Wednesday, November 26, 2014

ಆ ಎರಡು ನಿಮಿಷದಲ್ಲಿ ಏನೆಲ್ಲಾ ಮಾಡಬಹುದು!


ಈ ಬರಹವನ್ನು ಪ್ರಕಟಿಸಿದ ಪ್ರಜಾವಾಣಿ ಬಳಗಕ್ಕೆ ಧನ್ಯವಾದಗಳು. ಪ್ರಕಟಣೆ: ೨೬.೧೧.೨೦೧೪
=======================================================

ಆ ಎರಡು ನಿಮಿಷದಲ್ಲಿ ಏನೆಲ್ಲಾ ಮಾಡಬಹುದು!


ಪೂರ್ತಿಯಾಗಿ ಹಾಡಿದರೆ ಸುಮಾರು ಮೂರೂವರೆ ನಿಮಿಷ ಬೇಕು; ಎಷ್ಟೊಂದು ಸಮಯ ವ್ಯರ್ಥ! ಸರಿಯಾಗಿ ಒಂದು ನಿಮಿಷ ಇಪ್ಪತ್ತಾರು ಸೆಕೆಂಡಿನಲ್ಲಿ ಹಾಡಿ ಮುಗಿಸಿದರೆ ಸುಮಾರು ಎರಡು ನಿಮಿಷ ನಾಲ್ಕು ಸೆಕೆಂಡು ಉಳಿಯುತ್ತದೆ. ಇವತ್ತಿನ ಕಾಲದಲ್ಲಿ ಸಮಯ ಅಂದರೆ ಹಣ (time is money)! ಕರ್ನಾಟಕದ ಪ್ರತಿ ನಾಗರಿಕನೂ ಉಳಿಸುವ ಸಮಯ ಲೆಕ್ಕ ಹಾಕಿದರೆ ಸುಮಾರು ಹದಿಮೂರು ಕೋಟಿ ನಿಮಿಷಗಳು ಅಂದರೆ ಸುಮಾರು ಇಪ್ಪತ್ತೊಂದು ಲಕ್ಷ ಗಂಟೆಗಳು ಅಂದರೆ ಸುಮಾರು ತೊಂಬತ್ತು ಸಾವಿರ ದಿವಸಗಳು ಅಂದರೆ ಸುಮಾರು ಇನ್ನೂರ ನಲವತ್ತೇಳು ವರ್ಷಗಳು! ಕನ್ನಡ ಎನೆ ಕುಣಿದಾಡುವ ಗೇಹಗಳು ವರುಷವೊಂದರಲ್ಲಿ ಅದೆಷ್ಟು ಬಾರಿ ನಾಡಗೀತೆ ಹಾಡುತ್ತೇವೆ ಮತ್ತು ಎಷ್ಟು ಸಮಯ ಉಳಿಸಬಹುದು ನೀವೇ ಲೆಕ್ಕ ಹಾಕಿಕೊಳ್ಳಿ!
ಹೀಗೆ ಉಳಿಸುವ ಸಮಯದಲ್ಲಿ ಕರ್ನಾಟಕಕ್ಕೋಸ್ಕರ ಎಷ್ಟೆಲ್ಲಾ ಕೆಲಸ ಮಾಡಬಹುದು! ನಾಡಗೀತೆಯ ಮೇಲಿನ ಕತ್ತರಿ ಪ್ರಯೋಗದಿಂದ ಕರ್ನಾಟಕಕ್ಕೆ ಎಂತಹ ಅದ್ಭುತ ಉಳಿತಾಯ! ರಸಋಷಿ ಇದನ್ನೆಲ್ಲಾ ಆಲೋಚಿಸದೇ ಉದ್ದ ಮಾಡಿಬಿಟ್ಟರು ತಮ್ಮ ಕವಿತೆಯನ್ನು!

ಕವಿಗೆ ಈ ಸಮಯ ಉಳಿತಾಯ, ಆ ಮೂಲಕ ಆಗುವ ದುಡ್ಡಿನ ಉಳಿತಾಯ, ಜಾತಿ ರಾಜಕೀಯ, ಸೆಕ್ಯುಲರಿಸಂ, ಓಲೈಕೆ ರಾಜಕಾರಣ, ಒಡೆದು ಆಳುವ ನೀತಿ ಇವೆಲ್ಲದರ ಬಗ್ಗೆ ಗಮನವೇ ಇದ್ದಂತಿಲ್ಲ! ಯಾವುದೇ ಮುಲಾಜಿಲ್ಲದೆ ಕರ್ನಾಟಕದ ಸೌಂದರ್ಯವನ್ನು, ವೈಶಿಷ್ಟ್ಯಗಳನ್ನು, ನದಿಗಳನ್ನು, ಗಿರಿಗಳನ್ನು, ಕರ್ನಾಟಕ ಕಂಡ ಪ್ರಮುಖ ಅರಸು ಮನೆತನಗಳನ್ನು, ಮಹಾ ಕವಿಗಳನ್ನು, ತತ್ತ್ವಜ್ಞಾನಿಗಳನ್ನು ಹೀಗೆ ಎಲ್ಲರನ್ನೂ ಸೇರಿಸಿ ಕರ್ನಾಟಕವನ್ನು ವರ್ಣಿಸಿಬಿಟ್ಟಿದ್ದಾರೆ. ಕವಿಗೇನೋ ಕಾವ್ಯಸೃಷ್ಟಿ ಒಂದು ತಪಸ್ಸು. ಅಂತಹ ತಪಸ್ಸಿನ ಫಲವೇ ನಮ್ಮ ಸುಂದರ ನಾಡಗೀತೆ. ಆದರೆ ನಮಗೆ ಅದನ್ನು ನೆನಪಿಟ್ಟುಕೊಂಡು ಹಾಡಲು ಪುರುಸೊತ್ತೆಲ್ಲಿದೆ!

ನಮಗೆ ಮಾಡಲು ಬಹಳಷ್ಟು ಕೆಲಸಗಳಿವೆ! ನಾಡಗೀತೆಯ ಕತ್ತರಿ ಪ್ರಯೋಗದಿಂದ ಉಳಿಸುವ ಸಮಯದಲ್ಲಿ ಖಂಡಿತಾ ಕರ್ನಾಟಕವನ್ನು ಅಭಿವೃದ್ಧಿ ಮಾಡಬಹುದು. ಕನಿಷ್ಠ ಕನ್ನಡದ ಅಭಿವೃದ್ಧಿ ಕೆಲಸವನ್ನಂತೂ ಮಾಡಬಹುದು.

ಕನ್ನಡದ ಅಭಿವೃದ್ಧಿ ಅಂದರೇನು? ನಮ್ಮ ಸರಕಾರಕ್ಕಾಗಲೀ ಕನ್ನಡ ಅಭಿವೃದ್ಧಿ ಇಲಾಖೆಗಾಗಲಿ ಈ ಬಗ್ಗೆ ಖಚಿತ ಕಲ್ಪನೆ ಇದ್ದಂತಿಲ್ಲ. ಕನ್ನಡ ಅಭಿವೃದ್ಧಿ ಎಂದಾಕ್ಷಣ ಒಂದಷ್ಟು ಕಾರ್ಯಕ್ರಮಗಳಾಗುತ್ತವೆ. ಅದಕ್ಕೆ ಒಂದಷ್ಟು ಹಣ ಬಿಡುಗಡೆಯಾಗುತ್ತದೆ. ಇಲಾಖೆಯ ಅಧಿಕಾರಿಗಳನ್ನೊ, ಗುಮಾಸ್ತರನ್ನೊ ’ಸರಿಯಾಗಿ ಹಿಡಿದವರಿಗೆ’ ಕಾರ್ಯಕ್ರಮ ಮಾಡುವ ಅವಕಾಶ ಸಿಗುತ್ತದೆ! ಇನ್ನು ಕಾರ್ಯಕ್ರಮ ಆಯೋಜಕರನ್ನು ಸರಿಯಾಗಿ ಹಿಡಿದವರಿಗೆ ಕಾರ್ಯಕ್ರಮದಲ್ಲಿ ಒಂದು ನೃತ್ಯಕ್ಕೋ, ಕವನ ವಾಚನಕ್ಕೋ, ಭಾಷಣಕ್ಕೋ ಅವಕಾಶ ಸಿಗುತ್ತದೆ. ಆಯೋಜಕರ ಹಾಗೂ ಕಾರ್ಯಕ್ರಮದಲ್ಲಿ ಏನಾದರೂ ಪ್ರದರ್ಶನ ನೀಡುತ್ತಿರುವವರ ಆಪ್ತರು ಪ್ರೇಕ್ಷಕರು!

ಇನ್ನೊಂದು ದೊಡ್ಡ ಕಾರ್ಯಕ್ರಮ ಸಾಹಿತ್ಯ ಸಮ್ಮೇಳನ! ಇವೂ ದೊಡ್ಡದ್ದೇನನ್ನೂ ಸಾಧಿಸುತ್ತಿಲ್ಲ. ತಡವಾಗಿ ಪ್ರಾರಂಭವಾಗುವ ಉದ್ಘಾಟನಾ ಕಾರ್ಯಕ್ರಮ, ಊಟಕ್ಕಾಗಿ ನೂಕಾಟ, ತಡವಾಗಿ ಮುಗಿಯುವ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಮಧ್ಯರಾತ್ರಿಯವರೆಗೆ ಕಾದು ಕುಳಿತುಕೊಳ್ಳುವ ಪುಟ್ಟ ಮಕ್ಕಳು, ಕೊನೆಯ ದಿನ ಮಂಡನೆಯಾಗುವ ಸಮ್ಮೇಳನದ ನಿರ್ಣಯಗಳು; ಎಲ್ಲಾ ಒಂದೇ ರೀತಿ! ಅಲ್ಲಿ ಮಂಡನೆಯಾಗುವ ನಿರ್ಣಯಗಳನ್ನು ಕಾರ್ಯಗತಗೊಳಿಸುವವರು ಯಾರೆಂಬುದು ಮಾತ್ರ ಚರ್ಚೆಯಾಗುವುದಿಲ್ಲ. ನಮ್ಮ ಸಮ್ಮೇಳನಗಳ ಸ್ವರೂಪದಲ್ಲಿ ಒಂದಷ್ಟೂ ಬದಲಾವಣೆಯಾಗಲಿಲ್ಲ!

ನಮ್ಮ ಸಮ್ಮೇಳನಗಳ ಸ್ವರೂಪ ಬದಲಾಗಬೇಕಿದೆ! ಅವು ಕೇವಲ ಸೃಜನಶೀಲ ಸಾಹಿತ್ಯದ ಜಾತ್ರೆಯಾಗಬಾರದು. ಅದು ಕನ್ನಡದ ಹಬ್ಬವಾಗಬೇಕು. ಕನ್ನಡ ನಾಡಿನಲ್ಲಿರುವ ವೈವಿಧ್ಯತೆಗಳನ್ನು, ಸಂಸ್ಕೃತಿಯ ಸೊಗಡನ್ನು ಪ್ರದರ್ಶಿಸುವ ಹಬ್ಬವಾಗಬೇಕು. ಜನಸಾಮಾನ್ಯರು ಸಮ್ಮೇಳನಕ್ಕೆ ಬರುವಂತೆ ಆಗಬೇಕು.  ಜನಸಾಮಾನ್ಯರು ಯಾವಾಗ ಬರುತ್ತಾರೆ ಹೇಳಿ? ಒಂದು ಕುತೂಹಲ ಇರಬೇಕು ಇನ್ನೊಂದು ತನ್ನ ನಿತ್ಯ ಜೀವನಕ್ಕೆ ಉಪಯೋಗ/ಲಾಭ ಆಗುವಂತಹ ಏನಾದರೂ ಆಕರ್ಷಣೆ ಇರಬೇಕು. ಗಮನಿಸಿ, ಸಮ್ಮೇಳನದ ಸಭೆಗಿಂತ ಹೆಚ್ಚು ಜನ ಪುಸ್ತಕ ಮಾರಾಟ ಮಳಿಗೆಯಲ್ಲಿರುತ್ತಾರೆ! ಇಂತಹ ಮಳಿಗೆಗಳು ಪುಸ್ತಕ ಹಾಗೂ ಸಿ.ಡಿ.ಗಳಿಗೆ ಸೀಮಿತವಾಗದೇ ಕರ್ನಾಟಕದ ಹಲವಾರು ಸೃಜನಶೀಲ ಉತ್ಪನ್ನಗಳ, ಗುಡಿಕೈಗಾರಿಕೆಗಳ ಹಾಗೂ ಕನ್ನಡ ತಂತ್ರಾಂಶಗಳ ಪ್ರದರ್ಶನ ಮತ್ತು ಮಾರಾಟದ ಕೇಂದ್ರವಾಗಲಿ. ಸಾಂಸ್ಕೃತಿಕ ಕಾರ್ಯಕ್ರಮಗಳು ಕೊನೆಯ ಕಾರ್ಯಕ್ರಮಗಳಾಗಿರದೆ ಅವುಗಳಿಗೂ ಪ್ರಾಮುಖ್ಯತೆ ಸಿಗಲಿ. ಸಮ್ಮೇಳನಗಳಲ್ಲಿ ಆಗಬೇಕಾದ ಬದಲಾವಣೆಗಳಿಗೆ ಮೂಡಬಿದಿರೆಯ ಆಳ್ವಾಸ್ ನುಡಿಸಿರಿಯನ್ನೇ ಒಂದು ಮಾದರಿಯನ್ನಾಗಿ ತೆಗೆದುಕೊಳ್ಳಬಹುದು.  

ಭಾಷೆ ನಶಿಸಿ ಹೋಗುವುದು ದಿನನಿತ್ಯದ ವ್ಯವಹಾರಗಳಲ್ಲಿ ಅದರ ಬಳಕೆ ಸಾಧ್ಯವಿಲ್ಲ ಹಾಗೂ ಅಗತ್ಯವಿಲ್ಲ ಎಂದಾದಾಗ. ಭಾಷೆಯ ಬಳಕೆ ಸಾಧ್ಯವಿಲ್ಲದ ಹಂತ ಬಂದಾಗ ಪರ್ಯಾಯ ಭಾಷೆ ಹುಟ್ಟುತ್ತದೆ ಅಥವಾ ಬೇರೊಂದು ಭಾಷೆ ಬಳಕೆಗೆ ಬರುತ್ತದೆ. ಹೊಸ ಭಾಷೆಯ ಬಳಕೆ ರೂಢಿಯಾಗುತ್ತಿದ್ದಂತೆ ಹಳೆ ಭಾಷೆ ’ಅಗತ್ಯವಿಲ್ಲ’ ಎಂಬ ಸ್ಥಿತಿಗೆ ಬರುತ್ತದೆ.  ಕನ್ನಡ ಈ ಸ್ಥಿತಿಯ ಹತ್ತಿರ ತಲುಪುವ ಸಾಧ್ಯತೆಗಳೇ ಹೆಚ್ಚಾಗಿವೆ. ಮೊದಲನೆಯದಾಗಿ ತಂತ್ರಜ್ಞಾನ ಅಪಾರವಾದ ಬಳಕೆಯ ಈ ಕಾಲದಲಿ, ಕನ್ನಡದಲ್ಲಿ ಅದರ ಬಳಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಹೊಸತನ್ನು ಕಲಿಯುವ ಅನಿವಾರ್ಯತೆ ಬರುತ್ತದೆ. ಉದಾಹರಣೆಗೆ ಮೊಬೈಲ್ ತೆಗೆದುಕೊಳ್ಳಿ. ಇವತ್ತು ಮೊಬೈಲ್ ಇಲ್ಲದ ವ್ಯಕ್ತಿಯೇ ಇಲ್ಲವೆನ್ನಬಹುದು. ಮೊಬೈಲ್ ಬಳಸಬೇಕಾದರೆ ಇಂಗ್ಲಿಷ್ ಕೊಂಚ ಗೊತ್ತಿರಬೇಕು. ಅನಕ್ಷರಸ್ಥನಾದರೂ ಮೊಬೈಲ್ ಬಳಕೆಗಾಗಿ ಒಂದಷ್ಟು ಇಂಗ್ಲಿಷ್ ಕಲಿತೇ ಕಲಿಯುತ್ತಾನೆ. ಅಲ್ಲಿಗೆ ಕನ್ನಡ ಕಲಿಯುವುದು ಅನಿವಾರ್ಯವಲ್ಲದಿದ್ದರೂ ನಾಲ್ಕಕ್ಷರ ಎ ಬಿ ಸಿ ಡಿ ಕಲಿಯುವುದು ಅನಿವಾರ್ಯವಾಯಿತು! ವ್ಯಾಪಾರಿಯೊಬ್ಬ ಅಂಗಡಿಯಲ್ಲಿ ಲೆಕ್ಕಾಚಾರ ಸಲುವಾಗಿ ಕಂಪ್ಯೂಟರ್ ಅಳವಡಿಸಿಕೊಂಡರೂ ಅದೇ ಕಥೆಯಾಗುತ್ತದೆ. ಮುಂದೆ ತನ್ನ ಮಕ್ಕಳಿಗೆ ಸಹಜವಾಗಿಯೇ ’ಇಂಗ್ಲಿಷ್ ಸರಿಯಾಗಿ ಕಲಿ’ ಎಂಬ ಸಲಹೆ ಮನೆಯಲ್ಲೇ ಪ್ರಾರಂಭ ಮಾಡುತ್ತಾನೆ. ಈಗಾಗಲೇ ಸಾಮಾನ್ಯ ಜನರ ಮಾತುಕತೆಗಳಲ್ಲಿ ಅರ್ಧದಷ್ಟು ಇಂಗ್ಲಿಷ್‍ ಶಬ್ದಗಳು ಬಳಕೆಯಲ್ಲಿವೆ. ಕನ್ನಡ ಕಲಿಯುವ ಅನಿವಾರ್ಯತೆ ಕಡಿಮೆಯಾಗುತ್ತಾ ಹೋಗುತ್ತಿದೆ!

ಕನ್ನಡ ಸಾಹಿತ್ಯ ಲೋಕ ಕನ್ನಡದಲ್ಲಿ ವಿಷಯ ಸಾಹಿತ್ಯ ಹಾಗೂ ತಂತ್ರಾಂಶಗಳ ಅಭಿವೃದ್ಧಿಯ ಕಡೆಗೆ ಅಸಡ್ಡೆ ತೋರುತ್ತಾ ಬಂದಿದೆ. ಕನ್ನಡ ತಂತ್ರಾಂಶದ ಪಿತಾಮಹ ಕೆ ಪಿ ರಾವ್ ಅವರು ಅಧ್ಯಕ್ಷರಾಗಿದ್ದ ಸಮ್ಮೇಳನದಲ್ಲೂ ಆಯೋಜಕರು ಕನ್ನಡದಲ್ಲಿ ವಿಷಯ ಸಾಹಿತ್ಯದ ಕುರಿತು ಅಥವಾ ತಂತ್ರಜ್ಞಾನದಲ್ಲಿ ಕನ್ನಡದ ಕುರಿತು ಒಂದು ಚರ್ಚೆಯನ್ನೂ ಆಯೋಜಿಸಿರಲಿಲ್ಲ! ಅವರ ಜೊತೆ ನಡೆದ ಸಂವಾದದಲ್ಲೂ ತಂತ್ರಾಂಶ ಅಭಿವೃದ್ಧಿಯ ಅವರ ಅನುಭವಗಳ ಕುರಿತು ಒಂದೆರಡು ಪ್ರಶ್ನೆಗಳು ಇತ್ತಾದರೂ ತಾಂತ್ರಿಕತೆಯ ಕುರಿತಾಗಿ ವಿಸ್ತೃತ ಚರ್ಚೆಯಾಗಲಿಲ್ಲ!

