನ್ನಡಿಗರಲ್ಲಿ ಬೆಂಗಳೂರು ತನ್ನ ಹಳೆ ಸೊಗಡು ಕಳಕೊಂಡಿದೆ ಎಂಬ ನೋವಿದೆ, ಖೇದವಿದೆ; ಇನ್ನೆಂದೂ ಹಿಂದಿನ ಕಳೆಕಟ್ಟದೇನೋ ಎಂಬ ಚಿಂತೆಯಿದೆ. ಬೆಂಗಳೂರಲ್ಲಿ ಕನ್ನಡತನ ಎಷ್ಟರಮಟ್ಟಿಗೆ ಸತ್ತಿದೆಯೆಂಬುದಕ್ಕೆ ರಾಜಕೀಯ ಪಕ್ಷವೊಂದು ಬಿಬಿಎಂಪಿ ಚುನಾವಣಾ ಪ್ರಣಾಳಿಗೆ ಐದು ಭಾಷೆಗಳಲ್ಲಿ ಪ್ರಕಟಿಸಿರುವಿದೇ ಸಾಕ್ಷಿ.

ಬಿಬಿಎಂಪಿ ಚುನಾವಣೆಯನ್ನೇ ಗಮನಿಸಿ, ಮಧ್ಯಾಹ್ನದ ತನಕ ಸುಮಾರು 21% ಮತದಾನ ಮಾತ್ರ ಆಗಿದೆ. ಮತದಾನದಲ್ಲಿ ಬೆಂಗಳೂರಿಗರ ತೋರುತ್ತಿರುವ ಆಸಕ್ತಿ ನೋಡಿದರೆ ಬಹುಷಃ 50% ಮತದಾನವೂ ನಡೆಯದೇನೋ ಅನ್ನಿಸುತ್ತದೆ. ಮತಕಟ್ಟೆಯ ಕುರಿತು ತಪ್ಪಾದ ಮಾಹಿತಿ, ಮತದಾರರ ಪಟ್ಟಿಯಲ್ಲಿ ಹೆಸರಿರದೆ ಇರುವುದು ಇತ್ಯಾದಿ ತೊಂದರೆಗಳು ಇರಬಹುದು. ಆದರೆ ಹೆಚ್ಚೆಂದರೆ ಹತ್ತು ಶೇಕಡಾ ಮತದಾರರಿಗೆ ಇಂತಹ ಸಮಸ್ಯೆ ಆಗಿರಬಹುದು. ಒಟ್ಟಾರೆಯಾಗಿ ಬೆಂಗಳೂರಿಗರಲ್ಲಿರುವ ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ. ಆಡಳಿತದಿಂದ ಎಲ್ಲಾ ಸವಲತ್ತುಗಳನ್ನು ಅಪೇಕ್ಷಿಸುವ ನಾವು ನಮ್ಮ ಕನಿಷ್ಠ ಜವಾಬ್ದಾರಿಯನ್ನೂ ನಿರ್ವಹಿಸದಿದ್ದರೆ ಹೇಗೆ?


http://kannadaforum.net/thread/3834-%E0%B2%A4%E0%B2%A8%E0%B3%8D%E0%B2%A8%E0%B3%8A%E0%B2%A1%E0%B2%B2-%E0%B2%85%E0%B2%B5%E0%B2%95%E0%B2%BE%E0%B2%B6%E0%B2%97%E0%B2%B3%E0%B3%87-%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B2%BF%E0%B2%97%E0%B3%86-%E0%B2%B6%E0%B2%BE%E0%B2%AA%E0%B2%B5%E0%B3%87/



ಕಾರ್ನಾಡ್ ಅವರೇ - ಇದನ್ನು ತೆವಲು ಅನ್ನದೆ ಇನ್ನೇನು ಹೇಳಲು ಸಾಧ್ಯ?

ಒಂದು ಕಡೆ ಟಿಪ್ಪು ಜಯಂತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಕೊಡಗಿನಲ್ಲಿ ಒಂದು ಜೀವ ಬಲಿಯಾಗಿದೆ. ಟಿಪ್ಪುವಿನ ಧರ್ಮ ಸಹಿಷ್ಣುತೆಯ ಕುರಿತು ಪ್ರಶ್ನೆಗಳು ಇವೆ. ಟಿಪ್ಪುವಿನ ದೇಶಪ್ರೇಮದ ಬಗ್ಗೆ ಪ್ರಶ್ನೆಗಳು ಇವೆ.
ಟಿಪ್ಪು ಜಯಂತಿಯ ಕುರಿತು ಹೊಗೆಯಾಡುತ್ತಿದ್ದ ಅಸಮಧಾನ ಬೆಂಕಿಯಾಗಿ ಉರಿಯತೊಡಗಿದೆ.ಇಂತಹ ಸಂದರ್ಭದಲ್ಲಿ ಸರಕಾರ ಏನು ಮಾಡಬೇಕು? ಶಾಂತಿ ಕಾಪಾಡಲು ಕಾರ್ಯಪ್ರವೃತ್ತವಾಗಬೇಕು ತಾನೇ?.ಅದರ ಸುಳಿವಂತೂ ಕಾಣುತ್ತಿಲ್ಲ!.

ಸಮಾಜದ ಮಾನ್ಯರೆನಿಸಿದವರು ಏನು ಮಾಡಬೇಕು? ಉತ್ತರ ಮಹಾನ್ ಬುದ್ಧಿಜೀವಿ ಕಾರ್ನಾಡ್ ಕೊಟ್ಟಿದ್ದಾರೆ. ವಿವಾದಾತ್ಮಕ ಹೇಳಿಕೆ ಕೊಟ್ಟು ಉರಿಯುವ ಬೆಂಕಿಗೆ ತುಪ್ಪ ಹಾಕಬೇಕು. ತಾವಿನ್ನೂ ಸಮಾಜದಲ್ಲಿ ಪ್ರಸ್ತುತ ಅಂತ ತೋರಿಸಿಕೊಳ್ಳಬೇಕು.

ಇಲ್ಲದಿದ್ದರೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆಂಗಳೂರಿನ ಜನಕ ನಾಡಪ್ರಭು ಕೆಂಪೇಗೌಡರ ಹೆಸರನ್ನು ತೆಗೆದು ಟಿಪ್ಪು ಹೆಸರಿಡಿ ಎಂಬ ಬಿಟ್ಟಿ ಸಲಹೆ ಏತಕ್ಕೆ?.ಕೆಂಪೇಗೌಡರು ಕರ್ನಾಟಕ ಕಂಡ ಪ್ರಶ್ನಾತೀತ ನಾಯಕರೇ ಹೊರತು ಟಿಪ್ಪು ಅಲ್ಲ!.

ಸಮಾಜದಲ್ಲಿ ವಿವಾದಗಳು ಹುಟ್ಟಿಕೊಂಡಾಗ ಜನರ ಭಾವನೆಗಳ ವಿರುದ್ಧ ಹೇಳಿಕೆ ಕೊಡುವುದು ಇವರ ಖಯಾಲಿಯಾಗಿಬಿಟ್ಟಿದೆ. ಇವರ ಇಂತಹ ಕೃತ್ಯಗಳನ್ನು ತಮ್ಮ ಹೇಳಿಕೆಗಳ ಮೂಲಕ ಸಮಾಜದ ಸಾಮರಸ್ಯವನ್ನು ಹಾಳುಮಾಡಿ ತಮ್ಮನ್ನು ಪ್ರಚಾರದಲ್ಲಿಟ್ಟುಕೊಳ್ಳುವ ತೆವಲು ಅನ್ನದೆ ಇನ್ನೇನು ಹೇಳಬೇಕು?.

ಇಂತಹ ಹೇಳಿಕೆಗಳಿಂದ ನಿಮ್ಮ ಬೇಳೆ (ಬೀಫ್) ಬೇಯುವುದರ ಹೊರತು ಬೇರೇನು ಲಾಭವಿದೆ ಹೇಳಿ ಕಾರ್ನಾಡರೇ...


http://kannadaforum.net/thread/4610-%E0%B2%95%E0%B2%BE%E0%B2%B0%E0%B3%8D%E0%B2%A8%E0%B2%BE%E0%B2%A1%E0%B3%8D-%E0%B2%85%E0%B2%B5%E0%B2%B0%E0%B3%87-%E0%B2%87%E0%B2%A6%E0%B2%A8%E0%B3%8D%E0%B2%A8%E0%B3%81-%E0%B2%A4%E0%B3%86%E0%B2%B5%E0%B2%B2%E0%B3%81-%E0%B2%85%E0%B2%A8%E0%B3%8D%E0%B2%A8%E0%B2%A6%E0%B3%86-%E0%B2%87%E0%B2%A8%E0%B3%8D%E0%B2%A8%E0%B3%87%E0%B2%A8%E0%B3%81-%E0%B2%B9%E0%B3%87%E0%B2%B3%E0%B2%B2%E0%B3%81-%E0%B2%B8%E0%B2%BE%E0%B2%A7%E0%B3%8D%E0%B2%AF/

ಟಿಪ್ಪು ಜಯಂತಿ - ಸರಕಾರಕ್ಕೆ ಸಹಿಷ್ಣುತೆ ಇಲ್ಲವೇ?

