Thursday, July 24, 2014

ನಿದ್ದೆಯಿಂದ ಎಚ್ಚೆತ್ತು ಕೆಲಸ ಮಾಡಬೇಕು!



"ಅತ್ಯಾಚಾರಿಗಳ ರಕ್ಷಣೆಗೆ ಸರಕಾರ ನಿಂತಿಲ್ಲ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. ಮೊಕದ್ದಮೆ ದಾಖಲಿಸುವಲ್ಲಿ ಲೋಪ ಎಸಗಿದ ಪೋಲಿಸ್ ಇನ್‍ಸ್ಪೆಕ್ಟರ್ ಅವರನ್ನೂ ಬಂಧಿಸಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ತನಿಖಾಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು. ಇದಕ್ಕಿಂತ ಮತ್ತೇನು ಮಾಡಲು ಸಾಧ್ಯ" ಹೀಗೆ ಹೇಳಿಕೆ ಕೊಟ್ಟದ್ದು ಕಪ್ಪು ಹಣ ಬಟುವಾಡೆ ಮಾಡಿ ಮೊದಲ ಬಾರಿಗೆ ಶಾಸಕನಾದ ಅನನುಭವಿಯಲ್ಲ. ಹೋರಾಟದ ಹಾದಿಯಲ್ಲಿ ಬೆಳೆದುಬಂದ ಸ್ವತಃ ಕಾನೂನನ್ನು ಅರಿತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಇದಕ್ಕೂ ದೊಡ್ಡ ವಿಪರ್ಯಾಸವೆಂದರೆ ರಾಜ್ಯದಲ್ಲಿ ಆಗುತ್ತಿರುವ ಅತ್ಯಾಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ ಇವರು ನಿದ್ದೆಮಾಡುತ್ತಿದ್ದರು. ಮುಖ್ಯಮಂತ್ರಿಯವರ, ಗೃಹಸಚಿವರ ಹೇಳಿಕೆಗಳು ಪಕ್ಕಾ ಪಲಾಯನವಾದದ ಹೇಳಿಕೆಗಳಾಗಿವೆ. ಯಾವುದೇ ಅಧಿಕಾರವಿಲ್ಲದ, ಸ್ಥಾನವಿಲ್ಲದ, ಆರ್ಥಿಕ ಬಲವೂ ಇಲ್ಲದ ಒಬ್ಬ ಸಾಮಾನ್ಯ ಮನುಷ್ಯ ಕೈಚೆಲ್ಲಿ ಕುಳಿತಂತೆ ಸರಕಾರವೂ ನಡೆದುಕೊಳ್ಳುತ್ತಿದೆ! ಅಷ್ಟೇ ಅಲ್ಲ ಇದು ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಕನಿಷ್ಠ ಜವಾಬ್ದಾರಿ ಹಾಗೂ ದೂರದೃಷ್ಟಿ ಇಲ್ಲವೆಂಬುದನ್ನೂ ಸಾರಿ ಹೇಳಿದಂತಿದೆ!