ಭಾಷೆ ಚರಿತ್ರೆಯನ್ನು ಭವಿಷ್ಯದ ಜೊತೆ ಬೆಸೆಯುವ ಸಾಧನ, ಅದು ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ತಲುಪಿಸುವ ವಾಹನ. ಆದರೆ ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ ನನ್ನ ನಾಣ್ಣುಡಿಯನ್ನು ಕಲಿಯುವ ಅಗತ್ಯವಿಲ್ಲ ಹೊಸತೊಂದು ಭಾಷೆಯ ಅಗತ್ಯವಿದೆ ಎಂಬ ಪರಿಸ್ಥಿತಿಯಿದ್ದರೆ? ಇವತ್ತು ಕಂಪ್ಯೂಟರಿನಲ್ಲಿ, ಮೊಬೈಲ್‍ಗಳಲ್ಲಿ ಕನ್ನಡವನ್ನು ಬಳಸುತ್ತಿರುವವರಲ್ಲಿ ಹೆಚ್ಚಿನವರು ಭಾಷಾಭಿಮಾನದಿಂದ ಬಳಸುತ್ತಿದ್ದಾರೆಯೇ ಹೊರತು ’ಅನಿವಾರ್ಯತೆ’ಯಿಂದಲ್ಲ ಎಂಬುದು ನನ್ನ ಅಭಿಪ್ರಾಯ! ಅದು ಅನಿವಾರ್ಯವೇ ಆಗಿದ್ದರೆ ಸುಮಾರು ನಾಲ್ಕು ಕೋಟಿಗೂ ಅಧಿಕ ಸ್ಮಾರ್ಟ್‍ಫೋನಿಗಳು ಬಳಕೆಯಲ್ಲಿರುವ ಕರ್ನಾಟಕದಲ್ಲಿ ಕನ್ನಡ ತಂತ್ರಾಂಶಗಳ ಇಳಿಕೆಗಳ (download) ಸಂಖ್ಯೆ ಕೇವಲ ಒಂದೆರಡು ಲಕ್ಷಗಳಷ್ಟೇ ಇರುತ್ತಿರಲಿಲ್ಲ!

ಭವಿಷ್ಯಕ್ಕೆ ವಿಷಯ ಸಾಹಿತ್ಯ ಬೇಕು; ಚರಿತ್ರೆಯ, ಸಂಸ್ಕೃತಿಯ ಬೆಸುಗೆಗೆ ಸೃಜನಶೀಲ ಸಾಹಿತ್ಯ ಬೇಕು. ನಮ್ಮ ನಾಡಗೀತೆ ಹಾಗೂ ಅಂತಹ ಇನ್ನೂ ಅನೇಕ ಕೃತಿಗಳು ಕನ್ನಡ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಅಭಿಮಾನ ಬೆಳೆಸುವ ಸಾಧಗಳಾಗಬೇಕು.
ಶಾಲೆಗಳಲ್ಲಿ ಪ್ರಾರ್ಥನೆಯ ಹೊತ್ತಿಗೆ, ಕನ್ನಡ ರಾಜ್ಯೋತ್ಸವದ ಆಚರಣೆಗಳಿಗೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕೆಲವೇ ಸಮಾರಂಭಗಳಿಗೆ ಸೀಮಿತವಾದ ನಾಡಗೀತೆಯನ್ನು ಪೂರ್ತಿಯಾಗಿ ಹಾಡಿದರೆ ಆಗುವ ನಷ್ಟವೇನೆಂದು ಅರ್ಥವಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಸಮಾರಂಭಗಳಿಗೆ ತಡವಾಗಿ ಬರುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಹಾಗೂ ಅತಿಥಿಮಹಾಶಯರಿಗೆ ಕಾಯುವ ಹೊತ್ತಿನಲ್ಲಿ ನಾಡಗೀತೆಯನ್ನು ಪೂರ್ತಿಯಾಗಿ ಹಾಡಬಹುದು. ಹಾಗೂ ಆ ಸಮಯದಲ್ಲಿ ಕನ್ನಡತನವನ್ನು ಉಳಿಸುವ ಬೆಳೆಸುವ ಕೆಲಸ ಮಾಡಬಹುದು!

ಸಮೀರ ಸಿ ದಾಮ್ಲೆ

ಬ್ಯಾಂಕಾಕ್

ಹೊರನಾಡಿನಲ್ಲಿರುವ ಹುರುಪು ಉತ್ಸಾಹ ನಾಡಿನೊಳಗಿರದು!


ಈ ಬರಹವನ್ನು ಪ್ರಕಟಿಸಿದ ಪ್ರಜಾವಾಣಿಗೆ (೦೩.೧೧.೨೦೧೪) ಧನ್ಯವಾದಗಳು. 
=======================================================

ಹೌದು, ಮತ್ತೆ ರಾಜ್ಯೋತ್ಸವ ಬಂದಿದೆ. ಸರಕಾರದಿಂದ ಹಲವು ಸ್ತರಗಳಲ್ಲಿ ರಾಜ್ಯೋತ್ಸವದ ಆಚರಣೆಗೆ ಹಣ ಬಿಡುಗಡೆ ಆಗುತ್ತದೆ. ಗ್ರಾಮ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟಗಳಲ್ಲಿ ಹಬ್ಬ ನಡೆಯುತ್ತದೆ, ಕನ್ನಡದ ಬಗ್ಗೆ ಭೀಷಣ ಭಾಷಣಗಳು ನಡೆಯುತ್ತವೆ (ಅಲ್ಲೂ ತಪ್ಪು ತಪ್ಪಾಗಿ ಕನ್ನಡದಲ್ಲಿ ಭಾಷಣ ಮಾಡುವವರಿದ್ದಾರೆ). ಆದರೆ ಅಲ್ಲಿ ಕನ್ನಡದ ಬಗ್ಗೆ ನಿಜವಾದ ಕಾಳಜಿ ಎಷ್ಟಿದೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಂತಹ ಆಚರಣೆಗಳು ರಾಜಕೀಯ ನಾಯಕರಿಗೆ ಪ್ರಚಾರದ ವಸ್ತು. ಇನ್ನು ರಾಜಕೀಯದ ಹೊಸಮುಖಗಳಿಗೆ ಇಂತಹ ಕಾರ್ಯಕ್ರಮ ತಮ್ಮ ಸಂಘಟನಾ ಸಾಮರ್ಥ್ಯ ತೋರಿಸುವ, ರಾಜಕೀಯ ಗುರುಗಳ ಪ್ರೀತಿ ಸಂಪಾದಿಸುವ ಹಾಗೂ ತನಗೆ ಸಮಾಜದಲ್ಲಿ ಒಂದು ಗುರುತು (ಐಡೆಂಟಿಟಿ) ತರಿಸಿಕೊಳ್ಳುವ ಸಾಧನ. ಇನ್ನು ಬೆಂಗಳೂರಿನ ಕೆಲ ಸಂಸ್ಥೆಗಳು ಇರುವುದೇ ಚಂದಾ ಎತ್ತಿ ವರ್ಷಕ್ಕೊಂದು ’ಕನ್ಡರಾಜ್ಯೋಸ್ತವ’ ಆಚರಿಸುವುದಕ್ಕೆ (ಅವರಿಗೆ ರಾಜ್ಯೋತ್ಸವ ಅಂತ ಹೇಳುವುದಕ್ಕೂ ಬರುವುದಿಲ್ಲ). ಬೆಂಗಳೂರಿನ ಹೊರಗೆ ಸಾಮಾಜಿಕ ವ್ಯವಹಾರಗಳಲ್ಲಿ ಕನ್ನಡದ ಬಳಕೆ ಕೇಳಿಬರುತ್ತದಾದರೂ ಕನ್ನಡದ ಬಗೆಗಿನ ಕಳಕಳಿ ದಿನೇ ದಿನೇ ಕಡಿಮೆಯಾಗುತ್ತಿದೆ ಎಂಬುದು ಸತ್ಯ. ಕೆಲವೇ ಮಂದಿ, ಎಣಿಸಬಹುದಾದಷ್ಟು ಸಂಸ್ಥೆಗಳು ನಿಜಾರ್ಥದಲ್ಲಿ ಕನ್ನಡದ ಉತ್ಸವ ಮಾಡುತ್ತಾರೆ; ಮತ್ತು ಅವರು ಅದನ್ನು ಪ್ರತಿದಿನವೂ ಮಾಡುತ್ತಾರೆ. ಅವರಿಗೆ ರಾಜ್ಯೋತ್ಸವದ ನೆಪ ಬೇಕಾಗಿಲ್ಲ. ಒಟ್ಟಾರೆಯಾಗಿ ಕನ್ನಡ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ, ಕನ್ನಡದ ಕಾಳಜಿ, ಕನ್ನಡದ ಬಳಕೆ ಎಲ್ಲಾ ನವಂಬರ್ ೧ ಎಂಬೊಂದು ದಿನಕ್ಕೆ ಸೀಮಿತವಾಗುತ್ತಿದೆ ಮತ್ತು ಇದು ತೋರಿಕೆಯ ವಿಷಯವಾಗಿಬಿಟ್ಟಿದೆ.

ಆದರೆ ಹೊರನಾಡಿನಲ್ಲಿ ಪರಿಸ್ಥಿತಿ ತುಂಬಾ ವಿಭಿನ್ನ! ದೇಶ ಬಿಟ್ಟವರು ಎಂದರೆ ಎಲ್ಲಾ ಬಿಟ್ಟವರು ಎಂಬ ಅಭಿಪ್ರಾಯ ಹಲವಾರು ಜನರಲ್ಲಿರಬಹುದು. ಆದರೆ ಯಾವತ್ತೂ ಏನನ್ನಾದರೂ ಕಳೆದುಕೊಂಡರೇ ಬೆಲೆ ತಿಳಿಯುವುದು ಎನ್ನುತ್ತಾರಲ್ಲ; ಹಾಗೆಯೇ ದೇಶ ಬಿಟ್ಟಾಗ ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಸಣ್ಣ ಆತಂಕ ಪ್ರಾರಂಭ ಆಗುತ್ತದೆ. ತನ್ನ ನೆಲದ ಮೇಲೆ ಭಾಷೆಯ ಮೇಲೆ ಅಭಿಮಾನ ಹೆಚ್ಚಲು ಪ್ರಾರಂಭವಾಗುತ್ತದೆ. ಕನ್ನಡದ ನೆಲದ ಸುದ್ದಿ, ಆಗುಹೋಗುಗಳ ಕುರಿತು ತಿಳಿದುಕೊಳ್ಳುವ ತುಡಿತ ಹೆಚ್ಚಾಗುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಇದೇನೂ ಕಷ್ಟವಲ್ಲ. ತಂತ್ರಜ್ಞಾನದ ಸಹಾಯದಿಂದ ಬಹುಷಃ ಹೊರನಾಡ ಕನ್ನಡಿಗರು ನಾಡಿನೊಳಗಿರುವ ಕನ್ನಡಿಗರಿಗಿಂತ ಹೆಚ್ಚೇ ಕನ್ನಡಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಎದ್ದು ನಾನು ನೋಡುವ ಮೊಬೈಲ್ ತಂತ್ರಾಂಶ ಪ್ರಮುಖ ಕನ್ನಡ ದಿನಪತ್ರಿಕೆಗಳನ್ನು ಮೊಬೈಲಿನಲ್ಲಿ ಒದಗಿಸುವಂತಹದ್ದು. ಕನ್ನಡಿಗ ಮಿತ್ರರ ಜೊತೆಗಿನ ಮಾತುಕತೆಗಳಲ್ಲಿ ಚರ್ಚಿಗೆ ಬರುವ ವಿಷಯಗಳೂ ಕನ್ನಡದ್ದೇ. ಲೇಖನಗಳು, ಕನ್ನಡಿಗರ ಬ್ಲಾಗುಗಳು, ಬೆಂಗಳೂರು, ಮಂಗಳೂರು, ಮೈಸೂರಿನ ಸುದ್ದಿಗಳು!

ಯಾವುದೋ ಭಾಷೆ, ಸಂಸ್ಕೃತಿಯ ಮಧ್ಯೆ ಬದುಕುವ ಹೊರನಾಡ ಕನ್ನಡಿಗರಿಗೆ ಎಲ್ಲಾದರೂ ಕನ್ನಡ ಶಬ್ದಗಳು ಕೇಳಿದರೆ ಕಿವಿ ನೆಟ್ಟಗಾಗುತ್ತದೆ, ಮಾತು - ಪರಿಚಯವಾಗುತ್ತದೆ. ಇಲ್ಲಿ ಉತ್ತರ ದಕ್ಷಿಣ ಕರ್ನಾಟಕಗಳೆಂಬ ಭೇದವಿಲ್ಲ; ಜಾತಿ-ಮತ-ಪಂಥಗಳ ಪ್ರಶ್ನೆಯಿಲ್ಲ; ಕನ್ನಡಿಗರೆಂಬುದಷ್ಟೇ ಮುಖ್ಯ! ಇಂತಹ ಪರಿಚಯಗಳು ಕನ್ನಡ ಕೂಟಗಳ, ಸಂಘಗಳ ಹುಟ್ಟಿಗೆ ನಾಂದಿಯಾಗುತ್ತವೆ.  ಇಂತಹ ಕನ್ನಡ ಸಂಘಗಳು ನಮ್ಮ ನಡುವಿನ ಬೆಸುಗೆಯನ್ನು ಗಟ್ಟಿಮಾಡುತ್ತವೆ. ಕನ್ನಡ ಭಾಷೆಯ - ಸಂಸ್ಕೃತಿಯ ಪ್ರೀತಿಯನ್ನು ಹೆಚ್ಚುಮಾಡುತ್ತವೆ. ಹೊರನಾಡ ಕನ್ನಡಿಗರನ್ನು ಒಟ್ಟುಮಾಡುತ್ತವೆ. ಎಲ್ಲಾ ಕನ್ನಡಿಗರೂ ಜೊತೆಸೇರಬೇಕೆಂದು ಒಂದಿಲ್ಲೊಂದು ಕಾರಣ ಹುಡುಕಿ ಇಂತಹ ಸಂಘಗಳು ನಡೆಸುವ ಕಾರ್ಯಕ್ರಮಗಳು ನಿಜಾರ್ಥದಲ್ಲಿ ಕನ್ನಡದ ಉತ್ಸವಗಳಾಗಿರುತ್ತವೆ!

ನಮ್ಮ ಬ್ಯಾಂಕಾಕಿನಲ್ಲೂ ಒಂದು ಕನ್ನಡಿಗರ ಕೂಟವಿದೆ - ಥಾಯ್ ಕನ್ನಡ ಬಳಗ. ವರ್ಷಕ್ಕೆ ಮೂರು ನಾಲ್ಕು ಬಾರಿಯಾದರೂ ಸೇರುತ್ತೇವೆ. ರಾಜೋತ್ಸವ, ಯುಗಾದಿ, ಆಟೋಟ ಸ್ಪರ್ಧೆಗಳು, ಪ್ರವಾಸ ಹೀಗೆ ಯಾವುದಾದರೂ ಕಾರಣ ಸಿಗುತ್ತದೆ ಒಟ್ಟಾಗುವುದಕ್ಕೆ. ಕಾರಣ ಏನೇ ಆಗಿದ್ದರೂ ಪ್ರತೀ ಸಲ ಸೇರಿದಾಗ ಕನ್ನಡದ ಹಬ್ಬವಂತೂ ಆಗುತ್ತದೆ. ಕನ್ನಡ ನಾಡಿನ ಬಗ್ಗೆ ರಸಪ್ರಶ್ನೆ, ಕನ್ನಡ ಹಾಡುಗಳ ಅಂತ್ಯಾಕ್ಷರಿ, ಕರ್ನಾಟಕದ ನೃತ್ಯ-ನಾಟ್ಯ ವೈವಿಧ್ಯಗಳು, ಅಡುಗೆ ಸ್ಪರ್ಧೆ, ಖಾದ್ಯ ವೈವಿಧ್ಯಗಳು ಹೀಗೆ ಕನ್ನಡದ ಡಿಂಡಿಮ ಮೊಳಗುತ್ತದೆ. ಇದು ನವಂಬರ್ ೧ಕ್ಕೆ ಸೀಮಿತವಾದ ಚಟುವಟಿಕೆಗಳಲ್ಲ. ಪ್ರತೀ ಕೂಟವೂ ಕನ್ನಡದ ಹಬ್ಬವೇ. ಬ್ಯಾಂಕಾಕಿನಿಂದ ಇನ್ನೂರು ಮುನ್ನೂರು ಕಿಲೋಮೀಟರ್ ದೂರದೂರಲ್ಲಿ ನೆಲೆಸಿರುವ ಕುಟುಂಬಗಳೂ ಬಿಡುವು ಮಾಡಿಕೊಂಡು ಬರುತ್ತಾರೆ.

ವಿಪರ್ಯಾಸವೆಂದರೆ ಹಲವಾರು ಬಾರಿ ಇಂತಹ ಕಾರ್ಯಕ್ರಮಗಳಿಗೆ ನಾವು ಕರ್ನಾಟಕದಿಂದ ಆಹ್ವಾನಿಸಿದ ತಂಡದ ಸದಸ್ಯರುಗಳಿಗೇ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ! ಮೊದಲೇ ಹೇಳಿದೆನಲ್ಲಾ - ದೇಶ ಬಿಟ್ಟವರು ಎಲ್ಲಾ ಬಿಟ್ಟವರು ಎಂಬುದು ಮನಸ್ಸಿನಲ್ಲಿರುತ್ತದೆಯೇನೋ. ಹಾಗಾಗಿ ಕಳಪೆ ಸದಸ್ಯರಿದ್ದರೂ ಪರವಾಗಿಲ್ಲ ಎಂದು ಭಾವಿಸುತ್ತಾರೇನೋ! ಹೊರನಾಡಿನವರೆಂದರೆ ಅವರಿಗೆ ಕನ್ನಡದ ಬಗ್ಗೆ ಏನೂ ತಿಳಿದಿಲ್ಲ ಅಂದುಕೊಂಡು ಬರುವವರೇ ಹೆಚ್ಚು. ಇತ್ತೀಚೆಗೆ ಅಮೆರಿಕಾದ ಅಕ್ಕ ಸಮ್ಮೇಳನಕ್ಕೆ ಹೋಗುವುದಕ್ಕೆ ಸರಕಾರದ ಯಾವುದೋ ಇಲಾಖೆಯಿಂದ ಒಂದಷ್ಟು ಹಣ ಬಿಡುಗಡೆ ಮಾಡಿಸಿಕೊಂಡು ಹೊರಟಿದ್ದ ಒಂದು ತಂಡ ಬ್ಯಾಂಕಾಕ್ ಮೂಲಕ ಹೋಗುತ್ತಿತ್ತು. ವಾರದ ಮಧ್ಯವಾದರೂ ಊರಿನಿಂದ ಬರುತ್ತಿದ್ದಾರೆ ಎಂದು ಕಾರ್ಯಕ್ರಮ ಆಯೋಜಿಸಿದರೆ ಮೊದಲಾಗಿ ಸಮಯಕ್ಕೆ ಸರಿಯಾಗಿ ಬರಲಿಲ್ಲ. ತಡವಾಗಿ ಬಂದರೂ ಅವರಿಗೆ ಸಮಯದ ಚಿಂತೆ ಇರಲಿಲ್ಲ. ಇನ್ನು ಅದರಲ್ಲಿ ಅರ್ಧ ಮಂದಿಗೆ ಸರಿಯಾಗಿ ಕನ್ನಡ ಉಚ್ಛಾರ ಬರುತ್ತಿರಲಿಲ್ಲ. ಇನ್ನು ಒಬ್ಬರಂತೂ ಯಾರೋ ಬರೆದ ಬರಹವನ್ನು ತಪ್ಪುತಪ್ಪಾಗಿ ಓದಿ ನಮಗೆ ಕನ್ನಡ ಪಾಠ ಮಾಡಿದರು. ಸಂತಸವೆಂದರೆ ಒಂದಿಬ್ಬರು ಸುಂದರ ಚುಟುಕುಗಳನ್ನು ರಚಿಸಿ ನಗಿಸಿದರು. ಇನ್ನಿಬ್ಬರು ಕನ್ನಡ ಹಾಡುಗಳನ್ನು ಹಾಡಿ ನಮ್ಮನ್ನು ಕುಣಿಸಿದರು.