ಸುಮಾರು ಏಳೆಂಟು ವರ್ಷಗಳ ಹಿಂದೆ ಕೇರಳದ ಒಬ್ಬ ಸಹೋದ್ಯೋಗಿ ಕೇಳಿದ ಪ್ರಶ್ನೆ - 'ನೀವೆಲ್ಲಾ ಯಾಕೆ ಟಿಪ್ಪುವನ್ನು ಮೈಸೂರು ಹುಲಿ ಎಂದು ಹಾಡಿ ಹೊಗಳುತ್ತೀರಿ? ನಮ್ಮಲ್ಲಿ ಟಿಪ್ಪುವಿಗೆ ಮೂರು ಕಾಸಿನ ಬೆಲೆಯಿಲ್ಲ. ಅವನೊಬ್ಬ ದ್ರೋಹಿ, ನೀಚ, ಕೊಲೆಗಾರ ಅಂತಲೇ ಪ್ರಸಿದ್ಧಿ'. ಹಾಗೆಯೇ ಅವನೆಷ್ಟು ಕ್ರೂರಿ ಅಂತ ವಿವರಿಸಲು ಟಿಪ್ಪುವಿನ ಕುರಿತು ಪ್ರಚಲಿತವಾಗಿದ್ದ ಕೆಲ ಕಥೆಗಳನ್ನು ಹೇಳಿದ.

ಅವನ ಪ್ರಶ್ನೆ ಮತ್ತು ಕಥೆಗಳು ನನ್ನನ್ನು ತಬ್ಬಿಬ್ಬು ಮಾಡಿತು. ನಾನು ಮಾತ್ರವಲ್ಲ ನನ್ನ ಹಾಗೆ ಕರ್ನಾಟಕದಲ್ಲಿ ಓದಿದ ಇತರೇ ಸಹೋದ್ಯೋಗಿಗಳು ಕೂಡಾ! ಯಾಕೆಂದರೆ ಅದುತನಕ ನಾವ್ಯಾರು ಟಿಪ್ಪುವಿನ ಕುರಿತು ಅಷ್ಟೊಂದು ಕೆಟ್ಟ ಕಥೆಗಳನ್ನು ಕೇಳಿರಲಿಲ್ಲ. ಮೈಸೂರು ಹುಲಿ ಪಾಠ ಓದಿದ್ದ ನಮ್ಮ ಮಟ್ಟಿಗೆ ಬ್ರಿಟಿಷರ ವಿರುದ್ಧ ಹೋರಾಡಿದ ಆತ ಗಾಂಧಿ, ಬೋಸ್ ಸಾಲಿನಲ್ಲಿಯೇ ಸ್ಥಾನ ಪಡೆದಿದ್ದ!.

ಆ ಸಹೋದ್ಯೋಗಿ ಹೇಳಿದ ಕಥೆಗಳನ್ನು ಕೇಳಿದ ಮೇಲೆ ಟಿಪ್ಪುವಿನ 'ಸಾಧನೆಗಳ' ಕುರಿತು ಮಾಹಿತಿ ಹುಡುಕಿದೆ. ಅವಾಗ ಅವನೆಂಥ ಅಧ್ವಾನಗಳನ್ನು ಮಾಡಿದ್ದ ಎಂಬುವುದು ತಿಳಿಯಿತು. ಅಷ್ಟೇ ಅಲ್ಲ ಓಟು, ಓಲೈಕೆ ರಾಜಕಾರಣದಲ್ಲಿ ನಮ್ಮ ಸರಕಾರಗಳು ಮತ್ತು ಎಡಪಂಥೀಯ ಬುದ್ಧಿಜೀವಿಗಳು ಅವನನ್ನು ಹೀರೋ ಮಾಡಿರುವ ಅಧ್ವಾನ ಎಂತಹದ್ದು ಎಂದು ತಿಳಿಯಿತು. ಚರಿತ್ರೆಯನ್ನು ತಿರುಚಿರುವ ಪರಿಣಾಮ ಅದೆಷ್ಟೋ ಜನರ ಮನಸ್ಸಿನಲ್ಲಿ ಟಿಪ್ಪು ಇನ್ನೂ ಹಿರೋ ಆಗಿಯೇ ಇದ್ದಾನೆ.

ಇದೆಲ್ಲಾ ಸಾಲದು ಎಂಬಂತೆ ಈಗ ಸರಕಾರ ಟಿಪ್ಪು ಜಯಂತಿ ಎಂಬ ಕಲ್ಲು ಹೊಡೆದು ಮತ್ತೆ ಕೆಸರೆರಚಾಟ ಪ್ರಾರಂಭಿಸಿದೆ.ಟಿಪ್ಪುವಿನ ಕುರಿತು ಅಷ್ಟೊಂದು controversy ಇದ್ದಾಗ್ಯೂ ಟಿಪ್ಪು ಜಯಂತಿ ಆಚರಣೆಯ ಹಟ ಏತಕ್ಕೆ?.ಇದು ಜಾತಿಯ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ತಾನೆ?.ಇದೇ controversy ಒಬ್ಬ ಹಿಂದೂ ರಾಜನ ಮೇಲಿದ್ದರೆ ನೀವು ಈ ಆಚರಣೆಯನ್ನು ನಿಲ್ಲಿಸುತ್ತಿರಲಿಲ್ಲವೇ?. ಇಷ್ಟೊಂದು ಪ್ರತಿಭಟನೆ ನಂತರವೂ ಟಿಪ್ಪು ಜಯಂತಿ ಮಾಡಿಯೇ ಸಿದ್ಧ ಅನ್ನುತ್ತೀರಲ್ಲ ಜನರ ಭಾವನೆಗಳ ಕುರಿತು ನಿಮಗೆ ಸಹಿಷ್ಣುತೆಯೇ ಇಲ್ಲವೇ?


http://kannadaforum.net/thread/4609-%E0%B2%9F%E0%B2%BF%E0%B2%AA%E0%B3%8D%E0%B2%AA%E0%B3%81-%E0%B2%9C%E0%B2%AF%E0%B2%82%E0%B2%A4%E0%B2%BF-%E0%B2%B8%E0%B2%B0%E0%B2%95%E0%B2%BE%E0%B2%B0%E0%B2%95%E0%B3%8D%E0%B2%95%E0%B3%86-%E0%B2%B8%E0%B2%B9%E0%B2%BF%E0%B2%B7%E0%B3%8D%E0%B2%A3%E0%B3%81%E0%B2%A4%E0%B3%86-%E0%B2%87%E0%B2%B2%E0%B3%8D%E0%B2%B2%E0%B2%B5%E0%B3%87/

ಪ್ರಶಸ್ತಿ ಹಿಂತಿರುಗಿಸುತ್ತಿರುವ ಸಾಹಿತಿಗಳೇ...

ನಯನತಾರಾ ಸೆಹೆಗಲ್‌ರಿಂದ ಪ್ರಾರಂಭವಾದ ಪ್ರಶಸ್ತಿ ಹಿಂತಿರುಗಿಸುವ ಕಾರ್ಯಕ್ರಮ ಇವತ್ತು ದೊಡ್ಡ ಅಭಿಯಾನವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಧಕ್ಕೆ ಆಗುತ್ತಿದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ, ಸರಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕಾರಣಗಳನ್ನೊಡ್ಡಿ ಪ್ರಶಸ್ತಿ ಹಿಂತಿರುಗಿಸುತ್ತಿರುವ ಸಾಹಿತಿಗಳಿಗೆ ಕೆಲವೊಂದು ಪ್ರಶ್ನೆಗಳು.

ಭಾರತ ಸ್ವಾತಂತ್ರ್ಯವಾದಾಗಿನಿಂದಲೂ ವಿಶ್ವವಿದ್ಯಾಲಯಗಳು, ಶಿಕ್ಷಣ ಇಲಾಖೆ, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಪತ್ರಿಕಾ ಮಾಧ್ಯಮ ಹೀಗೆ ಸಾರ್ವಜನಿಕರಿಗೆ ಜ್ಞಾನದ ಮತ್ತು ಮಾಹಿತಿಯ ಮೂಲಗಳು ಯಾವುದೆಲ್ಲಾ ಇದ್ದವೋ ಅವನ್ನೆಲ್ಲಾ ತಮ್ಮ ಸ್ವಹಿತಾಸಕ್ತಿಗಾಗಿ ರಾಜಕೀಯ ಪ್ರಭಾವ ಬಳಸಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರಿ. ನಮ್ಮ ದೇಶದ ವಿಶ್ವವಿದ್ಯಾಲಯಗಳು ಎಡಪಂಥೀಯ ಧೋರಣೆಗಳನ್ನು ಪ್ರಚಾರ ಮಾಡುವ ಕೇಂದ್ರಗಳಾಗಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಯಾವಾಗ ಮಾಹಿತಿ ತಂತ್ರಜ್ಞಾನದ ಮೂಲಕ ಮಾಹಿತಿ ಸ್ಫೋಟ ಆಯಿತೋ ಅಲ್ಲಿಯವರೆಗೆ ನಿಮ್ಮ ಧೋರಣೆಗಳು, ನಿಲುವುಗಳು ಮಾತ್ರ ಪ್ರಕಟವಾಗುತ್ತಿದ್ದವು. ನಿಮ್ಮ ಧೋರಣೆಗಳಿಗೆ ವಿರುದ್ಧವಾಗಿ ಧ್ವನಿ ಎತ್ತಿದವರನ್ನೆಲ್ಲಾ ನಿಮ್ಮ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಬಗ್ಗುಬಡಿದಿರಿ. ಹೀಗೆ ಮಾಡುವ ಮೂಲಕ ನೀವು ಹಲವು ದಶಕಗಳ ಕಾಲ ನಿಮ್ಮ ಧೋರಣೆಗಳನ್ನು ಒಪ್ಪದವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡಲಿಲ್ಲವೇ? ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ನಿಮಗ್ಯಾಕೆ ಪರಕಿಕೊಳ್ಳುವಂತಾಗುತ್ತದೆ? ಅಭಿವ್ಯಕ್ತಿ ಸ್ವಾತಂತ್ರ್ಯ ನಿಮ್ಮ ಧೋರಣೆಗಳಲ್ಲಿ ನಂಬಿಕೆ ಇದ್ದವರಿಗೆ ಮಾತ್ರವೇ?