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ಹಾಗೂ ಮಕ್ಕಳ ಶೋಶಣೆ ಇಂಥ ಕುಕೃತ್ಯಗಳನ್ನು ತಡೆಯಲು ಕಾನೂನನ್ನು ಬಲವರ್ಧಿಸುವುದು ತಕ್ಷಣದ ಪರಿಹಾರವಾದರೂ ಯಾಕೆ ಇಂತಹ ಘಟನೆಗಳ ಸಂಖ್ಯೆ ಹೆಚ್ಚುತ್ತಿದೆ ಇದರ ಮೂಲಕಾರಣ ಏನು, ಸಮಾಜ ಸ್ವಾಸ್ಥ್ಯ ಕೆಡುತ್ತಿರುವುದರ ಹಿಂದಿರುವ ಕಾರಣಗಳೇನು ಎಂಬುದರ ಮೂಲ ಕಾರಣದ ವಿಶ್ಲೇಷಣೆ (ರೂಟ್ ಕಾಸ್ ಅನಾಲಿಸಿಸ್) ಆಗಬೇಕಿದೆ. ಎಲ್ಲಾ ಜವಾಬ್ದಾರಿಯನ್ನು ಪೋಲೀಸ್ ಇಲಾಖೆಯ ಮೇಲೆ ಹಾಕಿ ಕೈಕಟ್ಟಿ ಕುಳಿತರೆ ಆಗುವುದಿಲ್ಲ. ಪೋಲೀಸ್ ಭಯದಿಂದ ಹೊರಗೆ ನಡೆಯುವ ಅತ್ಯಾಚಾರಗಳು ಕೊಂಚ ಹತೋಟಿಗೆ ಬರುವುದು ಸಾಧ್ಯವಿದೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ ನಾವು ಮಾಧ್ಯಮಗಳಲ್ಲಿ ನೋಡುತ್ತಿರುವ ಪ್ರಕರಣಗಳಿಗೆ ಸೀಮಿತವಾಗಿಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ನ್ಯಾಷನಲ್ ಫ್ಯಾಮಿಲೀ ಹೆಲ್ತ್ ಸರ್ವೇ) ಮಾಹಿತಿಯ ಪ್ರಕಾರ ಭಾರತದಲ್ಲಿ ೩೫% ಮಹಿಳೆಯರು ಇಂಟಿಮೇಟ್ ಪಾರ್ಟ್ನರ್ ವಯಲೆನ್ಸ್’ (Intimate partner violence) ಅನುಭವಿಸಿದ್ದಾರೆ. ಅಂದರೆ ತನ್ನ ಪತಿ ಅಥವಾ ಸಂಗಾತಿಯಿಂದಲೇ ದೌರ್ಜನ್ಯವನ್ನು ಅನುಭವಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿರುವ ಇಂತಹ ಅದೆಷ್ಟೋ ದೌರ್ಜನ್ಯಗಳು ನಿಲ್ಲಲ್ಲು ಮನಃಸ್ಥಿತಿಯ ಬದಲಾವಣೆಯ ಅಗತ್ಯವಿದೆ. ಅದು ಕೇವಲ ಕಾನೂನಿನ ಭಯದಿಂದಾಗುವ ಬದಲಾವಣೆಯಲ್ಲಜ್ಞಾನದಿಂದ ಹಾಗೂ ಉತ್ತಮ ಸಾಮಾಜಿಕ ವಾತಾವರಣದಿಂದಾಗಬಹುದಾದ ಬದಲಾವಣೆ.