ಈ ವಾರ ರಾಜ್ಯೋತ್ಸವ ವಾರಾಂತ್ಯಕ್ಕೆ ಬಂದದ್ದರಿಂದ ನಮ್ಮಲ್ಲಿ ಎರಡೂ ದಿನ ಆಚರಣೆ, ಸಂಭ್ರಮ, ಕನ್ನಡದ ಹಬ್ಬ. ಇನ್ನು ನಾಲ್ಕು ತಿಂಗಳಲ್ಲಿ ಮತ್ತೊಮ್ಮೆ ನಮ್ಮಲ್ಲಿ ಕನ್ನಡದ ಹಬ್ಬ ಬರುತ್ತದೆ. ಕನ್ನಡ ನಾಡಿನೊಳಗೆ ಕಾದಂತೆ ಇನ್ನೊಂದು ನವಂಬರ್ ೧ರ ವರೆಗೆ ನಾವು ಕಾಯುವುದಿಲ್ಲ. ಸರಕಾರದ ಅನುದಾನಗಳ ಹಂಗಿಲ್ಲದೆ ನಮಗೋಸ್ಕರ ನಾವು ಮಾಡುವ ನಮ್ಮ ಕನ್ನಡದ ಹಬ್ಬದ ಸಂಭ್ರಮ ನಾಡಿನೊಳಗಿರದು!

ಸಮೀರ ಸಿ ದಾಮ್ಲೆ
ಬ್ಯಾಂಕಾಕ್


Thursday, July 24, 2014

ನಿದ್ದೆಯಿಂದ ಎಚ್ಚೆತ್ತು ಕೆಲಸ ಮಾಡಬೇಕು!



"ಅತ್ಯಾಚಾರಿಗಳ ರಕ್ಷಣೆಗೆ ಸರಕಾರ ನಿಂತಿಲ್ಲ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಮೊಕದ್ದಮೆ ದಾಖಲಿಸುವಲ್ಲಿ ಲೋಪ ಎಸಗಿದ ಪೋಲಿಸ್ ಇನ್‍ಸ್ಪೆಕ್ಟರ್ ಅವರನ್ನೂ ಬಂಧಿಸಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ತನಿಖಾಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು. ಇದಕ್ಕಿಂತ ಮತ್ತೇನು ಮಾಡಲು ಸಾಧ್ಯ" ಹೀಗೆ ಹೇಳಿಕೆ ಕೊಟ್ಟದ್ದು ಕಪ್ಪು ಹಣ ಬಟುವಾಡೆ ಮಾಡಿ ಮೊದಲ ಬಾರಿಗೆ ಶಾಸಕನಾದ ಅನನುಭವಿಯಲ್ಲ. ಹೋರಾಟದ ಹಾದಿಯಲ್ಲಿ ಬೆಳೆದುಬಂದ ಸ್ವತಃ ಕಾನೂನನ್ನು ಅರಿತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಇದಕ್ಕೂ ದೊಡ್ಡ ವಿಪರ್ಯಾಸವೆಂದರೆ ರಾಜ್ಯದಲ್ಲಿ ಆಗುತ್ತಿರುವ ಅತ್ಯಾಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಇವರು ನಿದ್ದೆಮಾಡುತ್ತಿದ್ದರು. ಮುಖ್ಯಮಂತ್ರಿಯವರ, ಗೃಹಸಚಿವರ ಹೇಳಿಕೆಗಳು ಪಕ್ಕಾ ಪಲಾಯನವಾದದ ಹೇಳಿಕೆಗಳಾಗಿವೆ. ಯಾವುದೇ ಅಧಿಕಾರವಿಲ್ಲದ, ಸ್ಥಾನವಿಲ್ಲದ, ಆರ್ಥಿಕ ಬಲವೂ ಇಲ್ಲದ ಒಬ್ಬ ಸಾಮಾನ್ಯ ಮನುಷ್ಯ ಕೈಚೆಲ್ಲಿ ಕುಳಿತಂತೆ ಸರಕಾರವೂ ನಡೆದುಕೊಳ್ಳುತ್ತಿದೆ! ಅಷ್ಟೇ ಅಲ್ಲ ಇದು ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಕನಿಷ್ಠ ಜವಾಬ್ದಾರಿ ಹಾಗೂ ದೂರದೃಷ್ಟಿ ಇಲ್ಲವೆಂಬುದನ್ನೂ ಸಾರಿ ಹೇಳಿದಂತಿದೆ!

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ಹಾಗೂ ಮಕ್ಕಳ ಶೋಶಣೆ ಇಂಥ ಕುಕೃತ್ಯಗಳನ್ನು ತಡೆಯಲು ಕಾನೂನನ್ನು ಬಲವರ್ಧಿಸುವುದು ತಕ್ಷಣದ ಪರಿಹಾರವಾದರೂ ಯಾಕೆ ಇಂತಹ ಘಟನೆಗಳ ಸಂಖ್ಯೆ ಹೆಚ್ಚುತ್ತಿದೆ ಇದರ ಮೂಲಕಾರಣ ಏನು, ಸಮಾಜ ಸ್ವಾಸ್ಥ್ಯ ಕೆಡುತ್ತಿರುವುದರ ಹಿಂದಿರುವ ಕಾರಣಗಳೇನು ಎಂಬುದರ ಮೂಲ ಕಾರಣದ ವಿಶ್ಲೇಷಣೆ (ರೂಟ್ ಕಾಸ್ ಅನಾಲಿಸಿಸ್) ಆಗಬೇಕಿದೆ. ಎಲ್ಲಾ ಜವಾಬ್ದಾರಿಯನ್ನು ಪೋಲೀಸ್ ಇಲಾಖೆಯ ಮೇಲೆ ಹಾಕಿ ಕೈಕಟ್ಟಿ ಕುಳಿತರೆ ಆಗುವುದಿಲ್ಲ. ಪೋಲೀಸ್ ಭಯದಿಂದ ಹೊರಗೆ ನಡೆಯುವ ಅತ್ಯಾಚಾರಗಳು ಕೊಂಚ ಹತೋಟಿಗೆ ಬರುವುದು ಸಾಧ್ಯವಿದೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ ನಾವು ಮಾಧ್ಯಮಗಳಲ್ಲಿ ನೋಡುತ್ತಿರುವ ಪ್ರಕರಣಗಳಿಗೆ ಸೀಮಿತವಾಗಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ನ್ಯಾಷನಲ್ ಫ್ಯಾಮಿಲೀ ಹೆಲ್ತ್ ಸರ್ವೇ) ಮಾಹಿತಿಯ ಪ್ರಕಾರ ಭಾರತದಲ್ಲಿ ೩೫% ಮಹಿಳೆಯರು ಇಂಟಿಮೇಟ್ ಪಾರ್ಟ್ನರ್ ವಯಲೆನ್ಸ್’ (Intimate partner violence) ಅನುಭವಿಸಿದ್ದಾರೆ. ಅಂದರೆ ತನ್ನ ಪತಿ ಅಥವಾ ಸಂಗಾತಿಯಿಂದಲೇ ದೌರ್ಜನ್ಯವನ್ನು ಅನುಭವಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರುವ ಇಂತಹ ಅದೆಷ್ಟೋ ದೌರ್ಜನ್ಯಗಳು ನಿಲ್ಲಲ್ಲು ಮನಃಸ್ಥಿತಿಯ ಬದಲಾವಣೆಯ ಅಗತ್ಯವಿದೆ. ಅದು ಕೇವಲ ಕಾನೂನಿನ ಭಯದಿಂದಾಗುವ ಬದಲಾವಣೆಯಲ್ಲಜ್ಞಾನದಿಂದ ಹಾಗೂ ಉತ್ತಮ ಸಾಮಾಜಿಕ ವಾತಾವರಣದಿಂದಾಗಬಹುದಾದ ಬದಲಾವಣೆ.

ಇವತ್ತು ಅತ್ಯಾಚಾರದ ಆರೋಪವನ್ನೆದುರಿಸುತ್ತಿರುವವರಲ್ಲಿ ಪುಂಡ ಪೋಕರಿಗಳಿಂದ ಹಿಡಿದು ಶಿಕ್ಷಕರು, ಅಧಿಕಾರಿಗಳು, ಶಾಸಕರು, ವೈದ್ಯರು, ಧರ್ಮಗುರುಗಳು, ಸಂತರು (ಸಂತರೆಂದು ಘೋಷಿಸಿಕೊಂಡವರೆಂದು ಹೇಳುವುದು ಹೆಚ್ಚು ಸಮಂಜಸ) ಹೀಗೆ ಹಲವಾರು ಗೌರವಯುತ ಸ್ಥಾನಗಳನ್ನಲಂಕರಿಸಿದವರೂ, ಉನ್ನತ ಶಿಕ್ಷಣವನ್ನು ಪಡೆದವರೂ ಇದ್ದಾರೆ. ಅಂದರೆ ನಮ್ಮ ಶಿಕ್ಷಣ ನಮ್ಮನ್ನು ಓದು ಬರಹ ಬಲ್ಲವರನ್ನಾಗಿಸಿದೆಯೇ ಹೊರತು ನಿಜಾರ್ಥದಲ್ಲಿ ಮಾನವರನ್ನಾಗಿಸಲಿಲ್ಲ! ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಜೀವನಮೌಲ್ಯಗಳನ್ನು ಅಳವಡಿಸುವತ್ತ ಗಮನ ಇಲ್ಲದಿರುವುದು ಇದಕ್ಕೆ ಒಂದು ಕಾರಣ.
ಇನ್ನು ಲೈಂಗಿಕ ಶಿಕ್ಷಣ ಅವಶ್ಯಕತೆಯೂ ಇದೆ. ಲೈಂಗಿಕ ಶಿಕ್ಷಣ ಅಂದರೆ ಕೇವಲ ಮಾನವ ಜನನಾಂಗಳ ಪಾಠವಲ್ಲ (ಆ ಪಾಠವನ್ನೂ ನೀವೇ ಓದಿಕೊಳ್ಳಿ ಎಂದು ಬಿಟ್ಟುಬಿಡುವ ಶಿಕ್ಷಕರೇ ಹೆಚ್ಚು).
ಲೈಂಗಿಕ ಶಿಕ್ಷಣದ ಪಠ್ಯವನ್ನು ತಯಾರಿಸಬೇಕಾದವರು ಕೇವಲ ಜೀವಶಾಸ್ತ್ರದ ಪ್ರಾಧ್ಯಾಪಕರಷ್ಟೇ ಅಲ್ಲ! ಇದರಲ್ಲಿ ಮನಃಶಾಸ್ತ್ರಜ್ಞರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಯಾವ ವಯಸ್ಸಿನಲ್ಲಿ ಯಾವ ಮಾಹಿತಿಯನ್ನು ಹೇಗೆ ಹೇಳಬೇಕು ಎಂಬುದನ್ನು ಮನಃಶಾಸ್ತ್ರಜ್ಞರು ನಿರ್ಧರಿಸಬಲ್ಲರು. ಒಂದು ಮಗುವಿಗೆ ಸುಮಾರು ನಾಲ್ಕನೇ ವಯಸ್ಸಿನಿಂದ ಹಂತ ಹಂತವಾಗಿ ಲೈಂಗಿಕ ಶಿಕ್ಷಣ ಕೊಡಬಹುದು ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಪುರುಷರ ಲೈಂಗಿಕ ಸಂಕೇತಗಳನ್ನು ಸರಳವಾಗಿ ತಿಳಿಹೇಳಬಹುದಾದ ವಿಡಿಯೋಗಳೂ ಲಭ್ಯವಿದೆ. ಇವತ್ತು ಎಷ್ಟೋ ಹೆಣ್ಣುಮಕ್ಕಳಿಗೆ ಈ ಸಂಕೇತಗಳ ಜ್ಞಾನವಿಲ್ಲದಿರುವುದರಿಂದ ಪುರುಷನ ಸಾಮೀಪ್ಯ ಗೆಳೆತನದ್ದೋ ಅಥವಾ ಕೆಟ್ಟ ಆಲೋಚನೆಗಳಿಂದ ಕೂಡಿದ್ದೋ ಎಂದು ಮುಂಚಿತವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ. ಇನ್ನು ಸರಿಯಾದ ರೀತಿಯಲ್ಲಿ ಲೈಂಗಿಕ ಶಿಕ್ಷಣ ನೀಡದಿದ್ದರೆ ಕುತೂಹಲದಿಂದ ಮಕ್ಕಳು ಇಂಟರ್‌ನೆಟ್‍ನ ಮೊರೆ ಹೋಗುತ್ತಾರೆ. ಇದರಿಂದ ವಿಕೃತ ಮನಸ್ಸುಗಳು ತಯಾರಾಗುವ ಸಂಭವವೇ ಹೆಚ್ಚು!

ಮನುಷ್ಯನ ಲೈಂಗಿಕ ವರ್ತನೆಗಳು ಇತರೆ ಪ್ರಾಣಿಗಳಿಗಿಂತ ಬಲು ಭಿನ್ನವಾದದ್ದು. ಖ್ಯಾತ ಮನಃಶಾಸ್ತ್ರಜ್ಞರಾದ ಕ್ಲಿಫೋರ್ಡ್ ಮೋರ್ಗನ್ ಹಾಗೂ ರಿಚರ್ಡ್ ಕಿಂಗ್ ತಮ್ಮ ಇಂಟ್ರೊಡಕ್ಷನ್ ಟು ಸೈಕೋಲಜಿ’ (Introduction to Psychology) ಎಂಬ ಪುಸ್ತಕದಲ್ಲಿ ಮಾನವನ ಲೈಂಗಿಕ ವರ್ತನೆಯ ಬಗ್ಗೆ ವಿವರಿಸುತ್ತಾ ಹೀಗೆ ಬರೆಯುತ್ತಾರೆ - ’ಸ್ತ್ರೀಯರಲ್ಲಿ ದೇಹದ ಈಸ್ಟ್ರೋಜನ್ ಪ್ರಮಾಣ ಮತ್ತು ಲೈಂಗಿಕ ಆಸ್ಕ್ತಿಯ ಬಗೆಗಿನ ಪ್ರಯೋಗಗಳಿಂದ ಹಾರ್ಮೋನುಗಳಿಗೆ ಮತ್ತು ಬೆದೆ ಬರುವುದಕ್ಕೆ ನೇರ ಸಂಬಂಧ ಕಲ್ಪಿಸುವುದು ಸಾಧ್ಯವಾಗಿಲ್ಲ. ಇಲ್ಲಿ ಬಾಹ್ಯ ಸಂಕೇತಗಳು (ಸಿಗ್ನಲ್) ಹೆಚ್ಚು ಕೆಲಸ ಮಾಡುತ್ತವೆ. ಪುರುಷರಲ್ಲಿ ಲೈಂಗಿಕ ಭಾವನೆಗಳು ಹುಟ್ಟಲು ಒಂದು ಪ್ರಮಾಣದ ಟೆಸ್ಟೋಸ್ಟೆರೋನ್ ಬೇಕು. ಆದರೆ ಇದರ ಪ್ರಮಾಣ ಹೆಚ್ಚಾಗುವುದರಿಂದ ಲೈಂಗಿಕ ಆಸಕ್ತಿ ಹೆಚ್ಚಾಗುವುದಿಲ್ಲ! ಪುರುಷನಿಗೆ ಬಾಹ್ಯ ಸಂಕೇತಗಳಿಂದಷ್ಟೇ ಬೆದೆ ಬರುವುದಕ್ಕೆ ಸಾಧ್ಯ! ಈ ಸಂಕೇತಗಳು ಸ್ತ್ರೀಯ ರೂಪ, ಹಾವ-ಭಾವ, ಸ್ವರ, ಉಡುಗೆ ಹಾಗೂ ದೇಹದ ವಾಸನೆಗಳಿಂದ ಹುಟ್ಟಬಹುದು’.

ಇದರ ಹೊರತಾಗಿ ಮನುಷ್ಯನ ಲೈಂಗಿಕ ವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾಗೂ ಬೆದೆ ಬರಿಸುವ ಸಂಕೇತಗಳನ್ನು ಹುಟ್ಟಿಸುವ ಇನ್ನೊಂದು ಅಂಶ ವ್ಯಕ್ತಿಯ ಬಾಲ್ಯದ ಅನುಭವಗಳು! ಇದು ಮನೆ, ಪರಿಸರ ಹಾಗೂ ಸಮಾಜದಲ್ಲಿ ನೋಡಿದ ವಿಷಯಗಳಿಂದ ಮನಸ್ಸಿನ ಮೇಲಾಗುವ ಪರಿಣಾಮಗಳ ಒಟ್ಟು ಪ್ರಭಾವ. ಈ ಅನುಭವಗಳು ನಾವು ಸಾಮಾಜದಲ್ಲಿ ನಡಕೊಳ್ಳುವ ರೀತಿಯ ಮೇಲೆ ಅಗಾಧ ಪ್ರಭಾವ ಬೀರುತ್ತದೆ. ಇದನ್ನು ಮೋರ್ಗನ್ ಮತ್ತು ಕಿಂಗ್ ಸೋಷಲ್ ಮೋಟಿವ್ (social motive) ಅನ್ನುತ್ತಾರೆ. ಯಾಕಂದೆರೆ ಈ ಅನುಭವಗಳು ನಾವು ನಮ್ಮ ಸಮಾಜದಿಂದ ಕಲಿತದ್ದು. ಈ ಅನುಭವಗಳು ನಮ್ಮ ಸಾಧನೆ, ಪ್ರೀತಿ, ತಿರಸ್ಕಾರ, ಆಕ್ರಮಣಶೀಲತೆ, ಸ್ವಾಯತ್ತತೆ, ಪ್ರತಿಕ್ರಿಯೆ, ರಕ್ಷಣೆ ಹೀಗೆ ಹಲವಾರು ನಡೆಗಳನ್ನು/ವರ್ತನೆಗಳನ್ನು ರೂಪಿಸುತ್ತದೆ. ಇದರಲ್ಲಿ ಆಕ್ರಮಣಶೀಲತೆ ಕೆಟ್ಟ ಸ್ವರೂಪವನ್ನು ಪಡೆದಾಗ ಅದು ಹಿಂಸೆ, ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಪ್ರಕರಣಗಳಿಗೆ ಕಾರಣವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಈ ಆಕ್ರಮಣಶೀಲತೆಯ ಮಾದರಿ ವ್ಯಕ್ತಿಗೆ ಸಿಕ್ಕಿದ್ದು ನಮ್ಮ ಸಮಾಜದಿಂದಲೇ! ಅದು ಮನೆಯಲ್ಲಿ ನೋಡಿದ ಅಪ್ಪ ಅಮ್ಮನ ಜಗಳದಿಂದಿರಬಹುದು, ಪರಿಸರದಲ್ಲಿ ನೋಡಿದ ಹೊಡೆದಾಟಗಳಿಂದಿರಬಹುದು, ಧಾರಾವಾಹಿ, ಸಿನೆಮಾ ಅಥವಾ ಅಂತರ್ಜಾಲದಲ್ಲಿ ನೋಡಿದ ಹಿಂಸೆಯಿಂದಿರಬಹುದು, ಅನುಭವಿಸಿದ ಅವಮಾನದಿಂದಿರಬಹುದು ಅಥವಾ ಇನ್ನ್ಯಾವುದೇ ಮಾಧ್ಯಮದಿಂದಿರಬಹುದು!