ಹಿಂದೂ ದೇವತೆಗಳ ಅವಹೇಳನ, ಹಿಂದೂ ಸಂಸ್ಕೃತಿಯ ಅವಮಾನ, ಹಿಂದೂ ಸಂಪ್ರದಾಯದ ಬಗ್ಗೆ ನೀವಾಡುವ ತುಚ್ಚವಾದ ಮಾತುಗಳಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ನಿಮಗನಿಸುವುದಿಲ್ಲವೇ?

ಯಾವತ್ತೂ ಪ್ರಗತಿಪರ ಚಿಂತಕ, ಪ್ರಗತಿಪರ ಕೃಷಿಕ, ಪ್ರಗತಿಪರ ಹೋರಾಟಗಾರ ಎಂಬ ಶಬ್ದಗಳೊಂದಿಗೆ ಆಟವಾಡುತ್ತೀರಲ್ಲಾ, ಈ ’ಪ್ರಗತಿಪರ’ ಎಂಬುದರ ಅರ್ಥ ಏನು? ಸೋಷಲಿಸ್ಟಿಕ್ ಧೋರಣೆಗಳಿರುವುದೇ, ನಾಸ್ತಿಕವಾದ ಪ್ರತಿಪಾದಿಸುವುದೇ ಅಥವಾ ವೈಜ್ಞಾನಿಕ ಬೆಳವಣಿಗೆಗಳನ್ನು ಜನತೆಯ ದೇಶದ ಪ್ರಗತಿಗೆ ಅಳವಡಿಸಿಕೊಳ್ಳುವುದೇ?

ವೈಜ್ಞಾನಿಕ ಬೆಳವಣಿಗೆಗಳ ಅಳವಡಿಕೆಯೇ ಆದರೆ ಈ ದಿಸೆಯಲ್ಲಿ ಸರಕಾರ ನಡೆಸುವ ಕಾರ್ಯಕ್ರಮಗಳ ಕುರಿತು (ಉದಾ: ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ) ನೀವ್ಯಾಕೆ ಚಕಾರ ಎತ್ತುವುದಿಲ್ಲ? ಇದೆಲ್ಲಾ ಬೇಡ ಇಸ್ರೋ ವಿಜ್ಞಾನಿಗಳು ಮಂಗಳಯಾನ ನೌಕೆಯ ಉಡಾವಣೆಗೆ ಮೊದಲು ಮಾಡಿದ ಪೂಜೆಯ ಬಗ್ಗೆ ಅಷ್ಟೆಲ್ಲಾ ವಿಡಂಬನೆ ಮಾಡಿದ ನೀವು ಆ ನೌಕೆ ಯಶಸ್ವಿಯಾದಾಗ ಒಂದು ಒಳ್ಳೆಯ ಮಾತನ್ನಾಡಲಿಲ್ಲವಲ್ಲಾ? ಇದೇ ನೀವು ವೈಜ್ಞಾನಿಕ ಪ್ರಗತಿಗೆ ಕೊಡುವ ಬೆಂಬಲವೇ?

ನಾಸ್ತಿಕವಾದವೇ ನಿಮ್ಮ ಪ್ರಕಾರ ಪ್ರಗತಿಯ ಸಂಕೇತವಾದರೆ ಕೇವಲ ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನೇಕೆ ಪ್ರಶ್ನಿಸುತ್ತೀರಿ. ಇತರೇ ಧರ್ಮದವರ ನಂಬಿಕೆಗಳು ನಿಮ್ಮ ನಾಸ್ತಿಕವಾದದೊಳಗೆ ಸರಿಹೊಂದುತ್ತದೆಯೇ?

ನನಗೆ ಹೇಗೆ ನನ್ನ ನಂಬಿಕೆಗಳನ್ನು ಅನುಸರಿಸಲು ವ್ಯಕ್ತಿಸ್ವಾತಂತ್ರ್ಯವಿದೆಯೋ ಹಾಗೆಯೇ ಇತರ ಧರ್ಮೀಯರಿಗೂ ಅದೇ ಸ್ವಾತಂತ್ರ್ಯವಿದೆ ಎಂದು ನಂಬಿದವ ನಾನು. ಆದರೆ ನನ್ನಂಥವರು ನಿಮ್ಮ ದೃಷ್ಟಿಯಲ್ಲಿ ಕೋಮುವಾದಿಗಳಾಗುತ್ತೇವೆ ಯಾಕೆಂದರೆ ನನ್ನಂಥವರು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಪ್ರಹಾರ ಮಾಡುವುದಿಲ್ಲ. ಹಾಗೆಂದು ನನಗೆ ಸರಿಕಾಣದ ಅವೈಜ್ಞಾನಿಕ ಅನ್ನಿಸಿದ ಸಂಪ್ರದಾಯಗಳನ್ನು ನಾನು ಅನುಸರಿಸುವುದಿಲ್ಲ. ಹಾಗಿದ್ದೂ ಅದು ಹೇಗೆ ನನ್ನಂಥವರು ಕೋಮುವಾದಿಗಳಾಗುತ್ತಾರೆ? ಸ್ವಲ್ಪ ವಿವರಿಸುತ್ತೀರಾ?

ಸೋಷಲಿಸ್ಟಿಕ್ ಧೋರಣೆಗಳೇ ಪ್ರಗತಿಯ ಸಂಕೇತವಾದರೆ ನಿಮ್ಮಲ್ಲಿ ಎಷ್ಟು ಜನ ಸೋಷಲಿಸ್ಟಿಕ್ ಧೋರಣೆಗಳಿಗನುಗುಣವಾಗಿ ನಡೆದುಕೊಂಡಿದ್ದೀರಿ? ಸೋಷಲಿಸಮ್‌ನ ಮೂಲ ಸಿದ್ಧಾಂತಗಳಲ್ಲೊಂದಾದ ’ಹಂಚಿಕೊಳ್ಳುವಿಕೆ’ ಎಷ್ಟರಮಟ್ಟಿಗೆ ಅನುಸರಿಸುತ್ತೀರಿ?

ಇನ್ನು ನಿಮ್ಮ ಹೋರಾಟ ಕೇವಲ ಸಮಾನತೆಗೆ, ಸಮಾಜದ ಹಿತಕ್ಕೆ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಎಂದಿಟ್ಟುಕೊಳ್ಳೋಣ. ಈ ದಿಸೆಯಲ್ಲಿ ನೀವು ಏನೆಲ್ಲಾ ಮಾಡಿದ್ದೀರಿ?

ಇತ್ತೀಚೆಗೆ ದಾದ್ರಿಯಲ್ಲಿ ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ ನಲುವತ್ತೈದು ಲಕ್ಷ ಪರಿಹಾರ ಘೋಷಣೆ ಆಯಿತು ಅದೇ ಸಮಯದಲ್ಲಿ ಉಗ್ರರಲ್ಲಿ ಹೋರಾಡುತ್ತಾ ಮಡಿದ ಸೈನ್ಯಾಧಿಕಾರಿಗೆ ಅದರ ಅರ್ಧದಷ್ಟೂ ಪರಿಹಾರ ಸಿಗಲಿಲ್ಲ. ಇವತ್ತು ನಮ್ಮ ದೇಶದಲ್ಲಿ ಪರಿಹಾರದ ಮೊತ್ತ ಜಾತಿಯ ಆಧಾರದಲ್ಲಿ ಕೊಡಲಾಗುತ್ತದೆ ಎಂಬುದನ್ನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ಇದು ಅಸಮಾನತೆ ಅಲ್ಲವೇ? ಇದರ ವಿರುದ್ಧ ಧ್ವನಿ ಎತ್ತುವ ಧೈರ್ಯ ನಿಮ್ಮಲ್ಲಿ ಒಬ್ಬನಾದರೂ ತೋರಿದ್ದಿದೆಯಾ?

ನಾನು ಧರ್ಮದ - ಜಾತಿಯ ಹೆಸರಿನಲ್ಲಿ ಜಗಳವಾಡುವುದನ್ನು, ಕೊಲ್ಲುವುದನ್ನು ಬೆಂಬಲಿಸುತ್ತಿಲ್ಲ. ಆದರೆ ಪರಿಹಾರ ಎಲ್ಲರಿಗೂ ಸಮನಾಗಿರಬೇಕು ಅಲ್ಲವೇ?