ಇವತ್ತು ಅತ್ಯಾಚಾರದ ಆರೋಪವನ್ನೆದುರಿಸುತ್ತಿರುವವರಲ್ಲಿ ಪುಂಡ ಪೋಕರಿಗಳಿಂದ ಹಿಡಿದು ಶಿಕ್ಷಕರು, ಅಧಿಕಾರಿಗಳು, ಶಾಸಕರು, ವೈದ್ಯರು, ಧರ್ಮಗುರುಗಳು, ಸಂತರು (ಸಂತರೆಂದು ಘೋಷಿಸಿಕೊಂಡವರೆಂದು ಹೇಳುವುದು ಹೆಚ್ಚು ಸಮಂಜಸ) ಹೀಗೆ ಹಲವಾರು ಗೌರವಯುತ ಸ್ಥಾನಗಳನ್ನಲಂಕರಿಸಿದವರೂ, ಉನ್ನತ ಶಿಕ್ಷಣವನ್ನು ಪಡೆದವರೂ ಇದ್ದಾರೆ. ಅಂದರೆ ನಮ್ಮ ಶಿಕ್ಷಣ ನಮ್ಮನ್ನು ಓದು ಬರಹ ಬಲ್ಲವರನ್ನಾಗಿಸಿದೆಯೇ ಹೊರತು ನಿಜಾರ್ಥದಲ್ಲಿ ಮಾನವರನ್ನಾಗಿಸಲಿಲ್ಲ! ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಜೀವನಮೌಲ್ಯಗಳನ್ನು ಅಳವಡಿಸುವತ್ತ ಗಮನ ಇಲ್ಲದಿರುವುದು ಇದಕ್ಕೆ ಒಂದು ಕಾರಣ.
ಇನ್ನು ಲೈಂಗಿಕ ಶಿಕ್ಷಣ ಅವಶ್ಯಕತೆಯೂ ಇದೆ. ಲೈಂಗಿಕ ಶಿಕ್ಷಣ ಅಂದರೆ ಕೇವಲ ಮಾನವ ಜನನಾಂಗಳ ಪಾಠವಲ್ಲ (ಆ ಪಾಠವನ್ನೂ ನೀವೇ ಓದಿಕೊಳ್ಳಿ ಎಂದು ಬಿಟ್ಟುಬಿಡುವ ಶಿಕ್ಷಕರೇ ಹೆಚ್ಚು).
ಲೈಂಗಿಕ ಶಿಕ್ಷಣದ ಪಠ್ಯವನ್ನು ತಯಾರಿಸಬೇಕಾದವರು ಕೇವಲ ಜೀವಶಾಸ್ತ್ರದ ಪ್ರಾಧ್ಯಾಪಕರಷ್ಟೇ ಅಲ್ಲ! ಇದರಲ್ಲಿ ಮನಃಶಾಸ್ತ್ರಜ್ಞರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. ಯಾವ ವಯಸ್ಸಿನಲ್ಲಿ ಯಾವ ಮಾಹಿತಿಯನ್ನು ಹೇಗೆ ಹೇಳಬೇಕು ಎಂಬುದನ್ನು ಮನಃಶಾಸ್ತ್ರಜ್ಞರು ನಿರ್ಧರಿಸಬಲ್ಲರು. ಒಂದು ಮಗುವಿಗೆ ಸುಮಾರು ನಾಲ್ಕನೇ ವಯಸ್ಸಿನಿಂದ ಹಂತ ಹಂತವಾಗಿ ಲೈಂಗಿಕ ಶಿಕ್ಷಣ ಕೊಡಬಹುದು ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಪುರುಷರ ಲೈಂಗಿಕ ಸಂಕೇತಗಳನ್ನು ಸರಳವಾಗಿ ತಿಳಿಹೇಳಬಹುದಾದ ವಿಡಿಯೋಗಳೂ ಲಭ್ಯವಿದೆ. ಇವತ್ತು ಎಷ್ಟೋ ಹೆಣ್ಣುಮಕ್ಕಳಿಗೆ ಈ ಸಂಕೇತಗಳ ಜ್ಞಾನವಿಲ್ಲದಿರುವುದರಿಂದ ಪುರುಷನ ಸಾಮೀಪ್ಯ ಗೆಳೆತನದ್ದೋ ಅಥವಾ ಕೆಟ್ಟ ಆಲೋಚನೆಗಳಿಂದ ಕೂಡಿದ್ದೋ ಎಂದು ಮುಂಚಿತವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ. ಇನ್ನು ಸರಿಯಾದ ರೀತಿಯಲ್ಲಿ ಲೈಂಗಿಕ ಶಿಕ್ಷಣ ನೀಡದಿದ್ದರೆ ಕುತೂಹಲದಿಂದ ಮಕ್ಕಳು ಇಂಟರ್‌ನೆಟ್‍ನ ಮೊರೆ ಹೋಗುತ್ತಾರೆ. ಇದರಿಂದ ವಿಕೃತ ಮನಸ್ಸುಗಳು ತಯಾರಾಗುವ ಸಂಭವವೇ ಹೆಚ್ಚು!

ಮನುಷ್ಯನ ಲೈಂಗಿಕ ವರ್ತನೆಗಳು ಇತರೆ ಪ್ರಾಣಿಗಳಿಗಿಂತ ಬಲು ಭಿನ್ನವಾದದ್ದು. ಖ್ಯಾತ ಮನಃಶಾಸ್ತ್ರಜ್ಞರಾದ ಕ್ಲಿಫೋರ್ಡ್ ಮೋರ್ಗನ್ ಹಾಗೂ ರಿಚರ್ಡ್ ಕಿಂಗ್ ತಮ್ಮ ಇಂಟ್ರೊಡಕ್ಷನ್ ಟು ಸೈಕೋಲಜಿ’ (Introduction to Psychology) ಎಂಬ ಪುಸ್ತಕದಲ್ಲಿ ಮಾನವನ ಲೈಂಗಿಕ ವರ್ತನೆಯ ಬಗ್ಗೆ ವಿವರಿಸುತ್ತಾ ಹೀಗೆ ಬರೆಯುತ್ತಾರೆ - ’ಸ್ತ್ರೀಯರಲ್ಲಿ ದೇಹದ ಈಸ್ಟ್ರೋಜನ್ ಪ್ರಮಾಣ ಮತ್ತು ಲೈಂಗಿಕ ಆಸ್ಕ್ತಿಯ ಬಗೆಗಿನ ಪ್ರಯೋಗಗಳಿಂದ ಹಾರ್ಮೋನುಗಳಿಗೆ ಮತ್ತು ಬೆದೆ ಬರುವುದಕ್ಕೆ ನೇರ ಸಂಬಂಧ ಕಲ್ಪಿಸುವುದು ಸಾಧ್ಯವಾಗಿಲ್ಲ. ಇಲ್ಲಿ ಬಾಹ್ಯ ಸಂಕೇತಗಳು (ಸಿಗ್ನಲ್) ಹೆಚ್ಚು ಕೆಲಸ ಮಾಡುತ್ತವೆ. ಪುರುಷರಲ್ಲಿ ಲೈಂಗಿಕ ಭಾವನೆಗಳು ಹುಟ್ಟಲು ಒಂದು ಪ್ರಮಾಣದ ಟೆಸ್ಟೋಸ್ಟೆರೋನ್ ಬೇಕು. ಆದರೆ ಇದರ ಪ್ರಮಾಣ ಹೆಚ್ಚಾಗುವುದರಿಂದ ಲೈಂಗಿಕ ಆಸಕ್ತಿ ಹೆಚ್ಚಾಗುವುದಿಲ್ಲ! ಪುರುಷನಿಗೆ ಬಾಹ್ಯ ಸಂಕೇತಗಳಿಂದಷ್ಟೇ ಬೆದೆ ಬರುವುದಕ್ಕೆ ಸಾಧ್ಯ! ಈ ಸಂಕೇತಗಳು ಸ್ತ್ರೀಯ ರೂಪ, ಹಾವ-ಭಾವ, ಸ್ವರ, ಉಡುಗೆ ಹಾಗೂ ದೇಹದ ವಾಸನೆಗಳಿಂದ ಹುಟ್ಟಬಹುದು’.