ಹಾಗಾಗಿ ನಮ್ಮ ಸಮಾಜದಲ್ಲಿ ಯಾವ ಬೆಳವಣಿಗೆಗಳು ಈ ರೀತಿಯ ಕೆಟ್ಟ ಅನುಭವಗಳನ್ನು ಸೃಷ್ಟಿಸುತ್ತಿವೆ, ಯಾವ ಮಾಧ್ಯಮದಿಂದ ಮನುಷ್ಯನ ಮನಸ್ಸಿನ ಮೇಲೆ ನಕಾರಾತ್ಮಕ ಅನುಭವಗಳಾಗುತ್ತಿವೆ ಹಾಗೂ ಇದನ್ನು ತಡೆಗಟ್ಟಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಅಧ್ಯಯನವಾಗಬೇಕು. ಸರಕಾರ ಈ ಕೆಲಸವನ್ನು ಪೋಲೀಸ್ ಇಲಾಖೆಯ ತಲೆಗೆ ಕಟ್ಟುವುದಲ್ಲ. ಅವರಿಗೆ ಸದ್ಯದ ಪರಿಸ್ಥಿತಿಯನ್ನು ಹತೋಟಿಗೆ ತರುವ ತಲೆನೋವು ಈಗಾಗಲೇ ಇದೆ. ಹಾಗೆಂದು ಸಾಹಿತಿಗಳ ಶಿಫಾರಸು ಕೇಳುವುದೂ ಅಲ್ಲ. ಇದರ ಅಧ್ಯಯನಕ್ಕೆ ಸಮಸ್ಯೆಯನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಬಲ್ಲ, ವಿಶ್ಲೇಷಿಸಬಲ್ಲ ತಜ್ಞರ ಅಗತ್ಯತೆಯಿದೆ. ಅಪರಾಧಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು ಹೀಗೆ ವಿವಿಧ ವಿಷಯ ಪರಿಣಿತರಿಂದ ಜಂಟಿಯಾಗಿ ಅಧ್ಯಯನವಾಗಬೇಕು. ಹಾಗೂ ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ನಿದ್ದೆಯಿಂದ ಎಚ್ಚೆತ್ತು ಕೆಲಸ ಮಾಡಬೇಕು.

ಸಮೀರ ಸಿ ದಾಮ್ಲೆ
ಬ್ಯಾಂಕಾಕ್

24 ಜುಲೈ 2014, ಪ್ರಜಾವಾಣಿ. ಬರಹವನ್ನು ಪ್ರಕಟಿಸಿದ ಪ್ರಜಾವಾಣಿಗೆ ಧನ್ಯವಾದಗಳು.


Sunday, July 13, 2014

ಮಾನವನಾಗು...

ಬುದ್ಧಿಜೀವಿಯೆ ಆಗು
ಭಾವಜೀವಿಯೆ ಆಗು
ಜಾತ್ಯಾತೀತನೆ ಆಗು
ಎಡ - ಬಲ
ಪಂಥೀಯನೇ ಆಗು
ಆಸ್ತಿಕನೊ ನಾಸ್ತಿಕನೊ
ಏನಾದರೂ ಸರಿಯೇ
ಮೊದಲು ಮಾನವನಾಗು!


ಕವಿ ಸಿದ್ಧಯ್ಯ ಪುರಾಣಿಕರ 'ಮೊದಲು ಮಾನವನಾಗು' ಎಂಬ ಕವಿತೆ ಪ್ರೇರಣೆಯಿಂದ ಹುಟ್ಟಿದ ಸಾಲುಗಳಿವು

Wednesday, June 18, 2014

ಥೈಲ್ಯಾಂಡ್ ಬಿಕ್ಕಟ್ಟು - ಒಂದು ಒಳನೋಟ

http://www.prajavani.net/article/%E0%B2%A5%E0%B2%BE%E0%B2%AF%E0%B3%8D%E0%B2%B2%E0%B3%86%E0%B2%82%E0%B2%A1%E0%B3%8D%E2%80%8C-%E0%B2%AC%E0%B2%BF%E0%B2%95%E0%B3%8D%E0%B2%95%E0%B2%9F%E0%B3%8D%E0%B2%9F%E0%B3%81-%E0%B2%92%E0%B2%B3%E0%B2%97%E0%B2%BF%E0%B2%A8%E0%B2%B5%E0%B2%B0%E0%B3%8A%E0%B2%AC%E0%B3%8D%E0%B2%AC%E0%B2%B0-%E0%B2%A8%E0%B3%8B%E0%B2%9F

ಥೈಲ್ಯಾಂಡ್ ಬಿಕ್ಕಟ್ಟಿನ ಕುರಿತಾಗಿ ಬರೆದ ಲೇಖನವನ್ನು ಪ್ರಕಟಿಸಿದ ಪ್ರಜಾವಾಣಿಗೆ ಕೃತಜ್ನತೆಗಳು. 
ನನ್ನ ಬರಹದ ಮೂಲ ಪ್ರತಿಯನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. 


ಕಳೆದ ತಿಂಗಳು, ಮೇ ೨೨. ನಾನು ಪ್ಯಾರಿಸ್ ನಲ್ಲಿ ಕಾರ್ಯಾಗಾರವೊಂದರಲ್ಲಿ ಭಾಗವಹಿಸುತ್ತಾ ಇದ್ದೆ. ಬ್ಯಾಂಕಾಕಿನ ಸಹೋದ್ಯೋಗಿಯಿಂದ ಮೊಬೈಲ್ ಕರೆ ಬಂತು; ಉತ್ತರಿಸಲಾಗಲಿಲ್ಲ. ಇನ್ನೆರಡು ನಿಮಿಷಕ್ಕೆ ಸಂದೇಶ ಬಂತು - ’ಥೈಲ್ಯಾಂಡಿನಲ್ಲಿ ತುರ್ತುಪರಿಸ್ಥಿತಿ ಹೇರಿದ್ದಾರೆ; ನಿನ್ನ ಹೆಂಡತಿ ಹಾಗೂ ಮಗಳಿಗೆ ತೀರಾ ಅಗತ್ಯದ ಹೊರತಾಗಿ ವಸತಿ ಸಮುಚ್ಚಯದಿಂದ ಹೊರಹೋಗದಂತೆ ತಿಳಿಸು. ಅಗತ್ಯವಿದ್ದರೆ ನಮ್ಮನ್ನು ಸಂಪರ್ಕಿಸಲು ಹೇಳು. ನಿನಗೆ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಳುಹಿಸುತ್ತಿರುತ್ತೇವೆ’ ಅಂತ. ಭಾರತದ ತುರ್ತುಪರಿಸ್ಥಿತಿಯ ಕಥೆಗಳನ್ನು ಕೇಳಿತಿಳಿದಿದ್ದ ನನಗೆ ಆತಂಕವಾಯಿತು. ಅಷ್ಟರಲ್ಲಿ ಮನೆಯಿಂದ ಬಂದ ’ನಾವು ಸುರಕ್ಷಿತವಾಗಿದ್ದೇವೆ, ಚಿಂತಿಸಬೇಕಾಗಿಲ್ಲ’ ಎಂಬ ಸಂದೇಶ ಮನಸ್ಸಿಗೆ ಸಮಾಧಾನ ತಂದಿತು. ಕಾರ್ಯಾಗಾರ ಮುಗಿಸಿ ಮೇ ೨೪ ರ ಬೆಳಗ್ಗೆ ಪ್ಯಾರಿಸ್ ನಿಂದ ಬ್ಯಾಂಕಾಕಿಗೆ ಬಂದಿಳಿದ ನನಗೆ ಎಲ್ಲೂ ವಿಶೇಷ ಬದಲಾವಣೆಗಳು ಕಾಣಲಿಲ್ಲ. ತಿಂಗಳಿಗೆ ಎರಡು ಮೂರು ಬಾರಿ ಬ್ಯಾಂಕಾಕಿನ ಸುವರ್ಣಭೂಮಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಓಡಾಡುವ ನನಗೆ ಎಲ್ಲೂ ಮಾಮೂಲಿಗಿಂತ ಹೆಚ್ಚಿನ ಪೋಲಿಸರಾಗಲೀ, ಸೈನಿಕರಾಗಲೀ ಕಾಣಲಿಲ್ಲ! ರಸ್ತೆಯಲ್ಲಿ, ಮುಖ್ಯವಾಗಿ ಕೆಲ ಜಂಕ್ಷನ್ ಗಳಲ್ಲಿ ಸ್ವಲ್ಪ ಹೆಚ್ಚು ಸುರಕ್ಷತೆ ಕಂಡುಬಂತೇ ವಿನಃ ಬೇರೇನೂ ಬದಲಾವಣೆ ಕಾಣಲಿಲ್ಲ. ವಾಹನ ದಟ್ಟಣೆ ಮಾಮೂಲಿನಂತೆಯೇ ಇತ್ತು. ನನ್ನ ಕಛೇರಿ ಬ್ಯಾಂಕಾಕಿನ ಮುಖ್ಯ ರಸ್ತೆ ’ಬಿಸಿನೆಸ್ ಸ್ಟ್ರೀಟ್’ ಎಂದೇ ಕರೆಯ್ಪಡುವ ಸಿಲೊಮ್ ರಸ್ತೆಯಲ್ಲಿದೆ. ಸೇನಾಡಳಿತ ಆರಂಭವಾದ ದಿನದಿಂದ ಇಂದಿನವರೆಗೂ ನಮ್ಮ ಕಛೇರಿ ಕೆಲಸಗಳು ನಿರಾತಂಕವಾಗಿ ಸಾಗಿವೆ. ಸಾಮಾನ್ಯ ಜನರ ಬದುಕು ಆತಂಕದಿಂದ ಕೂಡಿಲ್ಲ! ಮುಖ್ಯವಾಗಿ ಮಧ್ಯಮವರ್ಗದವರಲ್ಲಿ ಒಂದು ಹೊಸ ಬೆಳಕು ಕಾಣುವ ಆಕಾಂಕ್ಷೆ ಮೂಡಿದೆ!

ಜೂನ್ ೧೫ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಥಾಮಸ್ ಫ಼ುಲ್ಲರ್ ಅವರ ಲೇಖನವನ್ನೋದಿದರೆ ಥೈಲ್ಯಾಂಡಿನ ಜನ ನಿತ್ಯ ಭಯದಿಂದ ಏಳುತ್ತಾರೇನೋ ಎಂದೆನಿಸಬೇಕು! ಕುತೂಹಲದಿಂದ ಅವನ ಇನ್ನೂ ಕೆಲವು ಲೇಖನಗಳನ್ನು ಓದಿದೆ. ಥೈಲ್ಯಾಂಡಿನ ರಾಜಕೀಯ ಬಿಕ್ಕಟ್ಟಿಗೆ ಅಗತ್ಯಕ್ಕಿಂತ ಹೆಚ್ಚೇ ಬಣ್ಣ ಲೇಪಿಸಿದ್ದು ಕಂಡುಬಂತು. ’ಜನರೆಲ್ಲಾ ಭಯಭೀತರಾಗಿ ಓಡಾಡುತ್ತಿದ್ದಾರೆ, ನಾಗರಿಕರಲ್ಲಿ ಮನೆಮಾಡಿರುವ ಭಯವನ್ನು ಹೋಗಲಾಡಿಸಲು ಅರೆಬರೆ ಬಟ್ಟೆತೊಟ್ಟ ಹುಡುಗಿಯರಿಂದ ರಸ್ತೆಗಳಲ್ಲಿ ಮನರಂಜನಾ ಕಾರ್ಯಕ್ರಮವನ್ನು ಸೇನೆಯವರು ಆಯೋಜಿಸಿದ್ದಾರೆ’ ಎಂದು ಥಾಮಸ್ ಬರೆದಿರುವುದು ಸತ್ಯಕ್ಕೆ ದೂರವಾದ ಮಾತು! ನಾನು ಮೊದಲೇ ಹೇಳಿದಂತೆ ಜನ ಈಗ ಹೆಚ್ಚು ಸಮಾಧಾನದಿಂದಿದ್ದಾರೆ. ಒಳ್ಳೆಯ ಸ್ಥಿರ ಪ್ರಜಾತಂತ್ರ ಆಡಳಿತ ಬೇಗನೇ ಬರಲಿದೆ ಎಂಬ ಆಶಯದಿಂದಿದ್ದಾರೆ. ಇನ್ನು ರಸ್ತೆಯಬದಿಯ ಅರೆಬಟ್ಟೆಯ ನೃತ್ಯ ಶುದ್ಧ ಸುಳ್ಳು! ಥೈಲ್ಯಾಂಡಿನಲ್ಲಿ ಸೆಕ್ಸ್ ಟೂರಿಸಮ್ ಇದೆ, ಸ್ಟ್ರಿಪ್ ಬಾರ್ ಗಳು, ಡ್ಯಾನ್ಸ್ ಬಾರ್ ಗಳು ಇತ್ಯಾದಿ ಇವೆ ನಿಜ; ಆದರೆ ಇವು ನಡೆಯುವ ನಿರ್ದಿಷ್ಟ ಜಾಗಗಳಿವೆ, ನಿರ್ದಿಷ್ಟ ರಸ್ತೆಗಳಿವೆ! ಅಂತಹ ಜಾಗಗಳಲ್ಲಿ ಅಲ್ಲಿನ ಕಾರ್ಯಕ್ರಮಗಳು ದಿನನಿತ್ಯವೂ ಸಾಗುತ್ತಿರುತ್ತವೆ! ಅಷ್ಟೇ ಅಲ್ಲ ಅಂತಹ ಸ್ಥಳಗಳು ವಿದೇಶೀ ಪ್ರವಾಸಿಗರಿಂದಲೇ ತುಂಬಿರುತ್ತವೆ ಎಂಬುದೂ ಅಷ್ಟೇ ಸತ್ಯ! ಸೇನಾಡಳಿತ ಬಂದು ಕರ್ಫ್ಯೂ ಹೇರಲ್ಪಟ್ಟಾಗ ಈ ವ್ಯವಹಾರಗಳು ಕೆಲ ದಿನಗಳ ಕಾಲ ನಿಂತವು. ಕರ್ಫ್ಯೂ ಸಡಿಲವಾಗುತ್ತಿದ್ದಂತೆ ವಿದೇಶೀ ಪ್ರವಾಸಿಗರ ಮನರಂಜನೆ ಮತ್ತೆ ಪ್ರಾರಂಭವಾಗಿದೆ! ಥಾಯ್ ಜನರ ಭಯ ಹೋಗಿಸುವುದಕ್ಕೆ ಅಗತ್ಯವಿರುವುದು ಇಂತಹ ನೃತ್ಯಗಳಲ್ಲ, ಅವರಿಗೆ ಬೇಕಿರುವುದು ಭ್ರಷ್ಟಾಚಾರ ರಹಿತ ಆಡಳಿತ!

ಈ ವರ್ಷದ ಪ್ರಾರಂಭದಲ್ಲಿ ಥೈಲ್ಯಾಂಡಿನಲ್ಲಿ ಆಡಳಿತವಿರೋಧಿ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಥೈಲ್ಯಾಂಡಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ರಂಗು ಹಚ್ಚಿ ವರದಿ ಮಾಡುವುದನ್ನು ಗಮನಿಸಿದ್ದೇನೆ. ಮಾಧ್ಯಮ ದಿಗ್ಗಜರೆನಿಕೊಂಡಿರುವ ಬಿ.ಬಿ.ಸಿ ಹಾಗೂ ಸಿ.ಎನ್.ಎನ್. ಇದನ್ನೇ ಮಾಡುತ್ತಾ ಬಂದಿವೆ. ಅಂತರರಾಷ್ಟ್ರೀಯ ಸುದ್ದಿ ವಾಹಿನಿಗಳು ಎಲ್ಲೋ ಒಂದು ಸರಕಾರಿ ಕಛೇರಿಯ ಮುಂದೆ ನಡೆದ ಕಲ್ಲು ತೂರಾಟವನ್ನು ದಿನವಿಡೀ ತೋರಿಸುತ್ತಾ ಇಡೀ ಬ್ಯಾಂಕಾಕೇ ಪ್ರತಿಭಟನೆಯಿಂದ ಮುಚ್ಚಿಹೋಯಿತೆಂದು ಭಾಸವಾಗುವಂತೆ ತೋರುತ್ತಿದ್ದರೆ ಅದೇ ಬ್ಯಾಂಕಾಕಿನ ಮುಖ್ಯರಸ್ತೆಗಳಲ್ಲಿ (ಪ್ರತಿಭಟನೆಯ ಆರು ಸ್ಥಳಗಳನ್ನು ಹೊರತುಪಡಿಸಿ) ವಾಹನಗಳ ಓಡಾಟ ವ್ಯವಹಾರಗಳು ಎಂದಿನಂತೆ ಸಾಗಿತ್ತು. ಪ್ರತಿಭಟನಾ ಸ್ಥಳಗಳಲ್ಲಿ ವಾಹನ ಸಂಚಾರ ನಿಂತಿತೇ ಹೊರತು ಮೆಟ್ರೋ, ಮೋನೋ ರೈಲು ಓಡಾಟ ನಿಲ್ಲಲಿಲ್ಲ. ಅಂತರರಾಷ್ಟ್ರೀಯ ಮಾಧ್ಯಮಗಳು, ಅಂತರರಾಷ್ಟ್ರೀಯ ಬುದ್ಧಿಜೀವಿಗಳು ಅಮೆರಿಕನ್ ಯಾ ಯುರೋಪಿಯನ್ ದೃಷ್ಟಿಕೋನದಿಂದಲೇ ಇಡೀ ವಿಶ್ವನ್ನು ನೋಡುವುದು, ಅಮೆರಿಕನ್/ಯುರೋಪಿಯನ್ ಸಹಭಾಗಿತ್ವದಿಂದಲೇ ಎಲ್ಲಾ ದೇಶಗಳ ಬಿಕ್ಕಟ್ಟನ್ನು ಸರಿಪಡಿಸುತ್ತೇವೆಂಬ ಭಾವನೆ ಹೊಂದಿರುವುದು ವಿಪರ್ಯಾಸ. ಇವರು ನೆಲದ ಜನರ ಮನಸ್ಸು, ಹಿನ್ನೆಲೆ, ಸಂಸ್ಕೃತಿಯನ್ನೂ ಕೊಂಚ ಅರ್ಥೈಸಿಕೊಳ್ಳಬೇಕು.

ಜನವರಿ ೧೩, ೨೦೧೪ ರಂದು ಸುತೇಪ್ ತೌಗ್ಸುಬಾನ್ ನೇತ್ರತ್ವದಲ್ಲಿ ಬ್ಯಾಂಕಾಕಿನಲ್ಲಿ ಆಡಳಿತ ವಿರೋಧಿ ಪ್ರತಿಭಟನೆ ಆರಂಭವಾದಾಗಲೂ ಜನರ ದೈನಂದಿನ ಬದುಕಿನಲ್ಲಿ ಬದಲಾವಣೆಯ ಅವಶ್ಯಕತೆ ಬರಲಿಲ್ಲ. ಅದು ಶಾಂತಿಯುತ ಪ್ರತಿಭಟನೆಯಾಗಿತ್ತು. ಜನವರಿ ೧೩ರಿಂದ ಎಪ್ರಿಲ್ ೧೦ವರೆ ಬ್ಯಾಂಕಾಕಿನ ಆರು ಪ್ರಮುಖ ಸ್ಥಳಗಳಲ್ಲಿ ನಿರಂತರವಾಗಿ ಹಗಲು ರಾತ್ರಿ ನಡೆದ ಪ್ರತಿಭಟನೆಯಲ್ಲಿ ಕೇವಲ ಒಂದೆರಡು ಹೇಳಬಹುದಾದ ಹಿಂಸೆಯ ಘಟನೆಗಳು ಕಂಡುಬಂದವು. ಆ ಹಿಂಸೆಯೂ ಪ್ರತಿಭಟನಾಕಾರರಿಂದ ನಡೆದಿದ್ದಲ್ಲ, ಸರಕಾರದ ಬೆಂಬೆಲಿಗರಿಂದ ನಡೆದದ್ದು. ಪ್ರತಿಭಟನೆಯ ಸ್ವರೂಪ ಆಕರ್ಷಕವಾಗಿತ್ತು; ಅಲ್ಲೊಂದು ಜಾತ್ರೆಯ ವಾತಾವರಣವಿತ್ತು! ಪ್ರತಿಭಟನಾಕಾರರು ಹಾಕಿದ ವೇದಿಕೆಯ ಮೇಲೆ ಭಾಷಣಗಳಷ್ಟೇ ಅಲ್ಲ ಸಂಗೀತ ನೃತ್ಯಗಳು ನಡೆಯುತ್ತಿದ್ದವು. ಅದರ ಸುತ್ತಲೂ ಹಲವಾರು ಅಂಗಡಿಗಳು. ಅಲ್ಲಿ ಪ್ರತಿಭಟನಾಕಾರರಿಗೆ ಅಗತ್ಯದ ಆಹಾರದ ಮಾರಾಟ, ಹಣ್ಣುಗಳ ಮಾರಾಟ, ಥಾಯ್ ಧ್ವಜದ ಚಿತ್ರವಿರುವ ಹಲವಾರು ನಿತ್ಯ ಉಪಯೋಗದ ವಸ್ತುಗಳು ಮತ್ತು ಆಟಿಕೆಗಳ ಮಾರಾಟ ನಡೆಯುತ್ತಿದ್ದವು. ಪ್ರಮುಖ ಭಾಷಣಗಳ ಸಮಯದಲ್ಲಿ ಪ್ರತಿಭಟನಾಕಾರರಿಗೆ ತಮ್ಮ ಬೆಂಬಲವನ್ನು ಸೂಚಿಸಲು ಸುತ್ತಮುತ್ತಲ ಕಛೇರಿಗಳಿಂದ ಉದ್ಯೋಗಿಗಳು, ಶಾಲಾಕಾಲೇಜುಗಳಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ವರ್ತಕರು ಒಂದೆರಡು ಗಂಟೆಗಳ ಕಾಲ ಪ್ರತಿಭಟನೆಯ ಸ್ಥಳಕ್ಕೆ ಹೋಗಿ ಭಾಗವಹಿಸುತ್ತಿದ್ದರು. ಸೊಂಕ್ರಾನ್ ಹಬ್ಬ (ಥಾಯ್ ಹೊಸವರ್ಷ) ಪ್ರಾರಂಭವಾದಂದಿನಿಂದ ಕಳೆದ ತಿಂಗಳು ಸೇನಾಡಳಿತ ಬರುವವರೆಗೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣಕ್ಕೆ ಪ್ರತಿಭಟನೆಯನ್ನು ಲುಂಪಿನಿ ಉದ್ಯಾನವನಕ್ಕೆ ಸ್ಥಳಾಂತರಿಸಲಾಯಿತು!