ಅಷ್ಟಕ್ಕೂ, ಸ್ವಾತಂತ್ರ್ಯ ಬಂದು ಆರು ದಶಕಗಳೇ ಕಳೆದರೂ, ಮತ್ತು ಆ ಆರು ದಶಕಗಳಲ್ಲಿ ಹೆಚ್ಚಿನ ಕಾಲ ನೀವು ಬೆಂಬಲಿಸುವ ಸರಕಾರಗಳಿದ್ದೂ, ನೀವೆಲ್ಲಾ ದಿನೇ ದಿನೇ ಜಾತಿ ಜಾತಿ ಎಂದು ಕೂಗಿಕೊಳ್ಳುತ್ತಿದ್ದೂ ಜಾತಿ ವ್ಯವಸ್ಥೆ ಇನ್ನೂ ಉಳಿದಿದೆ, ಮತೀಯ ಗಲಭೆಗಳು ಮುಗಿಯುತ್ತಲೇ ಇಲ್ಲ ಎಂದರೆ ಅದು ಆ ಸರಕಾರಗಳ ಮತ್ತು ನಿಮ್ಮ ವೈಫಲ್ಯ ಎಂದು ನಿಮಗನಿಸುವುದಿಲ್ಲವೇ?

ನಿಜ ಹೇಳಬೇಕೆಂದರೆ ನಿಮಗ್ಯಾರಿಗೂ ಜಾತಿ ವ್ಯವಸ್ಥೆ ಸಾಯುವುದು ಬೇಕಿರಲಿಲ್ಲ. ಅದಕ್ಕಾಗಿಯೇ ನೀವು ದಿನನಿತ್ಯವೂ ಜಾತಿಯ ಜಪ ಮಾಡಿದಿರಿ. ಅದು ಹೊಗೆಯಾಡುತ್ತಿದ್ದರಷ್ಟೇ ನಿಮಗೆ ನಿಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಸಾಧ್ಯ ತಾನೇ?

ಜಾತಿ ವ್ಯವಸ್ಥೆಯನ್ನು ನಿರ್ಮೂಲನ ಮಾಡಲು ಜಾತಿಯಾಧಾರಿತ ನಿಯಮಗಳನ್ನು ಮಾಡುವುದು ಹೇಗೆ ಸಹಕಾರಿಯಾಗುತ್ತದೆ ಸ್ವಲ್ಪ ವಿವರಿಸಬಹುದೇ?

ಇನ್ನು ಸಾಮಾಜಿಕ ಸಮಸ್ಯೆಗಳತ್ತ ಬರೋಣ.

ಕಳೆದ ಎರಡು ಮೂರು ವರ್ಷಗಳಲ್ಲಿ ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೆ ಅತ್ಯಾಚಾರಗಳು ಬಲುದೊಡ್ಡ ಸಮಸ್ಯೆಯಾಯಿತು. ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ನಡೆದ ಅಮಾನವೀಯ ಅತ್ಯಾಚಾರ (ನಿರ್ಭಯಾ ಪ್ರಕರಣ) ಸಂದರ್ಭದಲ್ಲಿ ಆಗಿನ ದೆಹಲಿ ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ ನೀಡಿದಾಗ ಎಷ್ಟು ಜನ ಮಹಿಳಾ ಸಂವೇದಿ ಬರಹಗಾರರು ಪ್ರಶಸ್ತಿ ಹಿಂತಿರುಗಿಸಿದಿರಿ? ಪುಟ್ಟ ಮಗುವೊಂದರ ಮೇಲೆ ಬೆಂಗಳೂರಿನ ಶಾಲಾ ಸಿಬ್ಬಂದಿಯೊಬ್ಬ ಅತ್ಯಾಚಾರ ನಡೆಸಿದ. ಆ ವಿಷಯ ಸದನದಲ್ಲಿ ಚರ್ಚೆಯಾಗುತ್ತಿರುವಾಗ ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದರು, ನಂತರ ‘ನಾವೇನು ಮಾಡುವುದಕ್ಕಾಗುತ್ತದೆ?’ ಎಂದು ಕೇಳಿದರು. ನಂತರವೂ ಒಂದಷ್ಟು ಅಂತಹ ಪ್ರಕರಣಗಳು ಬೆಳಕಿಗೆ ಬಂತು. ಎಲ್ಲವೂ ಸರಕಾರೀ ಹಿಡಿತದಲ್ಲೇ ಕಾರ್ಯನಿರ್ವಹಿಸಬೇಕೆನ್ನುವ ಸೋಷಲಿಸ್ಟ್ ಮಹಾಶಯರೇ, ಪ್ರಗತಿಪರ ಲೇಖಕರೇ ನಿಮ್ಮಲ್ಲಿ ಒಬ್ಬರಾದರೂ ಪುಟ್ಟ ಕಂದಮ್ಮಗಳ ಮೇಲೆ ಆಗುತ್ತಿರುವ ಅನಾಚಾರಕ್ಕೆ ಪ್ರತಿರೋಧವಾಗಿ ಪ್ರಶಸ್ತಿ ಹಿಂತಿರುಗಿಸಿದ್ದೀರಾ? ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದೀರಾ?

ಈ ಸಮಸ್ಯೆಯ ಮೂಲ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿದೆ ಎಂದು ನಿಮ್ಮ ಬುದ್ಧಿಗೆ ಅನ್ನಿಸುವುದಿಲ್ಲವೇ? ನೀವುಗಳೇ ತುಂಬಿಕೊಂಡಿರುವ ಪಠ್ಯಪುಸ್ತಕ ಸಮಿತಿಗಳು ಮತ್ತವು ರೂಪಿಸುತ್ತಿರುವ ಪಠ್ಯವ್ಯವಸ್ಥೆಯಲ್ಲಿದೆ ಅನ್ನಿಸುವುದಿಲ್ಲವೇ?

ಇನ್ನು ಶಿಕ್ಷಣ ವ್ಯವಸ್ಥೆಗೆ ಬರೋಣ. ಸೋಷಲಿಸ್ಟ್ ಸಿದ್ಧಾಂತವನ್ನು ಪ್ರತಿಪಾದಿಸುವ ನೀವುಗಳು ನಮ್ಮ ರಾಜ್ಯ ಸರಕಾರ ಶಿಕ್ಷಣ ವ್ಯವಸ್ಥೆಯ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವನ್ನು ಯಾಕೆ ಖಂಡಿಸುವುದಿಲ್ಲ. ಈ ನಿರ್ಲಕ್ಷ್ಯದಿಂದ ನಮ್ಮ ಸರಕಾರಿ ಶಾಲೆಗಳು ಸೊರಗಿ ಮುಚ್ಚಿಹೋಗುತ್ತಿವೆ. ಸರಕಾರ ಶಿಕ್ಷಕರ ನೇಮಕಾತಿ ಮಾಡುತ್ತಿಲ್ಲ. ಬೇಕೆಂದೇ ಸರಕಾರಿ ಶಾಲೆಗಳನ್ನು ಸೊರಗಿಸಿ ಖಾಸಗಿ ಶಾಲೆಗಳನ್ನು ಬಲಗೊಳಿಸುವ ಕೆಲಸ ಮಾಡುತ್ತಿದೆಯಲ್ಲಾ ಇದರ ಬಗ್ಗೆ ಯಾಕೆ ನೀವು ಚಕಾರ ಎತ್ತುವುದಿಲ್ಲ. ಕನ್ನಡ ಶಾಲೆಗಳು ಉಳಿಯಬೇಕು ಬೆಳೆಯಬೇಕು ಅನ್ನುತ್ತೀರಲ್ಲ ಒಂದು ಕನ್ನಡ ಶಾಲೆ ಕಟ್ಟುವ ಪ್ರಯತ್ನ ಮಾಡಿದ್ದೀರಾ? ದೇವನೂರ ಮಹಾದೇವ ಅವರು ಕಳೆದ ವರ್ಷ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದರ ಹೊರತು ಬೇರೆ ಒಬ್ಬರೂ ಒಂದು ಪೈಸೆ ಪ್ರತಿಭಟನೆಯ ರೂಪದಲ್ಲಿ ಹಿಂತಿರುಗಿಸಿಲ್ಲ. ಯಾಕೆ ಹೀಗೆ?

ಒಂದೈದು ವರ್ಷ ಸಾಹಿತ್ಯ ಸಮ್ಮೇಳನಗಳನ್ನು ನಿಲ್ಲಿಸಿ ಅಲ್ಲಿ ಪೋಲಾಗುತ್ತಿರುವ ಹಣದಿಂದ ಸರಕಾರಿ ಶಾಲೆಗಳನ್ನು ಬಲಗೊಳಿಸಿ ಎಂದು ಒಕ್ಕೊರಲಿನಿಂದ ಸರಕಾರಕ್ಕೆ ಹೇಳಿ ನೋಡೋಣ...