ಇದರ ಹೊರತಾಗಿ ಮನುಷ್ಯನ ಲೈಂಗಿಕ ವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹಾಗೂ ಬೆದೆ ಬರಿಸುವ ಸಂಕೇತಗಳನ್ನು ಹುಟ್ಟಿಸುವ ಇನ್ನೊಂದು ಅಂಶ ವ್ಯಕ್ತಿಯ ಬಾಲ್ಯದ ಅನುಭವಗಳು! ಇದು ಮನೆ, ಪರಿಸರ ಹಾಗೂ ಸಮಾಜದಲ್ಲಿ ನೋಡಿದ ವಿಷಯಗಳಿಂದ ಮನಸ್ಸಿನ ಮೇಲಾಗುವ ಪರಿಣಾಮಗಳ ಒಟ್ಟು ಪ್ರಭಾವ. ಈ ಅನುಭವಗಳು ನಾವು ಸಾಮಾಜದಲ್ಲಿ ನಡಕೊಳ್ಳುವ ರೀತಿಯ ಮೇಲೆ ಅಗಾಧ ಪ್ರಭಾವ ಬೀರುತ್ತದೆ. ಇದನ್ನು ಮೋರ್ಗನ್ ಮತ್ತು ಕಿಂಗ್ ಸೋಷಲ್ ಮೋಟಿವ್ (social motive) ಅನ್ನುತ್ತಾರೆ. ಯಾಕಂದೆರೆ ಈ ಅನುಭವಗಳು ನಾವು ನಮ್ಮ ಸಮಾಜದಿಂದ ಕಲಿತದ್ದು. ಈ ಅನುಭವಗಳು ನಮ್ಮ ಸಾಧನೆ, ಪ್ರೀತಿ, ತಿರಸ್ಕಾರ, ಆಕ್ರಮಣಶೀಲತೆ, ಸ್ವಾಯತ್ತತೆ, ಪ್ರತಿಕ್ರಿಯೆ, ರಕ್ಷಣೆ ಹೀಗೆ ಹಲವಾರು ನಡೆಗಳನ್ನು/ವರ್ತನೆಗಳನ್ನು ರೂಪಿಸುತ್ತದೆ. ಇದರಲ್ಲಿ ಆಕ್ರಮಣಶೀಲತೆ ಕೆಟ್ಟ ಸ್ವರೂಪವನ್ನು ಪಡೆದಾಗ ಅದು ಹಿಂಸೆ, ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಪ್ರಕರಣಗಳಿಗೆ ಕಾರಣವಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಈ ಆಕ್ರಮಣಶೀಲತೆಯ ಮಾದರಿ ವ್ಯಕ್ತಿಗೆ ಸಿಕ್ಕಿದ್ದು ನಮ್ಮ ಸಮಾಜದಿಂದಲೇ! ಅದು ಮನೆಯಲ್ಲಿ ನೋಡಿದ ಅಪ್ಪ ಅಮ್ಮನ ಜಗಳದಿಂದಿರಬಹುದು, ಪರಿಸರದಲ್ಲಿ ನೋಡಿದ ಹೊಡೆದಾಟಗಳಿಂದಿರಬಹುದು, ಧಾರಾವಾಹಿ, ಸಿನೆಮಾ ಅಥವಾ ಅಂತರ್ಜಾಲದಲ್ಲಿ ನೋಡಿದ ಹಿಂಸೆಯಿಂದಿರಬಹುದು, ಅನುಭವಿಸಿದ ಅವಮಾನದಿಂದಿರಬಹುದು ಅಥವಾ ಇನ್ನ್ಯಾವುದೇ ಮಾಧ್ಯಮದಿಂದಿರಬಹುದು!