ಪ್ರತಿಭಟನೆಗಳು ಶಾಂತಿಯುತವಾಗಿ ನಡೆದರೂ ಅವರ ಬೇಡಿಕೆ ರಾಜತಾಂತ್ರಿಕವಾಗಿ ಒಂದು ದೊಡ್ಡ ಬಿಕ್ಕಟ್ಟಾಯಿತು. ಅವರ ಬೇಡಿಕೆ ಪ್ರಜಾತಾಂತ್ರಿಕ ಪರಿಹಾರವಾಗಿರಲಿಲ್ಲ. ಪ್ರಧಾನಿ ಇಂಗ್ಲಕ್ ಹಾಗೂ ಪ್ರತಿಭಟನೆಯ ನಾಯಕನಾಗಿದ್ದ ಸುತೇಪ್ ನಡುವೆ ಮುಕ್ತ ಚರ್ಚೆ ನಡೆಯಲಿಲ್ಲ. ಹಾಗೆ ನೋಡಿದರೆ ಸೇನಾಡಳಿತವನ್ನು ಜನವರಿಯಲ್ಲೇ ಹೇರಬಹುದಿತ್ತು. ಆದರೆ ಸೇನಾನಾಯಕ ಪ್ರಯುತ್ ರಾಜಕೀಯ ಬಿಕ್ಕಟ್ಟು ಪ್ರಬಲವಾದಾಗಿನಿಂದಲೂ ’ಮಾತುಕತೆಯ ಮೂಲಕ ದೇಶದ ಹಿತಕ್ಕೆ ಧಕ್ಕೆಯಾಗದಂತಹ ಒಂದು ಪರಿಹಾರ ಹುಡುಕಿ’ ಎಂದು ಹೇಳುತ್ತಲೇ ಬಂದಿದ್ದಾನೆ. ’ಯಾವುದೇ ಸಂದರ್ಭದಲ್ಲಿಯೂ ಸೇನೆಯು ಜನರ ಹಿತ ಕಾಪಾಡಲು ಆದ್ಯತೆ ಕೊಡುತ್ತದೆ’ ಇದು ಪ್ರಯುತ್ ನಿರಂತರವಾಗಿ ಹೇಳಿಕೊಂಡು ಬಂದಿರುವ ಮಾತು. ಥೈಲ್ಯಾಂಡಿನ ಸರ್ವೋಚ್ಛ ನ್ಯಾಯಾಲಯ ಅಧಿಕಾರದಿಂದ ಕೆಳಗಿಳಿಯುವಂತೆ ಆದೇಶ ನೀಡಿದ ನಂತರವೂ ಇಂಗ್ಲಕ್ ಅಧಟುತನ ತೋರಿದಾಗ ಸೇನಾಡಳಿತ ಹೇರಲ್ಪಟ್ಟಿತು ಎಂಬುದನ್ನು ಮರೆಯಬಾರದು. ಇಂಗ್ಲಕ್ ಅಥವಾ ಅವಳ ಅಣ್ಣ ಉಚ್ಛಾಟಿತ ಮಾಜಿ ಪ್ರಧಾನಿ ತಕ್ಸಿನ್ ಸರಕಾರಕ್ಕೆ ರೈತರ ದೊಡ್ಡ ಬೆಂಬಲ ಇದ್ದುದು ನಿಜ. ಆದರೆ ಇಂದು ಅದು ಕಡಿಮೆಯಾಗುತ್ತಾ ಇದೆ. ರೈತರು ಸರಕಾರದಿಂದ ಬಾಕಿ ಹಣ ಬರದೆ ಬಸವಳಿದಿದ್ದಾರೆ, ಮಧ್ಯಮ ವರ್ಗ ಹಾಗೂ ಶ್ರೀಮಂತ ವರ್ಗ ಅಣ್ಣ-ತಂಗಿಯರ ಭ್ರಷ್ಟ ಆಡಳಿತ ನೋಡಿ ಸುಸ್ತಾಗಿದ್ದಾರೆ. ಹಾಗೆಂದು ಇಂಗ್ಲಕ್ ಚಿನವತ್ರಾಗೆ ಬೆಂಬಲಿಗರೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಸರಕಾರದ ಪ್ರಮುಖರ ಬಂಧನವಾಗಿದೆ, ಪಲಾಯನಗೈದವರ ಮೇಲೆ ನಿರ್ಬಂಧ ಹೇರಲ್ಪಟ್ಟಿದೆ. ಆದರೆ ಜನರ ಸಂಪೂರ್ಣ ಸ್ವಾತಂತ್ರ್ಯ ಕಳೆದುಹೋಗಿದೆ ಎಂದು ಹೇಳಲಾಗದು. ಇವತ್ತಿಗೂ ಬ್ಯಾಂಕಾಕ್ ಪೋಸ್ಟ್ (ಥೈಲ್ಯಾಂಡಿನ ಪ್ರಮುಖ ಪತ್ರಿಕೆ) ಪತ್ರಿಕೆಯಲ್ಲಿ ಪರ / ವಿರೋಧ ಅಭಿಪ್ರಾಯಗಳೆರಡೂ ಓದಸಿಗುತ್ತದೆ! ಆದಷ್ಟು ಬೇಗ ಪ್ರಜಾತಂತ್ರ ಪುನರ್ ಸ್ಥಾಪಿಸವುದಾಗಿ ಸೇನಾಧ್ಯಕ್ಷ ಹೇಳುತ್ತಿದ್ದಾನೆ. ನಿವೃತ್ತಿಯ ಅಂಚಿನಲ್ಲಿರುವ ಸೇನಾಧ್ಯಕ್ಷನೇ ಥೈಲ್ಯಾಂಡಿನ ಮುಂದಿನ ಪ್ರಧಾನಿಯಾಗಿ ಸ್ವಚ್ಛ ಆಡಳಿತದೊಂದಿಗೆ ದೇಶಕ್ಕೆ ಹೊಸ ಬೆಳಕು ನೀಡಬಹುದೆಂಬ ಆಶಯವೂ ನನ್ನ ಕೆಲ ಥಾಯ್ ಮಿತ್ರರಲ್ಲಿದೆ!

ಸಮೀರ ಸಿ. ದಾಮ್ಲೆ

ಬ್ಯಾಂಕಾಕ್

ಮೋದಿ ಸರ್ಕಾರ್ - ಆಕಾಂಕ್ಷೆಗಳು ಮತ್ತು ಆತಂಕಗಳು

http://www.prajavani.net/article/%E0%B2%AE%E0%B3%8B%E0%B2%A6%E0%B2%BF-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B3%8D-%E0%B2%86%E0%B2%95%E0%B2%BE%E0%B2%82%E0%B2%95%E0%B3%8D%E0%B2%B7%E0%B3%86%E0%B2%97%E0%B2%B3%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%86%E0%B2%A4%E0%B2%82%E0%B2%95%E0%B2%97%E0%B2%B3%E0%B3%81

ಮೇ ೨೨ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಈ ಲೇಖನದ ಮೂಲಪ್ರತಿ ಇಲ್ಲಿದೆ.

ಮಹಾಭಾರತದ ಮಹಾಸಮರ ಎಂದೇ ಬಿಂಬಿಸಲಾದ ಸಾರ್ವತ್ರಿಕ ಚುನಾವಣೆ ಮುಗಿದಿದೆ. ಭಾ.ಜ.ಪ. ಪೂರ್ಣ ಬಹುಮತ ಪಡೆದಿದೆ. ಆದರೆ ಭಾಜಪದ ನಾಯಕರೆನಿಸಿಕೊಂಡವರು ಮರೆಯಬಾರದ ವಿಷಯ - ಇದು ಭಾಜಪದ ಸಾಮೂಹಿಕ ಗೆಲುವಲ್ಲ! ಮೋದಿ ಮಾಡಿದ ಮೋಡಿಯ ಗೆಲುವು ಹಾಗೂ ಕಳೆದ ಹತ್ತು ವರುಷಗಳಲ್ಲಿ ದೇಶ ಕಂಡ ಭ್ರಷ್ಟಾಚಾರ, ಹಗರಣಗಳು ಹಾಗೂ ಬೆಲೆಯೇರಿಕೆಗಳ ಸೋಲು. ರಾಜ್ ದೀಪ್ ಸರ್ದೇಸಾಯ್ ಮಾಡಿದ ಸಂದರ್ಶನದಲ್ಲಿ ರಾಜ್ ಠಾಕ್ರೆ ಹೇಳಿದಂತೆ ಭಾಜಪ ಸೇರಿ ಎಲ್ಲರೂ ಬಯಸಿದ್ದು ಮೋದಿ ಸರಕಾರವನ್ನು, ಕಮಲದ್ದಲ್ಲ. ಈಗ ಮೋದಿಯವರ ಬೆಂಬಲಿಗರು ತಮ್ಮ ಕನಸಿನ ಭಾರತದ ನಿರ್ಮಾಣ ಪ್ರಾರಂಭವಾಯಿತು ಎಂಬ ವಿಜಯೋತ್ಸಾಹದಲ್ಲಿದ್ದರೆ ವಿರೋಧಿಗಳಲ್ಲಿ ಹಲವು ಆತಂಕಗಳು ಮನೆಮಾಡಿವೆ. ಪತ್ರಿಕೆಗಳಲ್ಲಿ, ಸುದ್ದಿವಾಹಿನಿಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಜನರ ಆಕಾಂಕ್ಷೆಗಳ, ಆಸೆಗಳ, ಕನಸುಗಳ ಹಾಗೆಯೇ ಆತಂಕಗಳ, ಚಿಂತೆಗಳ ಚರ್ಚೆಗಳು ಭರದಿಂದ ಸಾಗಿವೆ. ’ಪ್ರಬಲ ನಾಯಕನ ಸುತ್ತ ಆಸೆಗಳು ಮತ್ತು ಭಯಗಳು’ ಎಂಬ ಲೇಖನದಲ್ಲಿ (೧೭ ಮೇ, ಪ್ರಜಾವಾಣಿ) ಹಿರಿಯ ಪತ್ರಕರ್ತ ವಿನೋದ್ ಮೆಹ್ತಾ ಭಯಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು. ಅಚ್ಚರಿಯೆಂದರೆ ಆಸೆ ಆಕಾಂಕ್ಷೆಗಳ ಬಗ್ಗೆ ಚರ್ಚಿಸಲೇ ಇಲ್ಲ!

ಮೋದಿಯವರ ಗೆಲುವಿಗೆ ಪ್ರಮುಖ ಕಾರಣ ಅವರು ಜನತೆಯಲ್ಲಿ ಬಿತ್ತಿದ ಅಭಿವೃದ್ಧಿಯ ಕನಸುಗಳು; ಎಲ್ಲರನ್ನೊಳಗೊಂಡ ಆಡಳಿತ, ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ (’ಇಂಕ್ಲೂಸಿವ್ ಗವರ್ನೆನ್ಸ್’, ’ಮಿನಿಮಮ್ ಗವರ್ನ್ಮೆಂಟ್ ಮಾಕ್ಸಿಮಮ್ ಗವರ್ನೆನ್ಸ್’) ಮುಂತಾದ ಹೊಸ ಕಲ್ಪನೆಗಳು ತನ್ಮೂಲಕವಾಗಿ ಜನರಲ್ಲಿ ಹುಟ್ಟಿಕೊಂಡ ಹೊಸ ಆಸೆಗಳು, ಆಕಾಂಕ್ಷೆಗಳು. ಹಾಗಾಗಿ ಈಗ ಜನತೆಯಲ್ಲಿರುವ ಕೆಲವು ಮುಖ್ಯ ನಿರೀಕ್ಷೆಗಳು - ಭ್ರಷ್ಟಾಚಾರ ನಿರ್ಮೂಲನೆ ಮತ್ತು ಆರ್ಥಿಕ ಸಬಲೀಕರಣ. ಇದಕ್ಕೆ ಮೋದಿಯವರು ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿದ ಐಡಿಯಾಗಳನ್ನು ಜಾರಿಗೊಳಿಸುತ್ತಾರೆಂಬ ಆಕಾಂಕ್ಷೆ.

ಭ್ರಷ್ಟಾಚಾರ ನಿರ್ಮೂಲನೆ: ಯಾವುದೇ ಒಳ್ಳೆಯ ಕೆಲಸ ಮನೆಯಿಂದ ಪ್ರಾರಂಭವಾಗಬೇಕೆಂಬ ಮಾತಿದೆ. ಹಾಗಾಗಿ ಮೋದಿಯವರು ಮೊದಲು ಮಾಡಬೇಕಾದದ್ದು: ೧. ಕಳಂಕಿತರಿಗೆ ಸಂಪುಟದಲ್ಲಿ ಸ್ಥಾನ ಕೊಡದಿರುವುದು, ೨. ಅರ್ಣಬ್ ಜೊತೆಗಿನ ಸಂದರ್ಶನದಲ್ಲಿ ಹೇಳಿದಂತೆ ಮೊದಲಿಗೆ ಚುನಾಯಿತ ಸಂಸದೀಯರ ವಿರುದ್ಧವಿರುವ ಪ್ರಕರಣಗಳ ತ್ವರಿತಗತಿಯ ವಿಚಾರಣೆಗೆ ಪ್ರತ್ಯೇಕ ನ್ಯಾಯಪೀಠ ಸ್ಥಾಪನೆ. ಹೀಗೆ ಮಾಡಿದಾಗ ಶಿಕ್ಷೆಯಾದವರು ಸಂಸತ್ತಿನಿಂದ ಹೊರಹೋಗಲೇ ಬೇಕಾಗುತ್ತದೆ. ಇದು ಇಡೀ ದೇಶಕ್ಕೆ ಒಂದು ಬಹುದೊಡ್ಡ ಸಂದೇಶವಾಗುತ್ತದೆ. ಮುಖ್ಯವಾಗಿ ಈ ನಡೆಯಿಂದ ಭ್ರಷ್ಟ ಅಧಿಕಾರಶಾಹಿ ವರ್ಗಕ್ಕೆ ಮರ್ಮಾಘಾತವಾಗುತ್ತದೆ.
ಅವರು ಹೇಳಿದ ಇನ್ನೊಂದು ವಿಷಯ - ಅಧಿಕಾರಿವರ್ಗದವರನ್ನು ದುಡಿಸಿಕೊಳ್ಳುವುದು. ನಮ್ಮ ಕಾರ್ಪೊರೇಟ್ ಕಂಪನಿಗಳಲ್ಲಿ ಅನುಸರಿಸುವ ಗುರಿ/ಸಾಮರ್ಥ್ಯ ಆಧಾರಿತ ಮೌಲ್ಯಮಾಪನ (ಟಾರ್ಗೆಟ್/ಪರ್ಫಾರ್ಮೆನ್ಸ್ ಓರಿಯೆಂಟೆಡ್ ಎವಾಲ್ಯುವೇಶನ್) ಅಧಿಕಾರಿ ವರ್ಗಕ್ಕೂ ತರಬೇಕು. ನೇಮಕಾತಿಯಲ್ಲಿ ಬೇಕಾದರೆ ಮೀಸಲಾತಿ ಇರಲಿ ಆದರೆ ಭಡ್ತಿಗೆ ಸಾಮರ್ಥ್ಯ ಮಾನದಂಡವಾಗಲಿ! ಎಮ್.ಎನ್.ಸಿ ಗಳಲ್ಲಿ ಕೆಲಸ ಮಾಡುವ ಯುವಕರನ್ನು ನೋಡಿ ’ಈ ಪ್ರಾಯಕ್ಕೇ ಸಾವಿರಗಳಲ್ಲಿ ಲಕ್ಷಗಳಲ್ಲಿ ದುಡಿಯುತ್ತೀರಿ’ ಎಂದು ಭುಸುಗುಡುವ (ಮತ್ತು ಅದನ್ನೇ ಲಂಚ ಕೇಳಲು ನೆಪವಾಗಿಸುವ) ಅಧಿಕಾರಶಾಹಿಗಳು ಸಮಯಕ್ಕೆ ಸರಿಯಾಗಿ ಕೆಲಸ ಪೂರೈಸುವ ಅಗತ್ಯತೆಯನ್ನು ಹಾಗೂ ಮಹತ್ವವನ್ನು ಅರಿತುಕೊಳ್ಳಬೇಕಾಗಿದೆ.
ಇನ್ನೊಂದು ಪ್ರಾಮುಖ್ಯ ಅಂಶ, ಅಸ್ಪಷ್ಟವಾಗಿರುವ ನೀತಿ ನಿಯಮಗಳನ್ನು ಸ್ಪಷ್ಟ ಪಡಿಸುವುಸು. ನಿಯಮಗಳು ಸ್ಪಷ್ಟವಾದಾಗ ಲಂಚಕ್ಕೆ ಅವಕಾಶಗಳು ತಾನಾಗಿಯೇ ಕಡಿಮೆಯಾಗುತ್ತದೆ.
ಭ್ರಷ್ಟಾಚಾರದ ವಿಚಾರದಲ್ಲಿ ನಮ್ಮ ದೇಶದ ಒಂದಷ್ಟು ಜನ (ಮಧ್ಯಮವರ್ಗದವರೂ ಸೇರಿ) ಪ್ರವಾಸಕ್ಕೆ ಹೋಗಿ ನೋಡಿ ಮೆಚ್ಚಿದ ಥಾಯ್ ಲ್ಯಾಂಡನ್ನು ಉದಾಹರಣೆಯಾಗಿ ಕೊಡಬಯಸುತ್ತೇನೆ. ಥಾಯ್ ಲ್ಯಾಂಡಿನಲ್ಲಿ ಸರಕಾರದಿಂದ ಬಿಡುಗಡೆಯಾದ ಹಣದಲ್ಲಿ ಸುಮಾರು ೪೦%
ಭ್ರಷ್ಟಾಚಾರದಿಂದಾಗಿ ಜನತೆಗೆ ತಲುಪುತ್ತಿಲ್ಲವೆಂದು ಅಂದಾಜಿಸಲಾಗಿದೆ. ಅಷ್ಟಾಗಿಯೂ ಇಲ್ಲಿನ ಮೂಲಭೂತ ಸೌಕರ್ಯ ನಮಗಿಂತ ಎಷ್ಟೋ ಮುಂದಿದೆ. ನಮ್ಮಲ್ಲಿ ಭ್ರಷ್ಟಾಚಾರ ೫೦% ರಷ್ಟು ಕಡಿಮೆಯಾದರೂ ನಾವು ಎಲ್ಲಿ ತಲುಪಬಹುದೆಂದು ಊಹಿಸಿ! ಹಾಗಾಗಿ ಭ್ರಷ್ಟಾಚಾರ ನಿರ್ಮೂಲನೆಯ ಒಳ್ಳೆಯ ಕೆಲಸ ಮೇಲ್ಮನೆಯಿಂದಲೇ ಪ್ರಾರಂಭವಾಗಲಿ.