ಬಿಡಿ, ಸರಕಾರದ ಕಾರ್ಯವೈಖರಿಯೇ ನಿಮ್ಮ ಮುಖ್ಯ ಗುರಿ ಎಂದಾದರೆ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಅದೆಷ್ಟು ಹಗರಣಗಳಾದವು. ಕಲ್ಲಿದ್ದಲು, 2ಜಿ ಒಂದೇ ಎರಡೇ? ಇದ್ಯಾವುದೂ ದೇಶಕ್ಕೆ ನಷ್ಟ ಎಂದು ನಿಮಗೆ ಅನ್ನಿಸಲೇ ಇಲ್ಲವೇ? ದೇಶದ ಹಣ ಪೋಲಾಗುತ್ತಿದ್ದರೂ ಒಂದು ಶಬ್ದ ಸಾಹಿತ್ಯಿಕ ವಲಯದಿಂದ ಕೇಳಿ ಬರಲಿಲ್ಲ ಅಲ್ಲವೇ? ಆಗ ಮೂಕರಂತೆ ಕುಳಿತವರು ಈಗ್ಯಾಗೆ ಬಡಬಡಿಸಿಕೊಳ್ಳುತ್ತಿದ್ದೀರಿ?

ಐಟಿ ಕ್ಷೇತ್ರ ಬೆಳೆದಾಗ ಅದನ್ನು ದೂಷಿಸಿದಿರಿ. ಐಟಿ ಬಿಟಿ ಹುಡುಗ ಹುಡುಗಿಯರಿಗೆ ಸಂವೇದನೆಗಳೇ ಇಲ್ಲ ಅಂತ ಅವರನ್ನು ಒಂದರ್ಥದಲ್ಲಿ ಅಸ್ಪೃಶ್ಯರಂತೆ ನೋಡಿದಿರಿ, ಗೇಲಿ ಮಾಡಿದಿರಿ. ಈಗ ಅದೇ ಐಟಿ ಕ್ಷೇತ್ರದಲ್ಲಿ ಎಷ್ಟು ಸೃಜನಶೀಲ ಬರಹಗಾರರು ಹುಟ್ಟಿಕೊಂಡಿದ್ದಾರೆ. ಆಗಲೂ ನಿಮಗೆ ಕಾಡುತ್ತಿದ್ದುದು ಅಭದ್ರತೆ. ಆರ್ಥಿಕ ಉದಾರೀಕರಣದಿಂದ ಸಮಾಜದ ಮೇಲೆ ನಿಮಗಿದ್ದ ಹಿಡಿತ ಸಡಿಲವಾಗುತ್ತಿದೆ ಎಂಬ ಭಯ. ಹಾಗಾಗಿ ಸರಕಾರದ ಸಖ್ಯದಿಂದ ನಿಮ್ಮ ಬೇಳೆ ಬೇಯಿಸಲು ಪ್ರಾರಂಭಿಸಿದಿರಿ. ಈಗ ಕೇಂದ್ರದಲ್ಲಿ ನಿಮ್ಮನ್ನು ಮೂಸಿಯೂ ನೋಡದ ಸರಕಾರ ಬಂದಿದೆ. ಹಾಗಾಗಿ ನಿಮಗೆ ತಲೆಬಿಸಿ ಪ್ರಾರಂಭವಾಗಿದೆ.

ನಿಜ ಹೇಳಬೇಕೆಂದರೆ ಸಮಾನತೆಯನ್ನು ತಂದದ್ದು ಆರ್ಥಿಕ ಉದಾರೀಕರಣ! ಖಾಸಗಿ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಕೊಡಲು ಜಾತಿ ಕೇಳುವುದಿಲ್ಲ. ನೀವುಗಳು ನಮ್ಮನ್ನು ’e-ಕೂಲಿ’ಗಳು ಎಂದು ವ್ಯಂಗವಾಡಬಹುದು. ಆದರೆ ಇವತ್ತು ಭಾರತದಲ್ಲಿ ಬಹಳಷ್ಟು ಸಂಶೋಧನೆ ಆಗುತ್ತಿದೆ. ಭಾರತದಲ್ಲಿ ಹೊಸ ತಂತ್ರಜ್ಞಾನ ಕಂಪನಿಗಳು ಹುಟ್ಟಿಕೊಳ್ಳುತ್ತಲೇ ಇವೆ. ಬೆಂಗಳೂರು ಕೂಡಾ ಒಂದು start-up hub ಆಗಿದೆ. ಇದಕ್ಕೆ ಉತ್ತೇಜನ ಕೊಡಲು ಸರಕಾರಕ್ಕೆ ತಿಳಿಹೇಳಿ. ತನ್ಮೂಲಕ ಆರ್ಥಿಕತೆಯನ್ನು ಬಲಗೊಳಿಸಲು ಸಹಕರಿಸಿ!

ಖಾಸಗಿ ವಲಯದಲ್ಲಿ ರಾಜಕೀಯವೇ ನಡೆಯುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ರಾಜಕೀಯ ಇಲ್ಲದ ಕ್ಷೇತ್ರ ಯಾವುದಿದೆ ಹೇಳಿ? ಆದರೆ ಹಿಂದಿನ ವ್ಯವಸ್ಥೆಯಲ್ಲಿ ನಿಮ್ಮ ರಾಜಕೀಯದ ನಡುವೆ ಅವಕಾಶ ವಂಚಿತರು ತೆಪ್ಪಗೆ ಕೂರಬೇಕಿತ್ತು. ಇವತ್ತು ಹಾಗಿಲ್ಲ; ಪ್ರತಿಭೆ ಇದ್ದರೆ ಅವಕಾಶಗಳಿಗೆ ಕಡಿಮೆಯಿಲ್ಲ. ನಿಮ್ಮ ಧೋರಣೆಗಳಿಗೇ ತಲೆ ಅಲ್ಲಾಡಿಸುತ್ತಾ ಕೂರಬೇಕಾದ ಸಂದಿಗ್ಧತೆ ಇಂದಿಲ್ಲ.

Wednesday, September 16, 2015

ಥೈಲ್ಯಾಂಡ್ ಪ್ರವಾಸೋದ್ಯಮದ ಮೇಲೆ ಪ್ರಹಾರವೇ?




 
ಆಗೊಸ್ಟ್ 17ರ ಸಂಜೆ ಬ್ಯಾಂಕಾಕಿನ ಎರವಾನ್ ದೇವಾಲಯಲ್ಲಿ ನಡೆದ ಬಾಂಬ್ ಸ್ಫೋಟ ಬ್ಯಾಂಕಾಕ್ ಜನತೆಯನ್ನು ಬೆಚ್ಚಿ ಬೀಳಿಸಿದೆ. ಬ್ಯಾಂಕಾಕಿನಲ್ಲಿ ಇಂತಹ ಘಟನೆ ಈ ಮೊದಲು ಸಂಭವಿಸಿರಲಿಲ್ಲ. ಹಿಂದೆ ಬಾಂಬ್ ಸ್ಫೋಟಗಳು ನಡೆದಾಗ ಅವು ಒಂದು ನಿರ್ದಿಷ್ಟ ಗುಂಪನ್ನು ಗುರಿಯಾಗಿಸಿಕೊಂಡು ನಡೆದಿತ್ತು. ಅಷ್ಟೇ ಅಲ್ಲ ಈ ತೀವ್ರತೆಯಲ್ಲಿ ಇಷ್ಟೊಂದು ಜನರನ್ನು ಬಲಿ ತೆಗೆದುಕೊಂಡ ದೊಡ್ಡ ಮಟ್ಟಿನ ಸ್ಫೋಟ ನಡೆದಿರಲಿಲ್ಲ.

ಸಾಮಾನ್ಯವಾಗಿ ದಕ್ಷಿಣ ಏಷ್ಯಾ ದೇಶಗಳ ಪೈಕಿ ಥೈಲ್ಯಾಂಡ್ ಒಂದು ಸುರಕ್ಷಿತ ರಾಷ್ಟ್ರವೆಂದು ಪರಿಗಣಿಸಲ್ಪಡುತ್ತದೆ. ದಕ್ಷಿಣದ ಗಡಿಪ್ರದೇಶವನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಪ್ರಾಂತ್ಯಗಳಲ್ಲೂ ಶಾಂತಿ ಇದೆ. ಸುರಕ್ಷತೆ, ನೈಸರ್ಗಿಕ ಸೌಂದರ್ಯ, ಎಲ್ಲಾ ಆರ್ಥಿಕ ವರ್ಗದ ಜನರಿಗೂ ಕೈಗೆಟಕುವ ಸವಲತ್ತುಗಳು, ಸುಲಭ ಜೀವನ, ಸುಲಭವಾಗಿ ಸಿಗುವ ವೀಸಾ ಮುಂತಾದುವುಗಳಿಂದ ಥೈಲ್ಯಾಂಡ್ ಆಕರ್ಷಣೀಯವಾಗುತ್ತದೆ. ಸಾಮಾನ್ಯವಾಗಿ ಪ್ರವಾಸಿಗರ ಸ್ವರ್ಗ ಎಂದು ಪ್ರಸಿದ್ಧವಾಗಿದ್ದರೂ ಉದ್ಯೋಗಕ್ಕಾಗಿ, ಉದ್ಯಮಕ್ಕಾಗಿ ಇಲ್ಲಿ ಬಂದು ನೆಲೆಸಿದವರು ಬಹಳಷ್ಟು ಜನರಿದ್ದಾರೆ. ಹೆಚ್ಚೇಕೆ ನಿವೃತ್ತ ಜೀವನ ಮಾಡುವುದಕ್ಕಾಗಿ ಥೈಲ್ಯಾಂಡಿಗೆ ಬಂದು ನೆಲೆಸುವವರೂ ಇದ್ದಾರೆ; ಅದಕ್ಕಾಗಿಯೇ ನಿವೃತ್ತಿ ವೀಸಾ ಕೂಡಾ ಲಭ್ಯವಿದೆ. ಇಲ್ಲಿ ಬಂದು ನೆಲೆಸಿದವನ್ನು ಕಾರಣ ಕೇಳಿದರೆ ಸಾಮಾನ್ಯವಾಗಿ ಸಿಗುವ ಉತ್ತರ - ಇಲ್ಲಿ ಜೀವನ ಸುಲಭ, ಆರಾಮದಾಯಕ, ಸುರಕ್ಷಿತ ಹಾಗೂ ಥಾಯ್ ಜನರು ನಿರುಪದ್ರವಿಗಳು ಎಂಬ ಉತ್ತರ. ಇದು ಕೇವಲ ಭಾರತದಿಂದ ಬಂದು ನೆಲೆಸಿದವರ ಅಭಿಪ್ರಾಯವಲ್ಲ ಯುರೋಪ್ ಅಮೆರಿಕಾ ಮುಂತಾದ ಮುಂದುವರಿದ ದೇಶಗಳಿಂದ ಇಲ್ಲಿಗೆ ಜನ ಬಂದು ನೆಲೆಸುವುದೂ ಇದೇ ಕಾರಣಕ್ಕೆ.