ಹಾಗಾಗಿ ನಮ್ಮ ಸಮಾಜದಲ್ಲಿ ಯಾವ ಬೆಳವಣಿಗೆಗಳು ಈ ರೀತಿಯ ಕೆಟ್ಟ ಅನುಭವಗಳನ್ನು ಸೃಷ್ಟಿಸುತ್ತಿವೆ, ಯಾವ ಮಾಧ್ಯಮದಿಂದ ಮನುಷ್ಯನ ಮನಸ್ಸಿನ ಮೇಲೆ ನಕಾರಾತ್ಮಕ ಅನುಭವಗಳಾಗುತ್ತಿವೆ ಹಾಗೂ ಇದನ್ನು ತಡೆಗಟ್ಟಲು ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಅಧ್ಯಯನವಾಗಬೇಕು. ಸರಕಾರ ಈ ಕೆಲಸವನ್ನು ಪೋಲೀಸ್ ಇಲಾಖೆಯ ತಲೆಗೆ ಕಟ್ಟುವುದಲ್ಲ. ಅವರಿಗೆ ಸದ್ಯದ ಪರಿಸ್ಥಿತಿಯನ್ನು ಹತೋಟಿಗೆ ತರುವ ತಲೆನೋವು ಈಗಾಗಲೇ ಇದೆ. ಹಾಗೆಂದು ಸಾಹಿತಿಗಳ ಶಿಫಾರಸು ಕೇಳುವುದೂ ಅಲ್ಲ. ಇದರ ಅಧ್ಯಯನಕ್ಕೆ ಸಮಸ್ಯೆಯನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಬಲ್ಲ, ವಿಶ್ಲೇಷಿಸಬಲ್ಲ ತಜ್ಞರ ಅಗತ್ಯತೆಯಿದೆ. ಅಪರಾಧಶಾಸ್ತ್ರಜ್ಞರು, ಮನಃಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು ಹೀಗೆ ವಿವಿಧ ವಿಷಯ ಪರಿಣಿತರಿಂದ ಜಂಟಿಯಾಗಿ ಅಧ್ಯಯನವಾಗಬೇಕು. ಹಾಗೂ ಸಾಮಾಜಿಕ ಪಿಡುಗಾಗಿ ಬೆಳೆಯುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಸರಕಾರ ನಿದ್ದೆಯಿಂದ ಎಚ್ಚೆತ್ತು ಕೆಲಸ ಮಾಡಬೇಕು.

ಸಮೀರ ಸಿ ದಾಮ್ಲೆ
ಬ್ಯಾಂಕಾಕ್

24 ಜುಲೈ 2014, ಪ್ರಜಾವಾಣಿ. ಬರಹವನ್ನು ಪ್ರಕಟಿಸಿದ ಪ್ರಜಾವಾಣಿಗೆ ಧನ್ಯವಾದಗಳು.


Sunday, July 13, 2014

ಮಾನವನಾಗು...

ಬುದ್ಧಿಜೀವಿಯೆ ಆಗು
ಭಾವಜೀವಿಯೆ ಆಗು
ಜಾತ್ಯಾತೀತನೆ ಆಗು
ಎಡ - ಬಲ
ಪಂಥೀಯನೇ ಆಗು
ಆಸ್ತಿಕನೊ ನಾಸ್ತಿಕನೊ
ಏನಾದರೂ ಸರಿಯೇ
ಮೊದಲು ಮಾನವನಾಗು!


ಕವಿ ಸಿದ್ಧಯ್ಯ ಪುರಾಣಿಕರ 'ಮೊದಲು ಮಾನವನಾಗು' ಎಂಬ ಕವಿತೆ ಪ್ರೇರಣೆಯಿಂದ ಹುಟ್ಟಿದ ಸಾಲುಗಳಿವು