ಆರ್ಥಿಕ ಸಬಲೀಕರಣ: ಇದಕ್ಕೆ ಮೋದಿಯವರು ಕೊಟ್ಟ ಭರವಸೆಗಳು ಮೂಲ ಸೌಕರ್ಯ ವರ್ಧನೆ, ಕೈಗಾರಿಕೋದ್ಯಮಕ್ಕೆ ಉತ್ತೇಜನ. ಇದು ಆದಾಗ ಸಹಜವಾಗಿಯೇ ನಿರುದ್ಯೋಗ ಕಡಿಮೆಯಾಗುತ್ತದೆ, ಪೋಷಕ ವ್ಯವಹಾರಗಳು, ಸಣ್ಣ ವ್ಯಾಪಾರಗಳು ಹೆಚ್ಚುತ್ತವೆ. ರಫ್ತು ಹೆಚ್ಚಾಗುತ್ತದೆ, ರೂಪಾಯಿ ಬಲವಾಗುತ್ತದೆ, ಬ್ಯಾಂಕುಗಳಿಗೆ ಸಾಲ ಮರುಪಾವತಿಯಾಗಿ ಬ್ಯಾಂಕುಗಳ ಆದಾಯ ವೃದ್ಧಿಯಾಗುತ್ತದೆ. ಹಣದುಬ್ಬರ ಸಹಜವಾಗಿಯೇ ಹತೋಟಿಗೆ ಬರುತ್ತದೆ. ಹಾಗಾಗಿ ಮೋದಿಯವರು ಈ ಆಶ್ವಾಸನೆಯನ್ನು ನಿಜಗೊಳಿಸಲೇಬೇಕು.

ಇನ್ನು ಕೆಲ ವಿಷಯಗಳ ಬಗ್ಗೆ ಮೋದಿಯವರು ಮಾತನಾಡಿದ್ದು ಬಹಳ ಕಡಿಮೆ. ಆದರೆ ಸಮಷ್ಠಿಯ ಅಭಿವೃದ್ಧಿಗೆ ಇವು ಅತ್ಯವಶ್ಯಕ. ಅವುಗಳಲ್ಲಿ ಮುಖ್ಯವಾದವು ಶಿಕ್ಷಣ ಮತ್ತು ಆರೋಗ್ಯ.

ಶಿಕ್ಷಣ: ಮೋದಿಯವರು 'ಸ್ಕಿಲ್ ಡೆವಲಪ್ ಮೆಂಟ್ ಬಗ್ಗೆ ಮಾತನಾಡಿದ್ದಾರಾದರೂ ಯಾವ ರೀತಿ ಶಿಕ್ಷಣದ ಸಮಸ್ಯೆಯನ್ನು ನಿಭಾಯಿಸುತ್ತಾರೆಂಬುದು ಸ್ಪಷ್ಟವಾಗಿಲ್ಲ. ಸ್ಕಿಲ್ ಡೆವಲಪ್ ಮೆಂಟ್ ಶಿಕ್ಷಣ ವ್ಯವಸ್ಥೆಯೊಳಗಿನ ಒಂದು ಸಮಸ್ಯೆಯಾದರೆ, ಶಿಕ್ಷಣ ವ್ಯವಸ್ಥೆಯಲ್ಲೇ ಅನೇಕ ಸಮಸ್ಯೆಗಳಿವೆ. ಒಂದೆಡೆ ಯುನೆಸ್ಕೊ ಹೇಳುತ್ತೆ - ಭಾರತದ ಪಠ್ಯಕ್ರಮ ಅತೀ ಮಹತ್ವಾಕಾಂಕ್ಷೆಯಿಂದ ಕೂಡಿದೆ (ಟೂ ಆಂಬೀಷಿಯಸ್) ಅಂತ. ಇನ್ನೊಂದೆಡೆ ಶಿಕ್ಷಕರ ಗುಣಮಟ್ಟದಲ್ಲಿ ಕೊರತೆಯಿದೆ. ಮಕ್ಕಳಿಗೆ ಪ್ರೋತ್ಸಾಹ ಕೊಡುವ ಹೆಸರಲ್ಲಿ ನಮ್ಮ ಮೌಲ್ಯಮಾಪನ ತನ್ನ ಮೌಲ್ಯವನ್ನೇ ಕಳಕೊಂಡಿದೆ. ಇದಲ್ಲದೆ ಜೀವನಮೌಲ್ಯಗಳ ಶಿಕ್ಷಣ ಶಾಲಾ ಪಠ್ಯಕ್ರಮದಿಂದ ದೂರವೇ ಉಳಿದು ’ನಿರ್ಭಯಾ’ ಪ್ರಕರಣದಂತಹ ಭಯಾನಕ ಕೃತ್ಯಗಳು ನಡೆಯುತ್ತಲೇ ಇವೆ. ಇವೆಲ್ಲದರ ಹೊರತಾಗಿ ರಾಜ್ಯಭಾಷೆಯ ಅಥವಾ ಪರಿಸರದ ಭಾಷೆಯ ಶಿಕ್ಷಣಕ್ಕೆ ಸರಕಾರದ ಬೆಂಬಲದ ಅಗತ್ಯವಿದೆ. ರಘುರಾಮ ರಾಜನ್ ವರದಿಯಂತೆ ಗುಜರಾತ್ ರಾಜ್ಯ ಶಿಕ್ಷಣದ ವಿಚಾರದಲ್ಲಿ ಹಿಂದಿರುವುದರಿಂದ, ಈ ವಿಷಯಗಳ ಬಗ್ಗೆ ’ಮೋದಿ ಸರ್ಕಾರ್’ ಯಾವ ರೀತಿಯ ನಿಲುವು ತಳೆಯುತ್ತದೆಯೆಂಬ ಆತಂಕ ಬಹುಜನರಲ್ಲಿದೆ.  ಮೋದಿ ಹಾಕಬಯಸಿರುವ ನವಭಾರತದ ಅಡಿಪಾಯನ್ನು ಗಟ್ಟಿಗೊಳಿಸುವಲ್ಲಿ, ಮುಂದಕ್ಕೆ ಭಾರತವನ್ನು ಎತ್ತರಕ್ಕೇರಿಸುವಲ್ಲಿ ಶಿಕ್ಷಣ ವ್ಯವಸ್ಥೆ ಮಹತ್ತರ ಪಾತ್ರವಹಿಸುತ್ತದೆನ್ನುವುದನ್ನು ಅವರು ಗಮನದಲ್ಲಿಟ್ಟುಕ್ಕೊಳ್ಳಬೇಕು.

ಆರೋಗ್ಯ: ಮೂಲಭೂತ ಸೌಕರ್ಯಗಳಲ್ಲಿ ಆಸ್ಪತ್ರೆಗಳು ಸೇರುತ್ತವಾದರೂ ಆರೋಗ್ಯ ಸಮಸ್ಯೆ ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗಿಲ್ಲ. ವರ್ಲ್ಡ್ ಬ್ಯಾಂಕ್ ನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ೫ ವರ್ಷದೊಳಗಿನ ೭೫%  ಮಕ್ಕಳು ಹಾಗೂ ೫೧% ಮಹಿಳೆಯರು ಅನೀಮಿಯ ಹೊಂದಿದ್ದಾರೆ! ಇದು ಪೌಷ್ಠಿಕ ಆಹಾರದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಶುದ್ಧ ನೀರು, ಸಾಮಾಜಿಕ ನೈರ್ಮಲ್ಯ, ಶೌಚಾಲಯಗಳು ಮುಂತಾದವು ಆರೋಗ್ಯ ಸಮಸ್ಯೆಯಲ್ಲಿ ಅಡಕವಾಗಿದೆ. ಇದರ ಬಗ್ಗೆಯೂ ಮೋದಿಯವರು ಪ್ರಸ್ತಾಪ ಮಾಡಿದ್ದು ಕಡಿಮೆ. ಇದನ್ನು ಯಾವ ರೀತಿ ನಿಭಾಯಿಸುತ್ತಾರೆಂದು ಕಾದು ನೋಡಬೇಕಿದೆ.

ಮೋದಿಯವರಲ್ಲಿ ಭಾರತದ ಬಗ್ಗೆ ಒಂದು ಕನಸಿದೆ; ಹಾಗೆಯೇ ನಮ್ಮೆಲ್ಲರಲ್ಲೂ ಒಂದು ಕನಸಿದೆ, ದೇಶದ ಬಗ್ಗೆ ಹಲವಾರು ಕಲ್ಪನೆಗಳಿವೆ. ಎಲ್ಲರೂ ದೇಶದ ಪ್ರಗತಿಯನ್ನು ಬಯಸುತ್ತೇವೆ. ಒಂದಷ್ಟು ಜನ ಮೋದಿಯವರ ಕನಸಿನಲ್ಲೂ ತಮ್ಮ ಕನಸಿನಲ್ಲೂ ಸಾಮ್ಯತೆ ಕಂಡು ಬೆಂಬಲ ನೀಡಿದ್ದಾರೆ. ಇನ್ನು ಕೆಲವರು ತಮ್ಮ ಕನಸನ್ನು ಸಾಕಾರಗೊಳಿಸಲು ’ಮೋದಿ ಸರ್ಕಾರ್’ ಬೇಕೆಂದು ನಂಬಿ ಬೆಂಬಲಿಸಿದ್ದಾರೆ. ಇನ್ನು ಕೆಲವರು ಬದಲಾವಣೆಗಾಗಿ ಮತ ಚಲಾಯಿಸಿದ್ದಾರೆ. ಆದರೆ ನಾವೆಲ್ಲ ನೆನಪಿನಲ್ಲಿಡಬೇಕಾದ ಒಂದು ಮುಖ್ಯ ಅಂಶ ಅಂದರೆ ಬದಲಾವಣೆ ಇಂದಿನಿಂದ ನಾಳೆಗೆ ಆಗುವುದಿಲ್ಲ. ಅದು ಮೋದಿಯವರೇ ಇರಲಿ ಅಥವಾ ಬೇರೆ ಯಾರೇ ಇರಲಿ. ಒಂದು ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕೆ ವ್ಯವಸ್ಥೆಯ ಭಾಗವಾದವರೆಲ್ಲರಲ್ಲೂ ಬದಲಾವಣೆಯ ಅಗತ್ಯತೆಯ ಅರಿವುಮೂಡಿಸಬೇಕು. ಅಷ್ಟೇ ಅಲ್ಲ  ಭಾರತದಂತಹ ವೈವಿಧ್ಯಮಯ ದೇಶವನ್ನು ಒಂದು ಸೂತ್ರದಲ್ಲಿ ಕಟ್ಟುವುದು ಸಾಧ್ಯವಿಲ್ಲ. ಪ್ರಾದೇಶಿಕ ಆವಶ್ಯಕತೆಗಳಿಗೆ ಸರಿಯಾಗಿ ಸೂತ್ರಗಳೂ ಬದಲಾಗಬೇಕು. ನಮ್ಮ ಮನಸ್ಸಿನಲ್ಲಿರಬೇಕಾದ ಇನ್ನೊಂದು ವಿಚಾರ - ಸರಕಾರದ ಕೆಲಸ ಒಬ್ಬೊಬ್ಬರ ವೈಯಕ್ತಿಕ ಕನಸುಗಳನ್ನು ಪೂರ್ಣಗೊಳಿಸುವುದಲ್ಲ; ನಮ್ಮ ನಮ್ಮ ಕನಸಿನ ಸೌಧವನ್ನು ಕಟ್ಟುವುದು ನಮ್ಮ ಕೆಲಸ. ದೇಶದ ಅಭಿವೃದ್ಧಿ, ಸಬಲೀಕರಣ, ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದತೆ, ಸರ್ವಾಂಗೀಣ ಅಭಿವೃದ್ಧಿ ತನ್ಮೂಲಕ ಪ್ರಜೆಗಳ ಕನಸುಗಳನ್ನು ಸಾಕಾರಗೊಳಿಸಲು ಪೂರಕ ವಾತಾವರಣ ನಿರ್ಮಾಣ ಮಾಡುವುದು ಸರಕಾರದ ಕೆಲಸ.

ಸಮೀರ ಸಿ ದಾಮ್ಲೆ
ಬ್ಯಾಂಕಾಕ್

Thursday, May 15, 2014

ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ



ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಬೇಕೇ ಬೇಡವೇ ಎಂಬುದು ಇಂದು ನಿನ್ನೆಯ ಚರ್ಚೆಯಲ್ಲ. ಕೆಲವು ವರ್ಷಗಳಿಂದ ಹೊಗೆಯಾಡುತ್ತಲೇ ಇತ್ತು. ಮೇ ೫ ರಂದು ಬಂದ ಸುಪ್ರೀಂ ಕೋರ್ಟಿನ ತೀರ್ಪಿನ ಪರಿಣಾಮ ಈ ಚರ್ಚೆಗೆ ಬೆಂಕಿ ಹತ್ತಿತು. ’ಬ್ರಿಟಿಷ್ ಕಾಲದಿಂದ ಇಂದಿನವರೆಗೆ ಶಿಕ್ಷಣ ಹಾಗೂ ಶಿಕ್ಷಣ ಮಾಧ್ಯಮ ಹೇಗೆ ಬಂಡವಾಳಶಾಹಿಗಳ ಅಗತ್ಯತೆಗೆ ಅನುಕೂಲವಾಗುವ ಸ್ವತ್ತಾಯಿತು’ ಹಾಗೂ ’ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಹೇಗೆ ಬಲಪಡಿಸಬಹುದು’ ಈ ಎರಡೂ ವಿಷಯಗಳು ಮೇ ೧೩ ಪ್ರಜಾವಾಣಿಯಲ್ಲಿ ಎರಡು ಪ್ರತ್ಯೇಕ ಲೇಖನಗಳಲ್ಲಿ ಚರ್ಚೆಯಾಗಿವೆ. ಆದರೆ ಇಂಗ್ಲಿಷ್ ಮಾಧ್ಯಮದ ಪ್ರತಿಪಾದನೆಯ ಮುಖ್ಯಕಾರಣ ಚರ್ಚೆಯಾದದ್ದು ಕಡಿಮೆ. ಬಹುತೇಕ ಸಮರ್ಥಕರು ಕೊಡುವ ಕಾರಣಗಳೆಂದರೆ - ಹೆಚ್ಚಿನ ಅವಕಾಶಗಳು, ಕೀಳರಿಮೆ ಹಾಗೂ ಅನುವಾದದ ಸಮಸ್ಯೆಯಿಂದ ಕನ್ನಡದಲ್ಲಿ ಮಾಹಿತಿ ಲಭ್ಯವಿಲ್ಲದಿರುವುದು.
ಅವಕಾಶಗಳು: ಹೆಚ್ಚಿನ ಪೋಷಕರು ಕೊಡುವ ಮುಖ್ಯ ಕಾರಣ ಹೆಚ್ಚಿನ ಅವಕಾಶಗಳು, ಗ್ಲೋಬಲ್ ಒಪರ್ಚುನಿಟಿ. ಸತ್ಯ, ನಿಮ್ಮ ಜ್ನಾನ ಹೆಚ್ಚಿದ್ದಷ್ಟು, ಹೆಚ್ಚು ಭಾಷೆ ಬಂದಷ್ಟು, ನಿಮ್ಮ ಸಂವಹನ ಸಾಮರ್ಥ್ಯ (ಕಮ್ಯುನಿಕೇಶನ್ ಸ್ಕಿಲ್) ಹೆಚ್ಚಾದಷ್ಟು ನಿಮ್ಮನ್ನು ನೀವು ಚೆನ್ನಾಗಿ ಮಾರ್ಕೆಟ್ ಮಾಡಿಕೊಳ್ಳಬಹುದು; ಹಾಗಾಗಿ ನಿಮ್ಮ ಅವಕಾಶಗಳು ಹೆಚ್ಚುತ್ತವೆ. ಜರ್ಮನಿಯಲ್ಲಿ ಕಲಿಯಬೇಕಾದರೆ ಅಥವಾ ಕೆಲಸ ಸಿಗಬೇಕಾದರೆ ಜರ್ಮನ್ ಗೊತ್ತಿರಬೇಕು, ಜಪಾನಿನಲ್ಲಿ ಬದುಕಲು ಜಪಾನಿ ಭಾಷೆ ಕಲಿಯುವುದು ಅನಿವಾರ್ಯ, ಥಾಯ್ ಲ್ಯಾಂಡ್ ನಲ್ಲಿ ವ್ಯವಹಾರ ಮಾಡಲು ಥಾಯ್ ಭಾಷೆ ಅನುಕೂಲಕಾರಿ, ಕೊರಿಯಾದಲ್ಲಿ ಕೊರಿಯನ್, ಫ್ರಾನ್ಸ್ ನಲ್ಲಿ ಫ್ರೆಂಚ್ ಹೀಗೆ ನಿಮಗೆಷ್ಟು ಹೆಚ್ಚು ಭಾಷೆ ಗೊತ್ತೋ ಅಷ್ಟು ಅವಕಾಶಗಳು ಜಾಸ್ತಿ. ಅದೆಷ್ಟೋ ಮಲ್ಟಿನ್ಯಾಷನಲ್ ಕಂಪನಿಗಳಲ್ಲಿ ಭಾಷಾನುವಾದಕರು ಎಂಜಿನಿಯರ್ ಗಳಿಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಪರಿಣಿತ ಭಾಷಾನುವಾದಕರಿಗೆ ’ಶಬ್ದವೊಂದಕ್ಕಿಷ್ಟು’ ಎಂಬಂತೆ ಸಂಭಾವನೆ ಕೊಡಬೇಕಾಗುತ್ತದೆ! ಹಾಗಾದರೆ ಜರ್ಮನ್ ಅಥವಾ ಜಪಾನೀ ಮಾಧ್ಯಮದ ಶಾಲೆ ತೆರೆಯೋಣವೇ? ಪರಿಹಾರ ಅದಲ್ಲ, ಕನಿಷ್ಠ ಒಂದು ವಿದೇಶಿ ಭಾಷೆಯನ್ನು (ಭಾಷೆಯಲ್ಲಿ ಅಲ್ಲ) ಸರಿಯಾಗಿ ಕಲಿಯೋಣ! ಅದು ಇಂಗ್ಲಿಷೇ ಇರಬಹುದು, ಅದನ್ನು ಸರಿಯಾಗಿ ಕಲಿಯೋಣ.
ಇಂಗ್ಲಿಷ್ ಬರುತ್ತಿಲ್ಲವೆಂಬ ಕೀಳರಿಮೆ: ಅದೆಷ್ಟೋ ಹೆತ್ತವರು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವುದಕ್ಕೆ ಕೊಡುವ ಕಾರಣ ’ನನಗೆ ಸರಿಯಾಗಿ ಇಂಗ್ಲಿಷ್ ಬರುತ್ತಿಲ್ಲ, ಹಾಗಾಗಿ ಅವಕಾಶಗಳನ್ನು ಕಳಕೊಂಡೆ’, ’ಇಂಗ್ಲಿಷ್ ಬರದ ಕಾರಣ ನನಗೆ ಮುಜುಗರವಾಗುತ್ತದೆ’, ’ಇಂಜಿನಿಯರಿಂಗ್, ಮೆಡಿಕಲ್ ಸೇರಿದಾಗ ಮೊದಲ ಸೆಮೆಸ್ಟರ್ ಅಥವಾ ವರ್ಷ ತುಂಬಾ ಕಷ್ಟವಾಯಿತು’ ಇತ್ಯಾದಿ. ಒಂದಷ್ಟು ಜನ ಈ ಅನುಭವಗಳಿಂದ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ, ಇನ್ನು ಕೆಲವರು ಸ್ವಪ್ರಯತ್ನದಿಂದ ತಮ್ಮ ಇಂಗ್ಲಿಷ್ ಸಾಮರ್ಥ್ಯ ಬೆಳೆಸಿಕೊಂಡು ಇಂತಹ ಕೀಳರಿಮೆಯಿಂದ ಹೊರಬಂದಿರುತ್ತಾರೆ. (ಪ್ರಜಾವಾಣಿಯಲ್ಲಿ ಕೆಲ ತಿಂಗಳ ಹಿಂದೆ ಬಂದ ’ಮಗನೇ ಕ್ಷಮಿಸು’ ಎಂಬ ಲೇಖನದಲ್ಲಿ ಕೀಳರಿಮೆ ತುಂಬಿ ತುಳುಕುತ್ತಿತ್ತು). ಈ ಸಮಸ್ಯೆಗೆ ಕಾರಣ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವ ಸಾಮರ್ಥ್ಯ ಇರುವ ಶಿಕ್ಷಕರ ಕೊರತೆ. ಸ್ವಾಮೀ, ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸುವವರು ಇಲ್ಲದಿರುವ ಸಮಸ್ಯೆ ನೀಗಿಸಲು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಮಾಜಶಾಸ್ತ್ರ ಎಲ್ಲವನ್ನೂ ಇಂಗ್ಲಿಷ್ ನಲ್ಲಿ ಕಲಿಸುವುದು ಹೇಗೆ ಪರಿಹಾರವಾಗುತ್ತದೆ? ನೀವು ಲಕ್ಷ ತೆತ್ತು ಕಳಿಸುವ ಅದೆಷ್ಟೋ ಇಂಗ್ಲಿಷ್ ಶಾಲೆಗಳೂ ಈ ಸಮಸ್ಯೆಯಿಂದ ಮುಕ್ತವಾಗಿಲ್ಲ. ಹಾಗಾಗಿ ಇಂದಿನ ಅವಶ್ಯಕತೆ ಸಮರ್ಪಕವಾಗಿ (ವ್ಯಾಕರಣವನ್ನೂ ಹಾಗೂ ಸಂವಹನವನ್ನೂ) ಇಂಗ್ಲಿಷ್ ಕಲಿಸಬಲ್ಲ ಶಿಕ್ಷಕರು.