ಈ ದೃಷ್ಟಿಯಿಂದ ಸ್ಫೋಟವನ್ನು ಹಲವು ಆಯಾಮಗಳಿಂದ ನೋಡಬೇಕಾಗುತ್ತದೆ. ಥೈಲ್ಯಾಂಡಿನಲ್ಲಿ ಗಮನಾರ್ಹವಾಗಿ ಕಾಣಸಿಗುವ ಸಂಘರ್ಷಗಳು ರಾಜಕೀಯ ಸಂಘರ್ಷಗಳು ಮಾತ್ರ. ಅಷ್ಟೇ ಅಲ್ಲ ಇಲ್ಲಿನ ಸಂಘರ್ಷಗಳಲ್ಲಿ, ದಂಗೆಗಳಲ್ಲಿ ಗುಂಡಿನ ಚಕಮಕಿ ರಕ್ತಕ್ರಾಂತಿ ಆದ ನಿದರ್ಶನಗಳು ತೀರಾ ವಿರಳ.

ಇದಕ್ಕೆ ಕಾರಣ ಅರಿತುಕೊಳ್ಳಲು ನಾವು ಥಾಯ್ ಚರಿತ್ರೆಯನ್ನು ಕೊಂಚ ನೋಡಬೇಕಾಗುತ್ತದೆ. ದಕ್ಷಿಣ ಏಷ್ಯಾ ದೇಶಗಳ ಪೈಕಿ ವಸಾಹತು ಆಡಳಿತಕ್ಕೆ ಒಳಪಡದೆ ಸ್ವತಂತ್ರವಾಗಿ ಉಳಿದ ಏಕೈಕ ದೇಶ ಥೈಲ್ಯಾಂಡ್. ಹೀಗೆ ಥೈಲ್ಯಾಂಡನ್ನು ಯುರೋಪಿಯನ್ ವಸಾಹತುಶಾಹಿಗಳಿಂದ ರಕ್ಷಿಸಿದ ಹಿರಿಮೆ 1851 ರಿಂದ 1910 ರವರೆಗೆ ಆಡಳಿತ ನಡೆಸಿದ ರಾಜ ಮೊಂಕುಟ್ (ರಾಮ ೪) ಮತ್ತು ಆತನ ಮಗ ರಾಜ ಚುಲಾಲೊಂಕಾರ್ನ್ (ರಾಮ ೫) ಇವರಿಗೆ ಸಲ್ಲುತ್ತದೆ. ಇವರೀರ್ವರೂ ಆಧುನಿಕ ವಿಜ್ಞಾನ, ಶಿಕ್ಷಣ ವ್ಯವಸ್ಥೆ, ರಸ್ತೆ, ರೈಲು, ಮುದ್ರಣ ತಂತ್ರಜ್ಞಾನ, ಆಡಳಿತ ಸೇವೆಯ ಮೂಲಕ ಹೊಸ ಆಡಳಿತ ವ್ಯವಸ್ಥೆ ಇವುಗಳನ್ನು ಥೈಲ್ಯಾಂಡಿಗೆ ಪರಿಚಯಿಸಿದರು. ಹಾಗಿದ್ದೂ ಆಡಳಿತಾತ್ಮಕವಾಗಿ ಥೈಲ್ಯಾಂಡ್ ಸಂಪೂರ್ಣ ರಾಜಪ್ರಭುತ್ವದ ಅಡಿಯಲ್ಲೇ ಇತ್ತು. ರಾಜನ ಕುರಿತು ಅಪಾರ ಗೌರವ ಮತ್ತು ರಾಜನನ್ನು ದೇವರಂತೆ ಪೂಜಿಸುವ ಸಂಸ್ಕೃತಿ ಥಾಯ್ ಸಮಾಜದಲ್ಲಿತ್ತು ಎಂಬುದನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ಹಾಗಾಗಿ ಸ್ವಾತಂತ್ರ್ಯ ಸಂಗ್ರಾಮ, ಪರಕೀಯ ಆಡಳಿತದ ವಿರುದ್ಧ ಹೋರಾಟದಂತಹ ಸಂಘರ್ಷಗಳು ಥಾಯ್ ಚರಿತ್ರೆಯಲ್ಲಿಯೇ ಇಲ್ಲ. 

೧೯೩೨ರಲ್ಲಿ ನಡೆದ ಸೇನೆ ಮತ್ತು ಆಡಳಿತ ಸೇವಾಧಿಕಾರಿಗಳು ನಡೆಸಿದ ದಂಗೆಯಿಂದ ಥೈಲ್ಯಾಂಡ್ ಸಾವಿಂಧಾನಿಕ ರಾಜಪ್ರಭುತ್ವವನ್ನು ಅಳವಡಿಸಿಕೊಂಡು ಪ್ರಜಾತಂತ್ರ ದೇಶವಾಯಿತು. ಈ ದಂಗೆ ಆಧಿನಿಕ ಥೈಲ್ಯಾಂಡ್‍ನ ಸುಮಾರು ೭೦೦ ವರುಷಗಳ ಇತಿಹಾಸದಲ್ಲಿ ದಾಖಲಾಗಿರುವ ಮೊದಲ ಆಂತರಿಕ ಸಂಘರ್ಷ. ಈ ದಂಗೆಯ ಮೂಲಕಾರಣದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪಾಶ್ಚಾತ್ಯ ಸಿದ್ಧಾಂತಗಳು ಹಾಗೂ ತತ್ವಗಳ ಪ್ರಭಾವ, ಚುಲಾಲೊಂಕಾರ್ನ್‍ ಉತ್ತರಾಧಿಕಾರಿಗಳು ಆತನಷ್ಟು ಶಕ್ತರಲ್ಲದೆ ಇದ್ದುದು ಇತ್ಯಾದಿ. ಗಮನಿಸಬೇಕಾದ ಅಂಶವೆಂದರೆ ಪ್ರಜಾತಂತ್ರ ವ್ಯವಸ್ಥೆ ಇದ್ದಾಗ್ಯೂ ರಾಜನ ಕುರಿತಾದ ಗೌರವ ಕುಂದಿಲ್ಲ. ಸಂವಿಧಾನದಲ್ಲಿ ರಾಜನಿಗೆ ಬಹಳ ಗೌರವಯುತವಾದ ಸ್ಥಾನ ಇದೆ ಮತ್ತು ಕೆಲ ವಿಶೇಷ ಅಧಿಕಾರಗಳಿವೆ. ಇನ್ನೊಂದು ಮುಖ್ಯ ಅಂಶ ಈ ದಂಗೆಯೂ ರಕ್ತಕ್ರಾಂತಿಯ ದಂಗೆಯಾಗಿರಲಿಲ್ಲ.

