Saturday, March 28, 2015

ಎಲ್ ಕೆ ವೈ - ಸಿಂಗಪುರದ ಮಹಾನಾಯಕನಿಗೊಂದು ನುಡಿನಮನ

"This was a small fishing village under Malaysia. He made this a FIRST WORLD country" ಎಂದು ಹೇಳುವಾಗ ಆ ಟ್ಯಾಕ್ಸಿ ಡ್ರೈವರ್ ನ ಮಾತಿನಲ್ಲಿ ಲೀ ಕ್ಯುನ್ ಯೂ (Lee Kuan Yew - LKY) ಕುರಿತಾಗಿದ್ದ ಅಪಾರ ಗೌರವ ಹಾಗೂ ಪ್ರೀತಿ ಎದ್ದು ಕಾಣುತ್ತಿತ್ತು. “He is a man of action, he believed in - action speaks louder than words” ಎನ್ನುತ್ತಿದ್ದ ನಾನು ಭೇಟಿಮಾಡಿದ ಕಂಪನಿಯ ಮ್ಯಾನೇಜರ್. ಒಂದು ದಿನದ ಸಿಂಗಪುರ ಭೇಟಿಯಲ್ಲಿ ನಾನು ಮಾತನಾಡಿಸಿದ, ಭೇಟಿಯಾದ ಪ್ರತಿಯೊಬ್ಬನೂ ಎಲ್.ಕೆ.ವೈ ಯ ಕುರಿತು ಪ್ರಸ್ತಾಪ ಮಾಡಿದ್ದರು, ಅವರೆಲ್ಲರಲ್ಲೂ ಆತನ ಕುರಿತಾದ ಗೌರವ ಆದರ ಕಾಣಿಸುತ್ತಿತ್ತು. ಈ ಗೌರವಾದರಗಳು ಮಾತಿಗಷ್ಟೇ ಸೀಮಿತವಾಗಿರಲಿಲ್ಲ. ಮೊನ್ನೆ ಬುಧವಾರದ ಹೊತ್ತಿಗೆ ಸುಮಾರು 60 ಸಾವಿರ ಜನ ಸಾಲಿನಲ್ಲಿ ನಿಂತು ಕಾದು ಎಲ್.ಕೆ.ವೈ.ಗೆ ಗೌರವ ಸಲ್ಲಿಸಲು ಹೋಗಿದ್ದಾರೆ. ಸಿಂಗಪುರದ ಪಾರ್ಲಿಮೆಂಟ್ ಹೌಸಿನಿಂದ ಹೊರಕ್ಕೆ ಕೆಲ ಕಿಲೋಮೀಟರ್ ಉದ್ದಕ್ಕೆ ಜನರ ಸಾಲು ಬೆಳೆದಿತ್ತು. ಜನ ಹಗಲು ರಾತ್ರಿಯೆನ್ನದೆ ಸುಮಾರು ಎಂಟು ಗಂಟೆಗಳಿಗೂ ಮಿಕ್ಕಿ ಸಾಲಲ್ಲಿ ನಿಂತು ತಮ್ಮ ಅಂತಿಮ ನಮನ ಸಲ್ಲಿಸಿದರು. ಆದರೆ ಎಲ್ಲೂ ನೂಕುನುಗ್ಗಲು ಕಾಣಿಸಲಿಲ್ಲ. ಲೀ ಕಲಿಸಿದ ಸ್ವಚ್ಚತೆ ಶಿಸ್ತು ನಿಯಮಬದ್ಧತೆಯನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು!
ಲೀ ಹುಟ್ಟಿದಾಗ ಸಿಂಗಪುರ ಬ್ರಿಟಿಷ್ ಆಡಳಿತದಲ್ಲಿತ್ತು. ನಂತರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಮೂರು ವರುಷಗಳ ಕಾಲ ಜಪಾನಿನ ಹಿಡೀತಕ್ಕೆ ಬಂತು. ಸಿಂಗಪುರ ಜಪಾನಿನ ಹಿಡಿತದಲ್ಲಿದ್ದಾಗ ಒಬ್ಬ ಜಪಾನಿ ಸೈನಿಕನಿಗೆ ತಲೆಬಗ್ಗಿಸಿ ಗೌರವಿಸದ ಕಾರಣ ಕಪಾಳಮೋಕ್ಷ ಮಾಡಿಸಿಕೊಂಡಿದ್ದ ಲೀ ಆಗಲೇ ನಿರ್ಧರಿಸಿದ್ದರಂತೆ – ಸಿಂಗಪರವನ್ನು ಬ್ರಿಟಿಷರಾಗಲೀ ಜಪಾನಿಯರಾಗಲೀ ಆಳಬಾರದು. ಸಿಂಗಪುರ ಸ್ವತಂತ್ರ ರಾಷ್ಟ್ರವಾಗಬೇಕು ಎಂಬ ಹಾಗೆ. 