ಕನ್ನಡ-ಇಂಗ್ಲಿಷ್ ಅನುವಾದ: ಮೂರುವರೆ ವರ್ಷದ ನನ್ನ ಮಗಳಿಗೆ ಭೂಮಿಯ ಸುತ್ತುವಿಕೆಯ ಬಗ್ಗೆ ವಿವರಿಸುವಾಗ ವಿಡಿಯೋ ತೋರಿಸೋಣವೆಂದು ಯೂಟ್ಯೂಬ್ ಹುಡುಕಿದೆ. ಒಂದೇ ಒಂದು ಕನ್ನಡ ವಿಡಿಯೋ ಇತ್ತು, ಅದೂ ಚೆನ್ನಾಗಿರಲಿಲ್ಲ. ಮಗಳು ಕನ್ನಡದಲ್ಲಿ ತೋರಿಸೆಂದರೂ ಲಭ್ಯವಿಲ್ಲ. ನಮ್ಮಲ್ಲಿ ಇಂತಹ ಜ್ನಾನವನ್ನು ಕನ್ನಡಕ್ಕೆ ’ಡಬ್ಬಿಂಗ್’ ಮಾಡುವುದಕ್ಕೆ ದೊಡ್ಡ ವಿರೋಧವಿದೆ; ಇನ್ನೊಂದೆಡೆ ಕನ್ನಡ ಸಾಯುತ್ತದೆಂಬ ಕೂಗಿದೆ. ಕನ್ನಡದ ಉಳಿವಿಗೆ ಬೇರೆ ಬೇರೆ ಭಾಷೆಗಳಲ್ಲಿರುವು ಉಪಯುಕ್ತ ಮಾಹಿತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಅಗತ್ಯತೆಯಿದೆ.
ಮೊನ್ನೆ ಗೆಳೆಯರೊಬ್ಬರು ಕನ್ನಡ ಪಠ್ಯಗಳಲ್ಲಿರುವ ಅನುವಾದದ ಇನ್ನೊಂದು ಸಮಸ್ಯೆ ಹೇಳಿದರು. ’ರಬ್ಬರ್ ತಯಾರಿಯ ವಿಧಾನ’ವನ್ನು ಹೈಸ್ಕೂಲಿನಲ್ಲಿ ವಲ್ಕನೀಕರಣ ಅಂತ ಕಲಿತಿದ್ದೆ, ಮುಂದೆ ಆ ಶಬ್ದ ಉಪಯೋಗಕ್ಕೇ ಬರಲಿಲ್ಲ ಹಾಗೂ ಅದನ್ನು ನೆನಪಿಡುವುದೂ ಒಂದು ಸಮಸ್ಯೆ ಅಂತ. ಇಂತಹ ಹಲವು ಉದಾಹರಣೆಗಳು ಕನ್ನಡ ಮಾಧ್ಯಮದ ಪಠ್ಯಗಳಲ್ಲಿ ಕಾಣಸಿಕ್ಕುತ್ತದೆ. ಈ ಸಮಸ್ಯೆ ಬರುವುದು ನಾವು ಪ್ರತಿಯೊಂದು ಹೊಸ ಅನ್ವೇಷಣೆಗೂ ಹೊಸ ವಿಷಯಕ್ಕೂ ಒಂದೊಂದು ಕನ್ನಡ ಶಬ್ದ ತಯಾರಿಸ ಹೊರಟಾಗ. ಉದಾಹರಣೆಗೆ ಕಂಪ್ಯೂಟರ್ ಅನ್ನು ಗಣಕಯಂತ್ರ ಅಂತ ಕರೆಯುವುದಕ್ಕಿಂತ ಕಂಪ್ಯೂಟರ್ ಅನ್ನುವುದೇ ಸೂಕ್ತ. ಮೊಬೈಲ್ ಶಬ್ದಕ್ಕೆ ಒಂದು ಕನ್ನಡ ಶಬ್ದ ಹುಡುಕಬೇಕಾದ ಅವಶ್ಯಕತೆಯಿಲ್ಲ. ಹೀಗೆ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಶಬ್ದಗಳನ್ನು ಎರವಲು ಪಡೆಯುವ ಪರಿಪಾಠವೂ ಇದೆ, ಇದರಲ್ಲಿ ಸಮಸ್ಯೆಯೇನೂ ಕಾಣುವುದಿಲ್ಲ.

ಮಾತೃಭಾಷೆಯ ಕಲಿಕೆ: ನನ್ನ ದೃಷ್ಟಿಯಲ್ಲಿ ಮಾತೃಭಾಷೆ ಅನ್ನುವುದಕ್ಕಿಂತ ಪರಿಸರದ ಭಾಷೆ ಅನ್ನುವುದು ಸೂಕ್ತ. ನಮ್ಮ ಮನೆಯಲ್ಲಿ, ನಮ್ಮ ಪರಿಸರದಲ್ಲಿ ನಿತ್ಯ ಬಳಕೆಯಲ್ಲಿರುವ ಭಾಷೆಯಲ್ಲಿ ಯಾವುದೇ ವಿಷಯವನ್ನು ಗ್ರಹಿಸುವುದು ಹಾಗೂ ಮನನ ಮಾಡುವುದು ಸುಲಭ ಅಷ್ಟೇ ಅಲ್ಲ ಗ್ರಹಿಕೆ ಸಂಪೂರ್ಣವಾಗುತ್ತದೆ. ಹಾಗೆಯೇ ನಮ್ಮ ಮನಸ್ಸಿನಲ್ಲಿ ನಡೆಯುವ ಆಲೋಚನೆಗಳು ವಿಮರ್ಷೆಗಳು ನಮ್ಮ ಪರಿಸರದ ಭಾಷೆಯಲ್ಲೇ ನಡೆಯುತ್ತದೆ. ಹಾಗಾಗಿ ಪ್ರಾಥಮಿಕ ಹಂತದ ಕಲಿಕೆಗೆ ಪರಿಸರದ ಭಾಷೆಯ ಅವಶ್ಯಕತೆಯಿದೆ.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಇನ್ನೊಂದು ಬದಲಾವಣೆ - ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಅಂಗನವಾಡಿ/ಕೆ.ಜಿ ತರಗತಿಯಿಂದ ಕಲಿಸುವ ಅವಶ್ಯಕತೆ. ಇಲ್ಲಿ ಬರೆಯುವುದಕ್ಕಿಂತ ಸಂವಹನಕ್ಕೆ ಪ್ರಾಶಸ್ತ್ಯ ಕೊಡಬೇಕು ಹಾಗೂ ಶಬ್ದಭಂಡಾರ ಹೆಚ್ಚಿಸುವ ಕೆಲಸ ಮಾಡಬೇಕು. ಮನಃಶಾಸ್ತ್ರದ ಸಂಶೋಧನೆಗಳ ಪ್ರಕಾರ ಮೂರರಿಂದ ಆರು ವರುಷದ ಪ್ರಾಯದಲ್ಲಿ ಮಕ್ಕಳು ಅತೀ ಹೆಚ್ಚು ಶಬ್ದಗಳನ್ನು ಕಲಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಮಕ್ಕಳ ಭಾಷಾಸಾಮರ್ಥ್ಯವನ್ನು ಬಲಪಡಿಸುವ ಕೆಲಸ ಶಿಕ್ಷಣದ ಪ್ರಾರಂಭದೊಂದಿಗೇ ಆರಂಭವಾಗಬೇಕು.
ಇದೆಲ್ಲದರ ಹೊರತಾಗಿ ನಮ್ಮ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಚರಿತ್ರೆಯಿಂದ ಕಲಿಯುವುದು ಬಹಳಷ್ಟಿದೆ. ಕನ್ನಡ ಸಂಸೃತಿಯ ಬಗ್ಗೆ, ಚರಿತ್ರೆಯ ಬಗ್ಗೆ ಕನ್ನಡಕ್ಕಿಂತ ಚೆನ್ನಾಗಿ ಯಾವ ಭಾಷೆಯಲ್ಲಿ ಓದಿ ತಿಳಿಯಲು ಸಾಧ್ಯ?
ಹಿರಿಯ ಸಾಹಿತಿಯೊಬ್ಬರು ಹೇಳಿದ ಮಾತೊಂದು ಸಮಂಜಸವೆನಿಸುತ್ತದೆ - ’ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ’.

Saturday, April 5, 2014

ಇಚ್ಛಾಶಕ್ತಿಯುಳ್ಳ ನಾಯಕರು ಬೇಕಾಗಿದ್ದಾರೆ!



ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ, ಪ್ರಚಾರದ ಭರಾಟೆ ತಾರಕಕ್ಕೇರಿದೆ. ಆದರೆ ಪ್ರಚಾರ ಭಾಷಣಗಳನ್ನು ಕೇಳಿದರೆ ನಾವು ಹಾಗೂ ನಮ್ಮ ನಾಯಕರು ಕಳೆದುಹೋದ ದಿನಗಳ ಚಿಂತೆಯಿಂದ ಹೊರಗೆ ಬರಲೇ ಇಲ್ಲವೇನೋ ಎಂದೆನಿಸುತ್ತದೆ. ಎಲ್ಲಿಯವರೆಗೆ ಅಂದರೆ ನಮ್ಮ ಚುನಾವಣಾ ಪ್ರಚಾರಗಳಲ್ಲಿ ಇನ್ನೂ ೧೯೪೮ರ ಗಾಂಧಿ ಹತ್ಯೆಯ ಚರ್ಚೆ ನಡೆಯುತ್ತಿದೆ. ಕೋರ್ಟಿನಿಂದ ಕ್ಲೀನ್ ಚಿಟ್ ಪಡೆದರೂ ಆರ್ ಎಸ್ ಎಸ್ ಕಾಂಗ್ರೆಸ್ ನ ಆರೋಪಗಳಿಂದ ಮುಕ್ತಾಗಿಲ್ಲ. ವಿಪರ್ಯಾಸವೆಂದರೆ ಗಾಂಧೀಜಿಯವರ ಯಾವ ತತ್ವಗಳನ್ನೂ ಪಾಲಿಸದ ಈ ಲಜ್ಜೆಗೇಡಿ ನಾಯಕರಿಗೆ ಚುನಾವಣಾ ಸಮಯ ಬಂದಾಗ ಗಾಂಧೀಜಿ ನೆನಪಾಗುತ್ತಾರೆ. ಇತ್ತ ಇವರು ಆರ್ ಎಸ್ ಎಸ್ ಮೇಲೆ ಅವ್ಯಾಹತ ಆರೋಪಗಳನ್ನು ಮಾಡುತ್ತಿದ್ದಾರೆ; ಆದರೆ ಅತ್ತ ಗಾಂಧೀಜಿಯವರ ದಿವ್ಯಾತ್ಮ ನಾಥೂರಾಮ ಗೋಡ್ಸೆಯನ್ನೇ ಕ್ಷಮಿಸಿ ಅದೆಷ್ಟು ವರ್ಷಗಳಾಯಿತೇನೋ!
ಚುನಾವಣಾ ಪ್ರಚಾರಗಳನ್ನು ಗಮನಿಸಿದರೆ ಕೆಲವೇ ಕೆಲವು ನಾಯಕರು ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಿದ್ದಾರೆ. ಉಳಿದವರೆಲ್ಲಾ ವೈಯಕ್ತಿಕ ದೋಷಾರೋಪಗಳಲ್ಲಿ ಮುಳುಗಿಹೋಗಿದ್ದಾರೆ. ವೈಯಕ್ತಿಕ ಕೆಸರೆರಚಾಟ ಬಿಟ್ಟರೆ ಇವರಿಗೆಲ್ಲಾ ಸುಲಭವಾಗಿ ಸಿಗುವ ಡೈಲ್ಲಾಗ್ ’ಗಾಂಧೀಜಿಯವರ ಕನಸನ್ನು ನನಸು ಮಾಡುತ್ತೇವೆ’! ಇವರ ಮಾತುಗಳನ್ನು ಕೇಳಿದಾಗ ಮೂಡುವ ಸರಳ ಪ್ರಶ್ನೆಗಳು: “ಸ್ವಾಮೀ ನಿಮಗೆ ನಿಮ್ಮದೇ ಕನಸುಗಳೇ ಇಲ್ಲವೇ? ಹೋಗಲಿ ಬಿಡಿ, ಗಾಂಧೀಜಿ ಏನು ಕನಸು ಕಂಡಿದ್ದರು ಎಂದಾದರೂ ಗೊತ್ತಿದೆಯಾ? ಗೊತ್ತಿದ್ದರೆ ಇಂದಿನ ಬದಲಾದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಅವು ಎಷ್ಟು ಸಮಂಜಸ ಹಾಗೂ ಅವುಗಳನ್ನು ಹೇಗೆ ಅಳವಡಿಸಬೇಕು ಎಂದು ಯೋಚಿಸಿದ್ದೀರಾ?”
ನಿಜ ಹೇಳಬೇಕೆಂದರೆ ಈ ಪ್ರಶ್ನೆಗಳನ್ನು ಕೇಳಬೇಕಾಗಿಲ್ಲ. ಇವರಿಗೆ ವೈಯಕ್ತಿಕ ಸ್ವಾರ್ಥದ ಕನಸುಗಳ ಹೊರತು ದೇಶದ ಬಗೆಗೆ ಕನಸುಗಳಿಲ್ಲ ಕಾಳಜಿಯಿಲ್ಲ. ಇವರು ಮಾಡುತ್ತಿರುವ ಯೋಜನೆಗಳನ್ನು ಅವಲೋಕಿಸಿದರೆ ಇದು ಅರ್ಥವಾಗುತ್ತದೆ. ಇವರಿಗೆ ಧರ್ಮದ ಕೊಡುಗೆಗಳನ್ನು (freebies) ಕೊಡುವ ಹೊರತು ಬೇರೇನೂ ತೋಚವುದಿಲ್ಲ. ನಮ್ಮ ಕರ್ನಾಟಕದ ಹೊಸ ಸರಕಾರದ ಯೋಜನೆಗಳನ್ನೇ ಗಮನಿಸಿ. ’ಭಾಗ್ಯ’ದ ಯೋಜನೆಗಳು ಬಂತೇ ಹೊರತು ಹೆಚ್ಚಿನದು ಬರಲಿಲ್ಲ.
ಇನ್ನು ನಮ್ಮ ನಾಯಕರಿಗೆ ಏನು ಕೆಲಸ ಮಾಡುವುದು ಎಂದು ತೋಚುತ್ತಿಲ್ಲವಾದರೆ ಒಂದು ಪಟ್ಟಿ ಮಾಡೋಣ. ಒಬ್ಬ ಸಾಮಾನ್ಯ ವ್ಯಕ್ತಿಯ ಒಂದು ದಿನದ (ಬೆಳಗ್ಗಿನಿಂದ ಸಂಜೆಯವರೆಗಿನ) ದಿನಚರಿಯನ್ನೇ ಆಧಾರವಾಗಿ ತೆಗೆದುಕೊಂಡು ಅದರಲ್ಲಿ ಕಂಡುಬರುವ ಕುಂದು ಕೊರತೆಗಳ ಪಟ್ಟಿ ಮಾಡೋಣ.
1. ಶೌಚಕ್ಕೆ ಸ್ಥಳವಿಲ್ಲ! ನಮ್ಮ ದೇಶದಲ್ಲಿ ಶೇಕಡಾ ೫೦ ಕ್ಕೂ ಹೆಚ್ಚಿನ ಜನರಿಗೆ ಬೆಳಗಿನ ಶೌಚಕ್ಕೆ ಶೌಚಾಲಯಗಳಿಲ್ಲ (2011 ಗಣತಿಯ ಪ್ರಕಾರ).
2. ಇನ್ನು ಅದೆಷ್ಟೋ ಕಡೆ ಶೌಚಾಲಯಗಳಿದ್ದರೂ ಶೌಚಕ್ಕೆ ನೀರಿಲ್ಲ. ಕುಡಿಯುವ ನೀರಿಗೇ ತತ್ವಾರ ಇರಬೇಕಾದರೆ ಇನ್ನು ಶೌಚಕ್ಕೆ ಸ್ನಾನಕ್ಕೆ ನೀರೆಲ್ಲಿಂದ ತರೋಣ ಹೇಳಿ. ಸುಮಾರು 32% ಜನರಿಗಷ್ಟೇ ಶುದ್ಧೀಕರಿಸಿದ ನೀರು ಸಿಗುತ್ತಿದೆ (2011 ಗಣತಿ).
3. ಸ್ನಾನಗ್ರಹಗಳ ಕೊರತೆಯಿಂದ ಇಂದಿಗೂ ಕೆರೆದಂಡೆಗಳಲ್ಲಿ, ಹೊಳೆಬದಿಯಲ್ಲಿ ಸ್ನಾನ ಮಾಡುವವರಿದ್ದಾರೆ.
4. ಇನ್ನು ಪೌಷ್ಠಿಕ ಆಹಾರ - ವರ್ಲ್ಡ್ ಬ್ಯಾಂಕ್ ನ ಸಮೀಕ್ಷೆಯ ಪ್ರಕಾರ ನಮ್ಮ ದೇಶದಲ್ಲಿ ಶೇಕಡಾ 75% 5 ವರ್ಷದೊಳಗಿನ ಮಕ್ಕಳು ಹಾಗೂ 51% ಮಹಿಳೆಯರು ಜನರು ಅನೀಮಿಯ ಹೊಂದಿದ್ದಾರೆ (ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ). ಎಷ್ಟೋ ಜನರಿಗೆ ಇದೊಂದು ತೀವ್ರ ಸಮಸ್ಯೆಯಾಗದೇ ಇರಬಹುದು ಹಾಗಾಗಿ ಗಮನಕ್ಕೆ ಬಾದದೇ ಹೋಗಿರಲೂ ಬಹುದು. ಹಾಗೆಂದು ಒಂದು ರೂಪಾಯಿಯ ಅಕ್ಕಿಯಂಥ ಯೋಜನೆಗಳು ಇದಕ್ಕೆ ಪರಿಹಾರವೇ? ಅಕ್ಕಿಯನ್ನು ಸಂಪಾದಿಸುವ ಮಾರ್ಗ ಒದಗಿಸುವುದು ಅನಿವಾರ್ಯ ಹಾಗೂ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕನಸಿನಲ್ಲಿ ಇದನ್ನು ಹೇಳುತ್ತಾರೆ. ಚೈನೀಸ್ ಗಾದೆಯೊಂದು ಇದನ್ನೇ ಹೇಳುತ್ತದೆ - Give a man a fish and you feed him for a day; teach a man to fish and you feed him for a lifetime.  
5. ಇನ್ನು ನಿತ್ಯ ಕರ್ಮಗಳನ್ನು ಮುಗಿಸಿ ಮುಂದೆ ಹೋಗೋಣ. ಉದ್ಯೋಗ - ಈ ವಿಷಯದಲ್ಲಿ 2013 ರ ಸಮೀಕ್ಷೆಯ ಪ್ರಕಾರ ನಮ್ಮ ಆರ್ಥಿಕ ಪ್ರಗತಿ 5% ಗೆ ಕುಸಿಯಿತು(ದಶಕದಲ್ಲೇ ಕನಿಷ್ಠ) ಹಾಗೂ ನಿರುದ್ಯೋಗಿಗಳ ಸಂಖ್ಯೆ 2% ಹೆಚ್ಚಾಯಿತು. ಕಾರಣ ಉದ್ಯೋಗಾಕಾಂಕ್ಷಿಗಳ ಸಂಖ್ಯೆಗೆ ಸರಿಯಾಗಿ ಉದ್ಯೋಗಾವಕಾಶಗಳು ತಯಾರಾಗಲಿಲ್ಲ; ಅಂದ ಹಾಗೆ ವಾಸಕ್ಕೆ ಸೂರೇ ಇಲ್ಲದವರನ್ನು ಈ ಗಣತಿಯಲ್ಲಿ ಪರಿಗಣಿಸಿಲ್ಲ. ಇಂದು ನಮ್ಮಲ್ಲಿ ಸುಮಾರು 8% ನಿರದ್ಯೋಗಿಗಳಿದ್ದಾರೆ. ಇದು ಇತರೇ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಕಡಿಮೆಯೇ ಇದೆ. ಹಾಗೆಂದು ಭಾರತ ಸರ್ಕಾರ ಪ್ರಕಟಿಸಿರುವ ಮಾಹಿತಿಯ ಆಧಾರದಂತೆ ನಮ್ಮ ದೇಶದ ಸರಾಸರಿ ಆದಾಯ (per capita income)  ಇತರ ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ (ಡೆವಲಪ್ಡ್ ಹಾಗೂ ಡೆವಲಪಿಂಗ್) ದೇಶಗಳಿಗಿಂತ ಕಡಿಮೆ ಇದೆ. ಬರೇ ಕೆಲಸಕ್ಕೆ ಹೋದರೆ ಸಾಲದು, ಉದ್ಯೋಗದಿಂದ ಬರುವ ಸಂಪಾದನೆ ಒಳ್ಳೆಯ ಜೀವನ ನಡೆಸಲು ಸಾಕಾಗಬೇಕು. ಹಾಗಾಗಿ ಕೇವಲ ನಿರುದ್ಯೋಗಿಗಳ ಸಂಖ್ಯೆಯ ಗಣತಿಯಿಂದ ನಾವು ಸುಧಾರಣೆಯ ಹಾದಿಯಲ್ಲಿದ್ದೇವೆಂದು ಹೇಳುವದಕ್ಕಾಗುವುದಿಲ್ಲ. ಸರಾಸರಿ ಆದಾಯ (average income), ಕನಿಷ್ಠ ಆದಾಯ, ಖರೀದಿ ಸಾಮರ್ಥ್ಯ (purchasing power) ಇವುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
6. ಉದ್ಯೋಗ ಹಾಗೂ ಆದಾಯ ಈ ವಿಷಯದಲ್ಲಿ ಇನ್ನೂ ಆಳವಾಗಿ ಅಧ್ಯಯನ ಮಾಡಿದರೆ, ಕೃಷಿ ಕ್ಷೇತ್ರದಲ್ಲಿ ರೈತರಿಗೆ ಸಿಗುತ್ತಿರುವ ಬೆಲೆ ಹಾಗೂ ಮಾರುಕಟ್ಟೆಯ ಬೆಲೆಗಳಲ್ಲಿರುವ ವ್ಯತ್ಯಾಸ, ದಲ್ಲಾಳಿಗಳಿಂದಾಗುವ ಸಮಸ್ಯೆ, ದಲ್ಲಾಳಿಗಳ ಸಮಸ್ಯೆ, ಮುಕ್ತ ಮಾರುಕಟ್ಟೆಗಳ ಪ್ರವೇಶಕ್ಕಿರುವ ಅಡೆತಡೆಗಳು, ರೈತರಿಗೆ ಸಬ್ಸಿಡಿ ಕೊಟ್ಟು ಹಣ ಮಾಡುತ್ತಿರುವ ಅಧಿಕಾರಿಗಳ ಸಮಸ್ಯೆ ಹೀಗೆ ಇನ್ನೊಂದು ಪಟ್ಟಿ ಹುಟ್ಟಿಕೊಳ್ಳುತ್ತದೆ.
7. ಇನ್ನು ಉದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗಿರುವ ಅಡೆತಡೆಗಳು, ಜಟಿಲ/ಸಂಕೀರ್ಣವಾದ ನೀತಿ-ನಿಯಮಗಳು (ಈ ನೀತಿ ನಿಯಮಗಳಿಂದ ಕಾರ್ಮಿಕರಿಗಾಗುವ ಲಾಭ ಅಷ್ಟೇ ಇದೆ, ಇವು ಅಧಿಕಾರಿಗಳ ಹಾಗೂ ರಾಜಕಾರಣಿಗಳ ಕಿಸೆ ತುಂಬಿಸಲಷ್ಟೇ ಸಹಕಾರಿ), ಕಾರ್ಮಿಕರ ಸಮಸ್ಯೆ, ಹೀಗೆ ಒಂದೇ ಎರಡೇ...
8. ರಸ್ತೆ ಹಾಗೂ ಸಾರಿಗೆಯ ಸಮಸ್ಯೆ - ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹಾಗೂ ಸಾರ್ವಜನಿಕ ಸಾರಿಗೆಯ ಕೊರತೆ, ಮಹಾನಗರಗಳಲ್ಲಿ ರಸ್ತೆಯ ಮೇಲೆ ಜಾಗದ ಕೊರತೆ. ಯಥೇಚ್ಚವಾಗಿರುವಂತಹದ್ದು ರಸ್ತೆಗಳಲ್ಲಿ ಗುಂಡಿಗಳು ಮಾತ್ರ.
9. ವೈದ್ಯಕೀಯ ಸೌಕರ್ಯ - ವೈದ್ಯಕೀಯ ಮೂಲಸೌಕರ್ಯಗಳಿಲ್ಲದ ಹಳ್ಳಿಗಳು ಒಂದೆಡೆಯಾದರೆ ಲಂಗು ಲಗಾಮಿಲ್ಲದೆ ಸುಲಿಗೆ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳು ಇನ್ನೊಂದೆಡೆ. ನಮ್ಮ ದೇಶದಲ್ಲಿ ಸ್ಲಮ್ ಗಳಲ್ಲಿ ಹುಟ್ಟುವ ಹತ್ತರಲ್ಲಿ ಒಂದು ಮಗು (1/10th of slum children) ತನ್ನ 5ನೆಯ ಹುಟ್ಟುಹಬ್ಬ ಆಚರಿಸುವತನಕ ಬದುಕುವುದಿಲ್ಲ!
10. ಶಿಕ್ಷಣ: Indian Labour Journal 2013ರ ಆಗೋಷ್ಟ್ ಆವೃತ್ತಿಯ ಪ್ರಕಾರ ನಮ್ಮ ದೇಶದಲ್ಲಿ 47% ಪದವೀಧರರು ಉದ್ಯೋಗಕ್ಕೆ ಅರ್ಹರಲ್ಲ (Unemployable)! ಅದೆಷ್ಟೋ ಹಳ್ಳಿಗಳಲ್ಲಿ ಶಾಲೆಗಳಿಲ್ಲ, ಶಾಲೆಗಳಿದ್ದರೆ ಮೂಲಭೂತ ಸೌಕರ್ಯಗಳಿಲ್ಲ, ಕೊಠಡಿಗಳಿಲ್ಲ, ಅದೂ ಅಕಸ್ಮಾತಾಗಿ ಇದ್ದರೆ ಶಿಕ್ಷಕರಿಲ್ಲ ಇನ್ನು ಎಷ್ಟೋ ಕಡೆ ಶಿಕ್ಷಕರಿಗೆ ವಿಷಯಜ್ನಾನವಿರುವುದಿಲ್ಲ. ಹಿಂದಿನ ಕರ್ನಾಟಕ ಸರಕಾರ ಶಾಲೆಗಳನ್ನು ಮುಚ್ಚಲು ಹೊರಟದ್ದುನ್ನೂ ಮರೆಯುವಂತಿಲ್ಲ. ಇನ್ನೊಂದೆಡೆ ಯುನೆಸ್ಕೋ ಹೇಳುತ್ತೆ ಭಾರತದ ಪಠ್ಯಕ್ರಮ ಅತಿ ಮಹತ್ವಾಕಾಂಕ್ಷೆಯಿಂದ ಕೂಡಿದೆ (Indian curriculum too ambitious)!