ಪ್ರಸ್ತುತ ರಾಜ ಭೂಮಿಬೋಲ್ ಅದುಲ್ಯತೇಜ (ರಾಮ೯) ದೇಶದ ಪ್ರಗತಿಗೆ ತನ್ನದೇ ಕೊಡುಗೆ ಕೊಟ್ಟು ತನ್ನ ಸ್ಥಾನದ ಗೌರವವನ್ನು ಹೆಚ್ಚಿಸಿರುವ ಕಾರಣದಿಂದ ರಾಜನ ಬಗ್ಗೆ ಜನರಲ್ಲಿ ಇಂದಿಗೂ ಅಪಾರ ಗೌರವವಿದೆ. ಇದರ ದ್ಯೋತಕವಾಗಿಯೇ ಥಾಯ್‍ಲ್ಯಾಂಡಿನ ಪ್ರತಿ ಕಡೆಯೂ ರಾಜನ ಭಾವಚಿತ್ರ ಕಂಗೊಳಿಸುತ್ತಿರುತ್ತದೆ. ರಾಜನನ್ನು ದೇವರೆಂಬಂತೆ ಆರಾಧಿಸುವವರೂ ಬಹಳಷ್ಟು ಮಂದಿ ಇದ್ದಾರೆ. ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಮೂಲಸೌಕರ್ಯಗಳ ಅಭಿವೃದ್ಧಿ, ಸಮಾಜಿಕ ಆರೋಗ್ಯ ಹೀಗೆ ಹವಾರು ವಿಷಯಗಳ ಅಭಿವೃದ್ಧಿಗೆ ಸರಕಾರೇತವಾಗಿ ರಾಜನ ವೈಯಕ್ತಿಕ ಯೋಜನೆಗಳು ಚಾಲ್ತಿಯಲ್ಲಿವೆ. ಇದುತನಕ ಥೈಲ್ಯಾಂಡಿನಲ್ಲಿ ನಡೆದ ಹತ್ತಕ್ಕೂ ಅಧಿಕ ಸೇನಾ ದಂಗೆ ಹಾಗೂ ಮಿಲಿಟರಿ ಆಡಳಿತ ಹೇರಿಕೆಯ ಸಂದರ್ಭದಲ್ಲಿ ರಾಜಕೀಯ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಮತ್ತು ಸುಸ್ಥಿರಗೊಳಿಸುವಲ್ಲಿ ರಾಜ ಮಹತ್ತರ ಪಾತ್ರವಹಿಸಿದ್ದಾನೆ ಎನ್ನಲಾಗುತ್ತದೆ.

ಥೈಲ್ಯಾಂಡಿನ ಪ್ರಸಕ್ತ ರಾಜಕೀಯ ಬಿಕ್ಕಟ್ಟಿನ ಮೂಲ ಹಿಂದಿನ ಪ್ರಧಾನಿ ತಕ್ಸಿನ್ ಚಿನವಾತ್ರನ ಆಡಳಿತಾವಧಿಯಲ್ಲಿ ಪ್ರಾರಂಭವಾಗುತ್ತದೆ. ೨೦೦೧ರಲ್ಲಿ ದೊಡ್ಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ತಕ್ಸಿನ್ ಹಲವಾರು ಜನಪ್ರಿಯ ಯೋಜನೆಗಳಿಂದ ಜನರ ಮೆಚ್ಚುಗೆ ಗಳಿಸುತ್ತಾನೆ. ಥೈಲ್ಯಾಂಡ್ ಚರಿತ್ರೆಯಲ್ಲೇ ಪೂರ್ಣಾವಧಿ ಅಧಿಕಾರದಲ್ಲಿದ್ದ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆ ತಕ್ಸಿನ್‍ನದ್ದು. ತಕ್ಸಿನ್ ಅಧಿಕಾರಾವಧಿಯಲ್ಲಿ ಥಾಯ್ ಆರ್ಥಿಕತೆಯಲ್ಲಿ ತುಂಬಾ ಚೇತರಿಕೆ ಆಗುತ್ತದೆ. ೨೦೦೫ರ ಮರುಚುನಾವಣೆಯಲ್ಲಿ ಥೈಲ್ಯಾಂಡ್ ಚರಿತ್ರೆಯಲ್ಲೇ ಅತೀ ಹೆಚ್ಚು ಜನ ಮತ ಚಲಾಯಿಸಿ ತಕ್ಸಿನ್‍ನನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ಆದರೆ ಖ್ಯಾತಿಯ ಜೊತೆಜೊತೆಗೆ ತಕ್ಸಿನ್ ಮೇಲೆ ಭ್ರಷ್ಟಾಚಾರ ಹಾಗೂ ರಾಜನಿಗೆ ಅವಮಾನ ಮಾಡಿದ ಆರೋಪ ಕೂಡಾ ಕೇಳಿಬರುತ್ತದೆ. ತಕ್ಸಿನ್ ವಿರೋಧಿಗಳ ಪ್ರತಿಭಟನೆ ಹೆಚ್ಚಿದಂತೆ ೨೦೦೬ ಸೆಪ್ಟಂಬರ್‌ನಲ್ಲಿ ಸೇನಾ ದಂಗೆಯ ಮೂಲಕ ಮಿಲಿಟರಿ ಆಡಳಿತ ಹೇರಲಾಗುತ್ತದೆ. ಮುಂದಿನ ವರುಷಗಳಲ್ಲಿ ನಡೆದ ಹಲವಾರು ರಾಜಕೀಯ ಬೆಳವಣಿಗೆಗಳ ಮಧ್ಯೆ ತಕ್ಸಿನ್ ಥೈಲ್ಯಾಂಡಿನಿಂದ ಪಲಾಯನಮಾಡುತ್ತಾನೆ. ೨೦೧೧ರ ಚುನಾವಣೆಯಲ್ಲಿ ತಕ್ಸಿನ್ ಬೆಂಬಲವಿದ್ದ ಫಿಯು ಥಾಯ್ ಪಾರ್ಟಿ ಬಹುಮತಗಳಿಸಿ ತಕ್ಸಿನ್ ಸಹೋದರಿ ಇಂಗ್ಲಕ್ ಥೈಲ್ಯಾಂಡಿನ ಮೊದಲ ಮಹಿಳಾ ಪ್ರಧಾನಮಂತ್ರಿಯಾಗುತ್ತಾಳೆ. ದೇಶದ ಹೊರಗಿದ್ದುಕೊಂಡು ತಂಗಿಯನ್ನು ನಿಯಂತ್ರಿಸುತ್ತಾ ಥಾಯ್ ರಾಜಕೀಯವನ್ನು ತಕ್ಸಿನ್ ನಿಯಂತ್ರಿಸುತ್ತಿದ್ದಾನೆ ಎಂಬ ಆರೋಪ ಕೇಳಿಬರುತ್ತದೆ. ೨೦೧೪ ಮೇ ತಿಂಗಳಲ್ಲಿ ಇಂಗ್ಲಕ್‍ಳನ್ನು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪದಡಿ ಅಧಿಕಾರದಿಂದಿಳಿಸಿ ಸೇನಾನಾಯಕ ಪ್ರಯುತ್ ಮಿಲಿಟರಿ ಆಡಳಿತ ಹೇರುತ್ತಾನೆ.

ದೇಶದ ಆಡಳಿತ ವ್ಯವಸ್ಥೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಮತ್ತೆ ಚುನಾವಣೆಗೆ ಅನುವು ಮಾಡಿಕೊಡುತ್ತೇನೆ ಎಂಬುದು ಪ್ರಯುತ್‍ನ ವಾಗ್ದಾನ. ಭ್ರಷ್ಟಾಚಾರದ ವಿರೋಧಿ ಕಾನೂನನ್ನು ಬಲಗೊಳಿಸಿದ್ದಲ್ಲದೆ ಹಲವಾರು ಹೊಸ ಸುಧಾರಣಾ ನಿಯಮಗಳನ್ನು ಪ್ರಯುತ್ ಆಡಳಿತ ಅನುಷ್ಠಾನಕ್ಕೆ ತರುತ್ತಿದೆ ಎಂಬುದು ಸಾಮಾನ್ಯ ಜನರಲ್ಲಿ ಬಹುತೇಕರ ಅಭಿಪ್ರಾಯ. ಆಡಳಿತದಲ್ಲಿ ಸುಧಾರಣೆಯಾಗಿದೆ, ಭ್ರಷ್ಟಾಚಾರ ಕಡಿಮೆಯಾಗಿದೆ, ಸರಕಾರಿ ಕಛೇರಿಗಳಲ್ಲಿ ಕೆಲಸ ಸುಗಮವಾಗಿ ಸಾಗುತ್ತಿದೆ ಎಂಬುದು ವ್ಯಾವಹಾರಿಕ ವಲಯದಲ್ಲಿ ಜನರಾಡಿಕೊಳ್ಳುತ್ತಿರುವ ಮಾತುಗಳು. ಈ ದೃಷ್ಟಿಯಿಂದ ಹಲವರಲ್ಲಿ ಪ್ರಯುತ್ ಆಡಳಿತದ ಬಗ್ಗೆ ಸಮಾಧಾನ ಇದೆ. ಆದರೆ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆದಷ್ಟು ಬೇಗ ಜಾರಿ ಮಾಡಬೇಕು ಎಂಬ ಬೇಡಿಕೆ ಕೂಡಾ ಕೆಲವೆಡೆ ಕೇಳಿ ಬರುತ್ತಿದೆ. ವ್ಯವಸ್ಥೆಯಲ್ಲಿ ತುಂಬಿರುವ ಭ್ರಷ್ಟತೆಯನ್ನು ಹೋಗಲಾಡಿಸಿ ಆಡಳಿತ ವ್ಯವಸ್ಥೆಯನ್ನು ಪೂರ್ಣ ಸುಧಾರಣೆ ಮಾಡಲು ಇನ್ನೂ ಬಹಳ ಕಾಲಾವಕಾಶ ಬೇಕು, ಅಲ್ಲಿಯತನಕ ಕಾಯುವುದೇ ಲೇಸು ಎಂಬುದು ಪ್ರಯುತ್ ಬೆಂಬಲಿಗರ ವಾದ. ಒಬ್ಬ ಸಾಮಾನ್ಯ ಪ್ರಜೆಯ ದೃಷ್ಟಿಯಿಂದ ಹೇಳುವುದಾದರೆ ಮಿಲಿಟರಿ ಆಡಳಿತವಿರುವ ಸೇನಾ ನಿಯಂತ್ರಿತ ಉಸಿರುಗಟ್ಟಿಸುವ ವಾತಾವರಣ ಎಲ್ಲೂ ಕಾಣಿಸುವುದಿಲ್ಲ. ಸಾಮಾನ್ಯರ ಜನಜೀವನದಲ್ಲಿ ಏನೂ ತೊಂದರೆ ಆಗಿಲ್ಲ.