1949ರಲ್ಲಿ ಕಾನೂನು ಶಿಕ್ಷಣವನ್ನು ಇಂಗ್ಲೆಂಡಿನಲ್ಲಿ ಪೂರೈಸಿ ಸ್ವದೇಶಕ್ಕೆ ಮರಳಿದ ಲೀ 1954 ರಲ್ಲಿ ಕೆಲ ಮಧ್ಯಮವರ್ಗದ ಸಮಾನಮನಸ್ಕ ಶಿಕ್ಷಿತ ಗೆಳೆಯರೊಂದಿಗೆ ’ಪೀಪಲ್ಸ್ ಆಕ್ಷನ್ ಪಾರ್ಟಿ’ ಸ್ಥಾಪಿಸಿದರು. ನಂತರ ಕಮ್ಯೂನಿಷ್ಟ್ ಪರವಾಗಿದ್ದ ವ್ಯಾಪಾರ ಒಕ್ಕೂಟದ ಜೊತೆ ಒಡಂಬಡಿಕೆ ಮಾಡಿಕೊಂಡರು. ಅನುಕೂಲದ ಮದುವೆಯೆಂದು ಲೀ ಕರೆದ ಈ ಒಡಂಬಡಿಕೆಯಿಂದ ಅವರಿಗೆ ಬಲುದೊಡ್ಡ ಬೆಂಬಲ ಸಿಕ್ಕಿತು. ಮುಂದೆ ಬ್ರಿಟಿಷ್ ವಸಾಹತಿನಿಂದ ಸ್ವಾತಂತ್ಯಕ್ಕೋಸ್ಕರ ಮಲೇಷ್ಯಾದ ಜೊತೆ ಸೇರಿಕೊಂಡು ಸ್ವಾತಂತ್ರ್ಯಾನಂತರ ಸ್ವತಂತ್ರ ಸಿಂಗಪುರಕ್ಕೆ ಹೋರಾಡಿ ಸಿಂಗಪುರವನ್ನು ಸ್ವತಂತ್ರ ದೇಶವನ್ನಾಗಿಸಿದ ಹೆಗ್ಗಳಿಕೆ ಲೀ ಗೆ ಸೇರುತ್ತದೆ.
ತದನಂತರ 25 ವರ್ಷ ಪ್ರಧಾನ ಮಂತ್ರಿಯಾಗಿ ಹಾಗೂ ಮುಂದೆ ರಾಜಕೀಯ ಸಲಹೆಗಾರನಾಗಿ ಸಿಂಗಪುರವನ್ನು ಮುಂದುವರಿದ ದೇಶವನ್ನಾಗಿಸಿದ ಹಿರಿಮೆಯೂ ಲೀ ಗೆ ಸೇರುತ್ತದೆ. ಯಾವುದೇ ನೈಸರ್ಗಿಕ ಸಂಪತ್ತಿಲ್ಲದ, ಒಂದು ಕಾಲದಲ್ಲಿ ಕುಡಿಯುವ ನೀರಿಗೂ ಮಲೇಷ್ಯಾವನ್ನು ಅವಲಂಬಿಸಿದ್ದ, ಗಾತ್ರದಲ್ಲಿ ಕೇವಲ ನಮ್ಮ ಬೆಂಗಳೂರಿನಷ್ಟಿರುವ ಸಿಂಗಪುರ ಇಂದು ಭ್ರಷ್ಟಾಚಾರ ರಹಿತವಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹೊಸಮಾದರಿಯ ಕೃಷಿ, ವೈದ್ಯಕೀಯ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಏಷ್ಯಾದ ಇತರೆ ದೇಶಗಳಗಿಂತ ಬಲು ಮುಂದಿದೆ. ಈ ಯಶಸ್ಸಿನ ಹಿಂದೆ ಲೀ ಯ ದೂರದೃಷ್ಟಿ ಇಚ್ಚಾಶಕ್ತಿ ಕ್ರಿಯಾಶೀಲತೆ ಕೊಡುಗೆ ಇದೆ.
ಆದರೆ ಇಷ್ಟೆಲ್ಲಾ ಹೆಗ್ಗಳಿಕೆಯ ಜೊತೆಗೆ ಹಲವು ಅಪವಾದಗಳೂ ಲೀ ಗೆ ಅಂಟಿಕೊಂಡಿವೆ. ಲೀ ತನ್ನ ರಾಜಕೀಯ ಎದುರಾಳಿಗಳನ್ನು ಸುಮ್ಮನೆ ಬಿಟ್ಟದ್ದಿಲ್ಲ. ಲೀಯನ್ನು ವಿರೋಧಿಸಿದವರಲ್ಲಿ ಹಲವರು ದಿವಾಳಿಎದ್ದು ಹೋಗಿದ್ದಾರೆ. ಮಾನನಷ್ಟ ಮೊಕದ್ದಮೆಗಳಲ್ಲಿ ದೊಡ್ಡ ಮೊತ್ತ ತೆತ್ತಿದ್ದಾರೆ! ಇಸ್ಲಾಂ ಧರ್ಮದ ಕುರಿತಾಗಿ ಲೀ ಹೇಳಿದರೆನ್ನಲಾದ ಹೇಳಿಕೆಗಳೂ ವಿವಾದವೆಬ್ಬಿಸಿದ್ದವು.

ಏನೇ ಆದರೂ ಲೀ ಅಸಾಮಾನ್ಯವಾದುದನ್ನು ಮಾಡಿ ತೋರಿದವರು. Third world ದೇಶವೊಂದನ್ನು First world ದೇಶವನ್ನಾಗಿಸಿದವರು. ವ್ಯವಹಾರದ ಮಾತುಕತೆಯ ಕೊನೆಗೆ ಲೀ ಯ ವಿಷಯ ಪ್ರಸ್ತಾಪಿಸಿದ ಮ್ಯಾನೇಜರ್ ’ಲೀ ಅವರು ಸಿಂಗಪುರಕ್ಕೆ ತಂದೆಯಂತಿದ್ದರು’ ಎಂದಾಗ ಅವಳ ಕಣ್ಣಾಲಿಗಳು ತುಂಬಿದ್ದವು.