ಹೀಗೆ ಒಬ್ಬ ವ್ಯಕ್ತಿಯ ಒಂದು ದಿನದ ದಿನಚರಿಯನ್ನು ಅವಲೋಕಿಸುತ್ತಾ ಹೋದರೆ ಒಂದರ ಹಿಂದೊಂದು ಸಮಸ್ಯೆಗಳು ಬಿಚ್ಚಿಕ್ಕೊಳ್ಳುತ್ತಾ ಹೋಗುತ್ತದೆ. ಒಂದಕ್ಕೊಂದು ಕೊಂಡಿಯಾಗಿ ಬೆಳೆದು ವಿಷವರ್ತುಲವಾಗುತ್ತದೆ.  

ಇವೆಲ್ಲದರ ನಡುವೆ ಸರಕಾರಿ ಸ್ಕೀಮುಗಳಿಗಿಂತ ಹೆಚ್ಚಾಗಿ ಹೊರಬರುತ್ತಿರುವ ಹಗರಣಗಳು ಹಾಗೂ ನಡುನಡುವೆ ರಾಜಕಾರಣದಲ್ಲಿ ಮೂಗು ತೂರಿಸುವ ಸ್ವಯಂಘೋಷಿತ ಬುದ್ಧಿಜೀವಿಗಳ ಶಿಫಾರಸುಗಳು (ನಾಟಕ / ಯಕ್ಷಗಾನದಲ್ಲಿ ವಿದೂಷಕರು ಬಂದಂತೆ) ಕಳವಳ ಹುಟ್ಟಿಸುತ್ತದೆ.

ದುರಂತವೆಂದರೆ ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವ ರಾಜಕೀಯ ನಾಯಕರು ಬಹಳ ಕಡಿಮೆಯಾಗಿದ್ದಾರೆ. ಜಾತಿ, ಧರ್ಮ ಹಾಗೂ ಧರ್ಮದೂಟದ (freebies) ಬಗ್ಗೆ ಮಾತನಾಡುವವರೇ ಹೆಚ್ಚಾಗಿದ್ದಾರೆ. ಎಷ್ಟು ಸಮಯ ತೆರಿಗೆಯ ಹಣದಲ್ಲಿ ಧರ್ಮದೂಟ, ಟಿವಿ ಅಥವಾ ಇನ್ನೇನೋ freebies ಕೊಟ್ಟು ಆಲಸಿಗಳ ಸಂಖ್ಯೆ ಹೆಚ್ಚಿಸುತ್ತೀರಿ? ಎಷ್ಟು ಸಮಯ ತೆರಿಗೆಯ ಹಣದಲ್ಲಿ ಮದುವೆ ಮಾಡಿಸುತ್ತೀರಿ? ಎಷ್ಟು ಸಮಯ ಜಾತಿಯ ಹೆಸರಿನಲ್ಲಿ ಮನಸ್ಸುಗಳನ್ನು ಒಡೆಯುತೀರಿ?

ನಮ್ಮ ದೇಶಕ್ಕಿಂತ ನೈಸರ್ಗಿಕ ಸಂಪತ್ತಿನಲ್ಲಿ, ಬೌದ್ಧಿಕ ಸಂಪತ್ತಿನಲ್ಲಿ ಕಡಿಮೆಯಿರುವ ಅದೆಷ್ಟು ದೇಶಗಳು ನಮಗಿಂತ ಉತ್ತಮ ಮೂಲಭೂತ ಸೌಲಭ್ಯಗಳನ್ನು, ಸಾಮಾಜಿಕ ಭದ್ರತೆಯನ್ನು ಒದಗಿಸುತ್ತವೆ. ನಮ್ಮ ದೇಶಕ್ಕೆ ಬಹು ಹತ್ತಿರದ ಹೋಲಿಕೆಯಿರುವ ಹಾಗೂ ನಮ್ಮಂತೆ ಕೃಷಿ ಆಧಾರಿತವಾಗಿರುವ ಪಕ್ಕದ ಥೈಲ್ಯಾಂಡನ್ನೇ ಉದಾಹರಣೆಯನ್ನಾಗಿ ತೆಗಿದುಕೊಳ್ಳಿ. ಕೃಷಿಯಲ್ಲಿ ಕೈಗಾರಿಕೆಯ ಬಳಕೆ, ಶಿಕ್ಷಣಕ್ಕೆ ಉತ್ತೇಜನ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಒದಗಿಸುವಿಕೆ ಒಂದೆಡೆ ಹಾಗೆಯೇ ಸಣ್ಣ ಹಾಗೂ ಭಾರೀ ಉದ್ಯಮಗಳಿಗೆ ಉತ್ತೇಜನ, ಸ್ವ-ಉದ್ಯೋಗಕ್ಕೆ ಉತ್ತೇಜನ, ವಿದೇಶಿ ಬಂಡವಾಳ ಹೂಡಿಕೆಗೆ ಬೆಂಬಲ ಗಳಿಂದ ಇಂದು ಥೈಲ್ಯಾಂಡ್ ಜಗತ್ತಿನಲ್ಲೇ ಅತಿ ಕಡಿಮೆ ನಿರುದ್ಯೋಗಿಗಳಿರುವ ದೇಶಗಳಲ್ಲೊಂದು (0.56% unemployment rate). ಹಾಗೆಯೇ ಥೈಲ್ಯಾಂಡ್ ನ ಪರ್ ಕ್ಯಾಪಿಟ ಇನ್ ಕಮ್ ಭಾರತದ ಮೂರರಷ್ಟು ಹೆಚ್ಚಿದೆ.

http://www.ritholtz.com/ ವೆಬ್ ಸೈಟ್ ನ ಮಾಹಿತಿಯ ಪ್ರಕಾರ (ಬುದ್ಧಿಜೀವಿಗಳ ಗಮನಕ್ಕೆ - ಇದು ಯಾವುದೇ ಹಿಂದೂ ಸಂಘಟನೆಯ ವೆಬ್ ಸೈಟ್ ಅಲ್ಲ, ವಿಶ್ವದ 15 ಅತಿ ಪ್ರಮುಖ ಅರ್ಥಶಾಸ್ತ್ರದ ಪತ್ರಕರ್ತ ನೆಂದು ಗುರಿತಿಸಿಕೊಂಡಿರುವ ಬಾರಿ ರಿಥೋಲ್ಜ಼್ (Barry Ritholtz) ಎಂಬಾತನ ವೆಬ್ ಸೈಟ್) 1ನೆಯ ಶತಮಾನದಿಂದ 10ನೆಯ ಶತಮಾನದವರೆಗೆ ವಿಶ್ವ ಜಿ ಡಿ ಪಿ (GDP) ಗೆ ಭಾರತದ ಕೊಡುಗೆ ಸುಮಾರು 50% ಇತ್ತು. 18ನೆಯ ಶತಮಾನದ ವೇಳೆಗೆ ಇದು ಸುಮಾರು 20% ಕ್ಕೆ ಕುಸಿಯಿತು. 1ನೆಯ ಶತಮಾನದಿಂದಲೂ ಚೀನಾ ಭಾರತಕ್ಕೆ ಹತ್ತಿರದ ಸ್ಪರ್ಧಿ.  ಕಳೆದೆರಡು ಶತಮಾನದಲ್ಲಿ (ಕೈಗಾರಿಕಾ ಕ್ರಾಂತಿಯಲ್ಲಿ ಭಾಗಿಯಾಗದ) ನಮ್ಮ ಹಾಗೂ ಚೀನಾದ ಪಾಲು ಕುಸಿಯುತ್ತಾ ಹೋಯಿತು. 1990ರಲ್ಲಿ (ಭಾರತ ಹಾಗೂ ಚೀನಾ ಉದಾರೀಕರಣದ ದಾರಿ ಹಿಡಿದ ಸಮಯದಲ್ಲಿ) ಭಾರತ ಹಾಗೂ ಚೀನಾದ ಪಾಲು ಸುಮಾರು 4%. ಇಂದು ಚೀನಾ 18% ಪಾಲು ಹೊಂದಿದ್ದರೆ ನಾವು 7% ದಲ್ಲಿದ್ದೇವೆ.
ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಪ್ರಗತಿ ವಿಪರೀತವಾಗಿ ಕುಂಟುತ್ತಿದೆ. ಅವ್ಯಾಹತವಾಗಿ ನಡೆಯುತ್ತಿರುವ ಹಗರಣಗಳು, ಪ್ರತಿಭಟನೆಗಳಿಂದಲೇ ದೇಶವನ್ನು ಉದ್ಧಾರ ಮಾಡಲು ಹೊರಟಿರುವವರು, ಇಚ್ಛಾಶಕ್ತಿ ಇಲ್ಲದ ಸರಕಾರ, ವಿದೇಶ ಪ್ರವಾಸ ಮಾಡಿ ’ಹಸು ಮೇಯುವುದನ್ನು ನೋಡಿದ’ ವರದಿ ಮಾಡುವ ಬೌಧಿಕ ಮಟ್ಟದ ಜನಪ್ರತಿನಿಧಿಗಳು, ಬೇಜವಾಬ್ದಾರಿ ಹೇಳಿಕೆ ಕೊಡುವ ಮಂತ್ರಿಗಳು ಹಾಗೂ ಮೌನವ್ರತಧಾರಿ ಪ್ರಧಾನಮಂತ್ರಿಗಳಿಂದ ಮುಕ್ತಿ ಬೇಕಿದೆ.
ನಮಗೆ ಬೇಕಿರುವುದು ದೇಶದ ಪ್ರಗತಿಯ ಕುರಿತು ಕನಸುಗಳನ್ನು ಹೊಂದಿದ ನಾಯಕರು; ಹಾಗೂ ಆ ಕನಸುಗಳನ್ನು ಸಾಕಾರಗೊಳಿಸಲು ಯೋಜನೆಗಳನ್ನು ರೂಪಿಸುವ ಚಾಕಚಕ್ಯತೆಯುಳ್ಳವರು ಮತ್ತು ಯೋಜನೆಗಳನ್ನು ಕಾರ್ಯಗತಗೊಳಿಸಲು ಇಚ್ಛಾಶಕ್ತಿಯುಳ್ಳ ನಾಯಕರು. ಹಾಗೂ ದೇಶದ ಆರ್ಥಿಕತೆಯನ್ನು ಸದೃಢಗೊಳಿಸಬಲ್ಲ ಹಾಗೂ ದೇಶವನ್ನು ಸುರಕ್ಷಿತವಾಗಿಸಬಲ್ಲ ಯೋಜನೆಗಳು ಹಾಗೂ ಆಡಳಿತ.

ಸಮೀರ ದಾಮ್ಲೆ
ಬ್ಯಾಂಕಾಕ್



References:

1.    Census India 2011
2.    Indian Labour Journal
3.    Global Employment Trends 2014 – International Labour Organization