ಇನ್ನು ಥೈಲ್ಯಾಂಡಿನ ದಕ್ಷಿಣ ಭಾಗದಲ್ಲಿ ಹಲವು ವರುಷಗಳಿಂದ ನಡೆಯುತ್ತಿರುವ ಇನ್ನೊಂದು ಸಂಘರ್ಷ ಮುಸ್ಲಿಮ್ ಪ್ರತ್ಯೇಕವಾದಿಗಳ ಕೂಗು. ಥೈಲ್ಯಾಂಡಿನಲ್ಲಿ ೯೫% ಬೌದ್ಧಮತ ಅನುಯಾಯಿಗಳಿದ್ದಾರೆ. ದಕ್ಷಿಣದ ಮಲೇಷ್ಯಾ ಗಡಿಪ್ರದೇಶದಲ್ಲಿನ ಮೂರು ಪ್ರಾಂತ್ಯಗಳಲ್ಲಿ ಮಾತ್ರ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದೆ. ಈ ಭಾಗದಲ್ಲಿ ಪ್ರತ್ಯೇಕತೆಯ ಕೂಗು ಹಲವಾರು ವರ್ಷಗಳಿಂದ ಕೇಳಿಬರುತ್ತಿದೆ. ರಾಜಾಡಳಿತವಿದ್ದಾಗ ಈ ಪ್ರಾತ್ಯಂಗಳ ಆಡಳಿತವನ್ನು ಸ್ಥಳೀಯ ಮುಸ್ಲಿಮ್ ನಾಯಕರು ನೋಡಿಕೊಳ್ಳುತ್ತಿದ್ದರು. ಸಾಂವಿಧಾನಿಕ ಆಡಳಿತ ಪ್ರಾರಂಭವಾದ ಮೇಲೆ ಸ್ಥಳೀಯ ಜಾವಿ ಭಾಷೆಯ ಬದಲು ಥಾಯ್ ಭಾಷೆಯನ್ನು ಹೇರಲಾಗುತ್ತಿದೆ, ಸ್ಥಳೀಯ ಸಂಸ್ಕೃತಿಯ ಬದಲು ಬೌದ್ಧ ಸಂಸ್ಕೃತಿಯನ್ನು ಹೇರಲಾಗುತ್ತಿದೆ ಎಂಬ ಕೂಗು ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಸ್ವಾಯತ್ತತೆಗಾಗೆ ಬಂಡಾಯ ಪ್ರತಿಭಟನೆಗಳು ನಡೆಯುತ್ತಿವೆ. ನಿರಂತರವಾಗಿ ವರುಷಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳಕೊಂಡಿದ್ದಾರೆ. ಆದರೆ ಆ ಪ್ರತಿಭಟನೆಗಳು ದಕ್ಷಿಣ ಪ್ರಾಂತ್ಯಗಳಲ್ಲಿ ನಡೆದಿವೇ ಹೊರತು ಬ್ಯಾಂಕಾಕ್‍ನಲ್ಲಿ ನಡೆದಿಲ್ಲ.

ಇತ್ತೀಚೆಗೆ ಹೊಗೆಯಾಡಿದ ಇನ್ನೊಂದು ಸಮಸ್ಯೆ ಉಯ್ಗುರ್ ನಿರಾಶ್ರಿತರದ್ದು. ಹಲವಾರು ಅಂತಾರಾಷ್ಟ್ರೀಯ ಒತ್ತಡಗಳ ಹೊರತಾಗಿಯೂ ಥಾಯ್ ಸರಕಾರ ಸುಮಾರು ನೂರಕ್ಕೂ ಹೆಚ್ಚು ಉಯ್ಗುರ್ ನಿರಾಶ್ರಿತರನ್ನು ಚೀನಾಕ್ಕೆ ತಿರುಗಿ ಕಳುಹಿಸಿತು. ಥಾಯ್ ಆಡಳಿತ ಚೇನಾ ಹಾಗೂ ಟರ್ಕಿಯ ಜೊತೆ ಮಾತುಕತೆ ನಡೆಸಿರುವುದಾಗಿಯೂ ಆ ಮಾತುಕತೆಗಳ ಹಿನ್ನೆಲೆಯಲ್ಲೇ ಅವರನ್ನು ಚೀನಾಕ್ಕೆ ತಿರುಗಿ ಕಳುಹಿಸಿದ್ದೆಂದು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಆದರೆ ಇದನ್ನು ಟರ್ಕಿಯಲ್ಲಿನ ಉಯ್ಗುರ್ ಹೋರಾಟಗಾರರು ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ. ಇತ್ತೀಚೆಗೆ ಇಸ್ತಾಂಬುಲ್‍ನಲ್ಲಿ ಥಾಯ್ ರಾಯಭಾರಿ ಕಛೇರಿಯ ಮೇಲೆ ಇದೇ ವಿಷಯದಲ್ಲಿ ಧಾಳಿಯೂ ನಡೆಯಿತು. ಉಯ್ಗುರ್ ನಿರಾಶ್ರಿತರ ವಿಷಯದಲ್ಲಿ ಥಾಯ್ ಆಡಳಿತ ನಡಕೊಂಡ ರೀತಿಯ ಕುರಿತು ಹೊರದೇಶಗಳಲ್ಲಿ ಅಸಮಧಾನದ ಹೊಗೆಯಾಡಿತು.

ಪ್ರಸಿದ್ಧ ಪ್ರವಾಸಿ ಸ್ಥಳದಲ್ಲಿ ನಡೆದ ಬಾಂಬ್ ಧಾಳಿಯನ್ನು ಥಾಯ್ ಆಡಳಿತ ಆರ್ಥಿಕತೆಗೆ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆ ತರಲು ಮಾಡಿದ ಹೀನ ಕೃತ್ಯ ಎಂದು ಹೇಳಿದೆ. ಥಾಯ್ ಜಿಡಿಪಿಯಲ್ಲಿ ಪ್ರವಾಸೋದ್ಯಮದ ದೊಡ್ಡ ಕೊಡುಗೆಯಿದೆ. ಪ್ರವಾಸೋದ್ಯಮ ನೇರವಾಗಿ ೯% ಮತ್ತು ಒಟ್ಟಾರೆಯಾಗಿ ಸುಮಾರು ೨೦% ಜಿಡಿಪಿಗೆ ಕೊಡುಗೆ ನೀಡುತ್ತದೆ. ಬಾಂಬ್ ಧಾಳಿಯ ಹಿನ್ನೆಲೆಯಲ್ಲಿ ಹಲವಾರು ದೇಶಗಳು ತಮ್ಮ ಪ್ರಜೆಗಳಿಗೆ ಥೈಲ್ಯಾಂಡ್ ಪ್ರವಾಸದ ಬಗ್ಗೆ ಎಚ್ಚರಿಕೆಯಿಂದಿರುವಂತೆ ಕರೆ ನೀಡಿದೆ. ಪ್ರವಾಸಿಗರನ್ನು ಗುರಿಯಾಗಿಸಿ ಸ್ಫೋಟ ನಡೆಸಿದ್ದನ್ನು ಗಮನಿಸಿದರೆ ಪ್ರವಾಸೋದ್ಯಮ ತನ್ಮೂಲಕ ಥೈಲ್ಯಾಂಡ್ ಆರ್ಥಿಕತೆಯೇ ಈ ಧಾಳಿಯ ನೇರ ಗುರಿ ಎಂಬಂತೆ ತೋರುತ್ತದೆ.

ಮೆಚ್ಚಬೇಕಾದ ಅಂಶವೆಂದರೆ ಸ್ಫೋಟದ ನಂತರ ಸ್ಥಳದಲ್ಲಿ ಸ್ವಯಂಸೇವಕರು ತುಂಬಿದರು. ಕೆಲ ಟ್ಯಾಕ್ಸಿಗಳು ಘಟನಾ ಸ್ಥಳದಿಂದ ತೆರಳುವವರಿಗೆ ಉಚಿತ ಸೇವೆ ಒದಗಿಸಿದವು. ರಕ್ತದಾನ ಮಾಡಲು ದಾನಿಗಳು ಸರತಿ ಸಾಲು ನಿಂತರು. ಒಂದೇ ದಿನದಲ್ಲಿ ಘಟನಾ ಸ್ಥಳವನ್ನು ಸ್ವಚ್ಚವಾಗಿಸಿದರು. ಸಾರ್ವಜನಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿ ಭದ್ರತೆ ಹೆಚ್ಚಿದೆ. ಎರವಾನ್ ದೇವಾಲಯ ಪ್ರವಾಸಿಗರಿಗೆ ಮತ್ತೆ ತೆರೆದುಕೊಂಡಿದೆ!

ಸಮೀರ ದಾಮ್ಲೆ